
ಸುರಪುರ: ಸುರಪುರ ಮತ್ತು ಹುಣಸಗಿ ತಾಲ್ಲೂಕಿನ ಪ್ರಾಗೈತಿಹಾಸಿಕ, ಐತಿಹಾಸಿಕ ಸ್ಥಳಗಳಿಗೆ ಫ್ರಾನ್ಸ್ ದೇಶದ ಪುರಾತ್ವತ್ವ ಶಾಸ್ತ್ರಜ್ಞ ಸರ್ಜಲೆ ಗಿರಿಕ್ ಭೇಟಿ ನೀಡಿದರು.
ಕಳೆದ ಹಲವಾರು ವರ್ಷಗಳಿಂದ ಪುರಾತತ್ವ ಅಧ್ಯಯನದಲ್ಲಿ ತೊಡಗಿರುವ ಗಿರಿಕ್, ವಿಶ್ವದಾದ್ಯಂತ ಸುತ್ತಾಡಿ ಪ್ರಾಗೈತಿಹಾಸಿಕ ನೆಲೆಗಳನ್ನು ವೀಕ್ಷಿಸುತ್ತಿದ್ದಾರೆ. ಭಾರತ ದೇಶದಲ್ಲಿ ಇಂತಹ ಅನೇಕ ನೆಲೆಗಳು ದೊರಕಿರುವ ಕಾರಣ ಅವುಗಳ ಬಗ್ಗೆ ವಿವರವಾದ ಅಧ್ಯಯನ ನಡೆಸಲು ಮಧ್ಯಪ್ರದೇಶದ ಅಮರಕಂಟಕದಲ್ಲಿ ಅವರು ಅಧ್ಯಯನ ಸಂಸ್ಥೆ ತೆರೆದಿದ್ದಾರೆ.
ಮೆಡೋಜ ಟೇಲರ್ ಮತ್ತು ಕೆ. ಪೆದ್ದಯ್ಯ ಅವರು ತಮ್ಮ ಪುಸ್ತಕಗಳಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಗಮನಿಸಿ ಹುಣಸಗಿ, ರಾಜನಕೋಳೂರು, ರಾಯನಪಾಳೆ, ಬೂದಿಹಾಳ, ಹಗರಟಗಿ, ಬೈಚಬಾಳ, ಕೋಡೇಕಲ್, ಕಕ್ಕೇರಾ ಇತರ ಸ್ಥಳಗಳಿಗೆ ಭೇಟಿ ಪ್ರಾಗೈತಿಹಾಸಿಕ ನೆಲೆಗಳನ್ನು ವೀಕ್ಷಿಸಿದರು.
ಇದೇ ಸಂದರ್ಭದಲ್ಲಿ ಅವರು ನಗರದ ಅರಮನೆಗೆ ಭೇಟಿ ನೀಡಿ ಕಟ್ಟಡದ ವಾಸ್ತುಶಿಲ್ಪಕ್ಕೆ ಬೆರಗಾದರು. ಅಧ್ಯಾತ್ಮ ಜೀವಿಗಳೂ ಆದ ಅವರು ಅರಮನೆಯ ಮಹಡಿಯ ಒಂದು ಕೋಣೆಯ ಮಾಡದಲ್ಲಿ ಧ್ಯಾನಕ್ಕೆ ಕುಳಿತರು.
‘ನನಗೆ ರೋಮಾಂಚನವಾಗುತ್ತಿದೆ, ಕಂಪನ ಉಂಟಾಗುತ್ತಿದೆ. ಈ ಸ್ಥಳ ವಿಶೇಷವಾಗಿದೆ. ಅಂತೇಯೇ ಇಲ್ಲಿ ಅರಮನೆ ನಿರ್ಮಿಸಲಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಟೇಲರ್ ಮಂಜಿಲ್ನಲ್ಲಿ ಒಂದು ದಿನ ವಾಸ್ತವ್ಯ ಹೂಡಿದ್ದರು. ಮಂಜಿಲ್ನ ವಾಸ್ತುಶಿಲ್ಪವೂ ವಿಶಿಷ್ಟವಾಗಿದೆ ಎಂದು ಬಣ್ಣಿಸಿದರು. ಕುದುರೆಗುಡ್ಡದ ಮೇಲೆ ಹತ್ತಿ ವೀಕ್ಷಣೆ ಮಾಡಿದರು. ಈ ನಗರ ಪೆರು ದೇಶದ ‘ಲಿಮಾ’ ನಗರ ಹೋಲುತ್ತದೆ ಎಂದರು.
ಸಾಹಿತಿಗಳಾದ ಸಣ್ಣಕ್ಕೆಪ್ಪ ಕೊಂಡಿಕಾರ, ರಾಜಗೋಪಾಲ ವಿಭೂತಿ, ಮರೆಪ್ಪನಾಯಕ ಗುಡ್ಡಕಾಯಿ ಇಲ್ಲಿನ ಇತಿಹಾಸದ ಬಗ್ಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.