ADVERTISEMENT

ವರ್ಷವಾದರೂ ರಚನೆಯಾಗದ ಆಡಳಿತ ಮಂಡಳಿ

ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆ ಇನ್ನೂ ಇಲ್ಲ; ಕಾಣಸಿಗದ ಅಭಿವೃದ್ಧಿ ಕಾರ್ಯ

ಬಿ.ಜಿ.ಪ್ರವೀಣಕುಮಾರ
Published 23 ಸೆಪ್ಟೆಂಬರ್ 2019, 7:53 IST
Last Updated 23 ಸೆಪ್ಟೆಂಬರ್ 2019, 7:53 IST
ಯಾದಗಿರಿ ನಗರಸಭೆ ಕಚೇರಿ ಆವರಣ
ಯಾದಗಿರಿ ನಗರಸಭೆ ಕಚೇರಿ ಆವರಣ   

ಯಾದಗಿರಿ: ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಗೊಂದಲ ವರ್ಷವಾದರೂ ಇನ್ನೂ ಬಗೆಹರಿದಿಲ್ಲ. ಇದರಿಂದಾಗಿ ನಗರ ಮತ್ತು ಪಟ್ಟಣದ ಅಭಿವೃದ್ಧಿಗೆ ಸಂಬಂಧಿಸಿದಂತೆ ಪುರಸಭೆ ಮತ್ತು ನಗರಸಭೆ ಸದಸ್ಯರಿಗೆ ಇನ್ನೂ ಅಧಿಕಾರ ಚಲಾಯಿಸಲು ಸಾಧ್ಯವಾಗಿಲ್ಲ. ಆಡಳಿತಾತ್ಮಕ ನಿರ್ಣಯಗಳು ಅಧಿಕಾರಿಗಳ ಕ್ರಮದ ಮೇಲೆ ಅವಲಂಬಿಸಿದ್ದು, ಸದಸ್ಯರ ಪಾತ್ರ ಗೌಣವಾಗಿದೆ.

‘ಚುನಾವಣೆಯಲ್ಲಿ ಗೆದ್ದು ವರ್ಷವಾಗಿದೆ. ಆದರೆ ಸದಸ್ಯರೆಂದು ಅಧಿಕಾರ ಚಲಾಯಿಸಲು ಆಗುತ್ತಿಲ್ಲ. ಗೆಲುವು ಸಾಧಿಸಿದ ಪ್ರಮಾಣಪತ್ರ ಹೊರತುಪಡಿಸಿದರೆ ಸದಸ್ಯರೆಂದು ಹೇಳಿಕೊಳ್ಳಲು ನಮ್ಮ ಬಳಿ ಯಾವುದೇ ಗುರುತು ಇಲ್ಲ. ಎಲ್ಲದ್ದಕ್ಕೂ ಅಧಿಕಾರಿಗಳ ಮೇಲೆ ಅವಲಂಬಿಸಿದ್ದೇವೆ’ ಎಂದು ಸದಸ್ಯರು ಹೇಳಿದರು.

‘ನಗರ–ಪಟ್ಟಣದ ಅಭಿವೃದ್ಧಿಗೆ ಸಂಬಂಧಿಸಿದ ನಿರ್ಣಯಗಳನ್ನು ಪೌರಾಯುಕ್ತರು ಮತ್ತು ಜಿಲ್ಲಾಧಿಕಾರಿಯವರೇ ಕೈಗೊಳ್ಳುತ್ತಾರೆ. ನಮ್ಮ ಸಲಹೆ, ಸೂಚನೆಗಳನ್ನು ಪರಿಗಣಿಸುವುದಿಲ್ಲ. ವಾರ್ಡ್‌ನ ಕಾರ್ಯಗಳಿಗೆ ದೂರವಣಿ ಕರೆ ಮಾಡಿದರೆ, ಅಧಿಕಾರಿಗಳು ಸ್ವೀಕರಿಸುವುದಿಲ್ಲ. ವಾರ್ಡ್‌ನ ಜನರು ನಮ್ಮ ಎದುರು ಅಹವಾಲು ತೋಡಿಕೊಳ್ಳುತ್ತಾರೆ. ಇದನ್ನು ಅಧಿಕಾರಿಗಳಿಗೆ ಹೇಳಿದರೆ, ಅವರು ಸ್ಪಂದಿಸುವುದಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಶಾಶ್ವತ ಕುಡಿಯುವ ನೀರಿನ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ವಾರ್ಡ್‌ನ ಮೂಲಸೌಕರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಪರಿಹರಿಸಲಾಗಿಲ್ಲ. ಜನ ಎದುರಿಸುತ್ತಿರುವ ಸಂಕಷ್ಟಗಳನ್ನು ನಿವಾರಿಸುವುದಕ್ಕಿಂತ ಇತರ ಕಾರ್ಯಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ.2017–18ನೇ ಸಾಲಿನ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ಆಂಧ್ರ ಮೂಲದವರಿಗೆ ಇದನ್ನು ಗುತ್ತಿಗೆ ನೀಡಲಾಗಿದ್ದು, ನಿರೀಕ್ಷಿತ ಮಟ್ಟದಲ್ಲಿ ಕಾರ್ಯಗಳು ನಡೆದಿಲ್ಲ’ ಎಂದು ಅವರು ಆರೋಪಿಸಿದರು.

‘ಸಾಮಾನ್ಯ ಸಭೆ ನಡೆದರೆ, ಕಾರ್ಯಗಳು ಕ್ಷಿಪ್ರಗತಿಯಲ್ಲಿ ಆಗುತ್ತವೆ. ಪ್ರಗತಿ ಪರಿಶೀಲನೆಯೂ ನಡೆಯುತ್ತದೆ. ಅಧಿಕಾರಿಗಳು ನಮ್ಮ ಮಾತುಗಳಿಗೆ ಸ್ಪಂದಿಸುವುದಿಲ್ಲ. ಅನುದಾನ ಬಳಕೆ ಬಗ್ಗೆಯೂ ಮಾಹಿತಿ ಗೊತ್ತಾಗುವುದಿಲ್ಲ. ಬಹುತೇಕ ಅಭಿವೃದ್ಧಿ ಕಾಮಗಾರಿಗಳು ಬಾಕಿಯುಳಿದಿವೆ’ ಎಂದು ಯಾದಗಿರಿ ನಗರಸಭೆ ಸದಸ್ಯ ವೆಂಕಟರೆಡ್ಡಿ ವನಕೇರಿ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.