ADVERTISEMENT

ಅನುದಾನ ನೀಡುವಲ್ಲಿ ತಾರತಮ್ಯ: ಶಾಸಕ ಶರಣಬಸಪ್ಪ ದರ್ಶನಾಪುರ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 4:23 IST
Last Updated 1 ಡಿಸೆಂಬರ್ 2021, 4:23 IST
ಕೆಂಭಾವಿ ಹೇಮರಡ್ಡಿ ಮಲ್ಲಮ್ಮ ಕಲ್ಯಾಣಮಂಟಪದಲ್ಲಿ ಮಂಗಳವಾರ ಕಲಬುರಗಿ– ಯಾದಗಿರಿ ವಿಧಾನಪರಿಷತ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ ಮರತೂರ ಪರ ಮತಯಾಚಿಸಿ ಶಾಸಕ ಶರಣಬಸಪ್ಪ ದರ್ಶನಾಪುರ ಮಾತನಾಡಿದರು
ಕೆಂಭಾವಿ ಹೇಮರಡ್ಡಿ ಮಲ್ಲಮ್ಮ ಕಲ್ಯಾಣಮಂಟಪದಲ್ಲಿ ಮಂಗಳವಾರ ಕಲಬುರಗಿ– ಯಾದಗಿರಿ ವಿಧಾನಪರಿಷತ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ ಮರತೂರ ಪರ ಮತಯಾಚಿಸಿ ಶಾಸಕ ಶರಣಬಸಪ್ಪ ದರ್ಶನಾಪುರ ಮಾತನಾಡಿದರು   

ಕೆಂಭಾವಿ: ಬಿಜೆಪಿ ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದು ಕಾಂಗ್ರೆಸ್ ಸದಸ್ಯರಿರುವ ಮತ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡದ ಕಾರಣ ಈ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅಡಚಣೆಯಾಗುತ್ತಿದೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಕಲಬುರಗಿ– ಯಾದಗಿರಿ ವಿಧಾನಪರಿಷತ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ ಮರತೂರ ಪರ ಮತಯಾಚಿಸಿ ಅವರು ಮಾತನಾಡಿದರು.

ದೇಶದಲ್ಲಿ ರೈತರು ಸಂಕಷ್ಟದಲ್ಲಿದ್ದು ರೈತರ ಪರ ಪ್ಯಾಕೇಜ್ ಘೋಷಣೆ ಮಾಡುವುದನ್ನು ಬಿಟ್ಟು ದೊಡ್ಡ ದೊಡ್ಡ ಕೈಗಾರಿಕೆಗಳ ಸಾಲ ಮನ್ನಾ ಮಾಡುವ ಮೂಲಕ ರೈತರನ್ನು ವಂಚಿಸುತ್ತಿದೆ. ಚುನಾವಣೆ ಬಂದ ಹಿನ್ನೆಲೆಯಲ್ಲಿ ರೈತರ ಮಸೂದೆಗಳನ್ನು ಹಿಂಪಡೆದು ನಾಟಕ ಮಾಡುತ್ತಿದ್ದಾರೆ.ಇದನ್ನು ಜನ ನಂಬಬಾರದು ಎಂದರು.

ADVERTISEMENT

ಹಣ ಮತ್ತಿತರ ಆಸೆಗಳಿಗೆ ಬಲಿಯಾಗಿ ಮತಗಳನ್ನು ಮಾಡಿಕೊಳ್ಳ ಬೇಡಿ. ಶಿವಾನಂದ ಪಾಟೀಲ ಮರತೂರ ರೈತ ಕುಟುಂಬದಿಂದ ಬಂದವರು. ಅವರಿಗೆ ಗ್ರಾಮೀಣಬಾಗದ ಜನರ ಕಷ್ಟಗಳು ಗೊತ್ತು. ಇಂತಹ ವ್ಯಕ್ತಿಗಳು ಮೇಲ್ಮನೆಗೆ ಹೋದರೆ ರಾಜ್ಯದಲ್ಲಿ ಬದಲಾವಣೆಗಳು ಸಾಧ್ಯ ಎಂದ ಅವರು ಬುದಿಹಾಳ ಪಿರಾಪುರ ಏತ ನೀರಾವರಿ ಯೋಜನೆಗೆ ₹750 ಕೋಟಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶಿಘ್ರದಲ್ಲಿ ಕಾಮಗಾರಿ ಪ್ರಾರಂಭವಾಲಿದೆಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಶಂಕ್ರೆಣ್ಣ ವಣಿಕ್ಯಾಳ ಮಾತನಾಡಿ, ಬಿಜೆಪಿ ಸರ್ಕಾರ ಮದವೇರಿದ ಆನೆಯಂತಾಗಿದೆ. ಇದಕ್ಕೆ ಅಂಕುಶ ಹಾಕಲು ಕಾಂಗ್ರೆಸ್ ಅಭ್ಯಾರ್ಥಿಗೆ ಮತ ನೀಡಬೇಕು ಎಂದ ಅವರು ಕೆಕೆಆರ್‌ಡಿಬಿ ಅನುದಾನ ಉಪಯೋಗಿಸಿ ಕೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ದನಗೌಡ ಪೊಲೀಸ ಪಾಟೀಲ, ಬಸನಗೌಡ ಹೊಸಮನಿ ಯಾಳಗಿ, ಅಮೀನರಡ್ಡಿ ಕಿರದಳ್ಳಿ, ನೀಲಕಂಠ ಬಡಗೇರ, ಮುದಿಗೌಡ ಮಾಲಿ ಪಾಟೀಲ, ಸಾಹೇಬಲಾಲ ಆಂದೇಲಿ, ಶರಣಬಸ್ಸು ಡಿಗ್ಗಾವಿ, ಖಾಜಾಪಟೇಲ ಕಾಚೂರ, ರಂಗಪ್ಪ ವಡ್ಡರ, ಧರ್ಮಿಬಾಯಿ ರಾಠೋಡ್ ಇದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ನಿರೂಪಿಸಿದರು, ವಾಮನರಾವ ದೇಶಪಾಂಡೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.