ADVERTISEMENT

ಸಂಭ್ರಮದ ಗುಡ್ಡದ ಮಲ್ಲಯ್ಯನ ಜಾತ್ರೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 5:11 IST
Last Updated 5 ಡಿಸೆಂಬರ್ 2021, 5:11 IST
ಯರಗೋಳ ಗ್ರಾಮದಲ್ಲಿ ಶನಿವಾರ ನಡೆದ ಗುಡ್ಡದ ಮಲ್ಲಯ್ಯನ ಜಾತ್ರೆಯಲ್ಲಿ ಸೇರಿದ ಅಪಾರ ಭಕ್ತರು
ಯರಗೋಳ ಗ್ರಾಮದಲ್ಲಿ ಶನಿವಾರ ನಡೆದ ಗುಡ್ಡದ ಮಲ್ಲಯ್ಯನ ಜಾತ್ರೆಯಲ್ಲಿ ಸೇರಿದ ಅಪಾರ ಭಕ್ತರು   

ಯರಗೋಳ: ಗ್ರಾಮದ ಪ್ರಸಿದ್ಧ ಗುಡ್ಡದ ಮಲ್ಲಯ್ಯನ ಜಾತ್ರೆ ಶನಿವಾರ ಬಹು ವಿಜೃಂಭಣೆಯಿಂದ ಜರುಗಿತು. ನಸುಕಿನಿಂದಲೇ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಜಿಲ್ಲೆಯೂ ಸೇರಿದಂತೆ ಅಕ್ಕಪಕ್ಕದ ಜಿಲ್ಲೆ ಹಾಗೂ ನೆರೆ ರಾಜ್ಯದ ಜನರೂ ಪಾಲ್ಗೊಂಡರು.

ದೊಡ್ಡ ಕೆರೆಯಲ್ಲಿ ಪುಣ್ಯ ಸ್ನಾನ ಮಾಡಿಸಿದ ಮಲ್ಲಯ್ಯನ ಮೂರ್ತಿಯನ್ನು ಹೊತ್ತುಕೊಂಡುಭಕ್ತರು ಡೊಳ್ಳು, ಹಲಗೆ ಜತೆ ಮೆರವಣಿಗೆ ಮೂಲಕ ಗುಡ್ಡದಲ್ಲಿರುವ ಗುಹೆ ತಲುಪಿದರು. ಮಲ್ಲಯ್ಯ ಮಹಾರಾಜ್‌ ಕೀ ಜೈಕಾರ ಕೂಗಿದರು. ಪರಸ್ಪರ ಭಂಡಾರ ಎರಚಿ ಸಂಭ್ರಮಿಸಿದರು.

ಮಧ್ಯಾಹ್ನ 12ಕ್ಕೆ ಮಲ್ಲಯ್ಯನ ಪಲ್ಲಕ್ಕಿ ಮೆರವಣಿಗೆಯಲ್ಲಿ ಕಬ್ಬಿಣದ ಸರಪಳಿ ತುಂಡರಿಸುವ ಸ್ಥಳಕ್ಕೆ ಆಗಮಿಸಿ, ಪೂಜೆ ನೆರವೇರಿಸಿ ಸರಪಳಿ ತುಂಡರಿಸಲಾಯಿತು. ಸಾವಿರಾರು ಭಕ್ತರು ಈ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು. ಯುವಕರು ಕೋಲಾಟ ಆಡಿ ಸಂಭ್ರಮಿಸಿದರೆ, ಯುವತಿಯರು ಗೆಳತಿಯರೊಟ್ಟಿಗೆ ಕಳಸವನ್ನು ಹಿಡಿದು ಭಕ್ತಿ ಸಮರ್ಪಸಿದರು.

ADVERTISEMENT

ಜಾತ್ರೆಯಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಮಲ್ಲಯ್ಯನಿಗೆ ಹರಕೆ ಹೊತ್ತ ಭಕ್ತರು, ಪಾದಯಾತ್ರೆ, ಮಕ್ಕಳಿಗೆ ಜಾವಳ ತೆಗೆಯುವ ಕಾರ್ಯಕ್ರಮ ನೆರವೇರಿಸಿದರು. ಭಕ್ತರಿಗೆ ಹುಗ್ಗಿ, ಅನ್ನ, ಸಾಂಬಾರ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.