ADVERTISEMENT

‘ಕುಟುಂಬದ ಆರ್ಥಿಕ ಭದ್ರತೆಗೆ ಜೀವ ವಿಮೆ ಮಾಡಿಸಿ’

ತಾಲ್ಲೂಕು ಪಂಚಾಯಿತಿ ಇಒ ಅಂಬರೀಶ ಪಾಟೀಲ ಸಲಹೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 6:03 IST
Last Updated 8 ಜುಲೈ 2025, 6:03 IST

ಗುರುಮಠಕಲ್: ‘ಜೀವನದಲ್ಲಿ ಎಂತಹ ಸನ್ನಿವೇಶಗಳು ಬರುತ್ತವೋ ತಿಳಿಯದು. ಅನಿರೀಕ್ಷಿತವಾಗಿ ಎದುರಾಗುವ ಕಷ್ಟ ಮತ್ತು ದುಃಖದ ಸಮಯದಲ್ಲಿ ಆರ್ಥಿಕ ಸಮಸ್ಯೆ ಪರಿಹರಿಸುವಲ್ಲಿ ಜೀವವಿಮೆಯು ಸಹಕಾರಿಯಾಗಲಿದೆ. ಆದ್ದರಿಂದ ಕುಟುಂಬದ ಆರ್ಥಿಕ ಭದ್ರತೆಗಾಗಿ ಪ್ರತಿಯೊಬ್ಬರು ಜೀವ ವೀಮೆ ಮಾಡಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಇಒ ಅಂಬರೀಶ ಪಾಟೀಲ ಹೇಳಿದರು.

ತಾಲ್ಲೂಕಿನ ಚಿನ್ನಾಕಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಆರ್ಥಿಕ ಸುರಕ್ಷಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ಜೀವ ವಿಮಾ ಯೋಜನೆಗಳಾದ ಪಿಎಂಜೆಜೆಬಿವೈ, ಪಿಎಂಎಸ್‌ಬಿವೈ ಕುರಿತು ಮಾಹಿತಿ ನೀಡಿದರು.

ADVERTISEMENT

‘ಆಕಸ್ಮಿಕ ಅಪಘಾತದಲ್ಲಿ ಕೈ–ಕಾಲುಗಳ ಮುರಿದರೆ ಚಿಕಿತ್ಸೆ ಪಡೆಯಲು ಹಣಕ್ಕಾಗಿ ಹೆಣಗಾಡುವ ಸ್ಥಿತಿ ಸಾಮಾನ್ಯ. ಅಂಥ ಸಮಯದಲ್ಲಿ ವಿಮೆ ಮಾಡಿಸಿದ್ದರೆ ಹಣಕಾಸಿನ ನೆರವು ಸಿಗುತ್ತದೆ. ಸಾವು ಸಂಭವಿಸಿದರೆ ಕುಟುಂಬಕ್ಕೆ ಆರ್ಥಿಕ ನೆರವು ದೊರೆಯುತ್ತದೆ’ ಎಂದರು.

‘ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ(ಪಿಎಂಜೆಜೆಬಿವೈ) ಮೂಲಕ 18 ರಿಂದ 50 ವರ್ಷದ ವಯೋಮಾನದವರಿಗೆ ಕೇವಲ ವಾರ್ಷಿಕ ₹436ರಲ್ಲಿ ವಿಮೆ ಸೌಲಭ್ಯವಿದೆ. ಆಕಸ್ಮಿಕವಾಗಿ ಸಾವು ಸಂಭವಿಸಿದರೆ ಕುಟುಂಬಕ್ಕೆ ₹2 ಲಕ್ಷ ನೀಡಲಾಗುತ್ತದೆ. ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ(ಪಿಎಂಎಸ್‌ಬಿವೈ)ನಲ್ಲಿ 18 ರಿಂದ 70 ವರ್ಷದವರಿಗೆ ವಾರ್ಷಿಕ ₹20 ವಿಮೆ ಮಾಡಿಸಿದರೆ, ಅಪಘಾತದ ಸಾವಿನಲ್ಲಿ ₹2 ಲಕ್ಷ, ಅಂಗವೈಕಲ್ಯಕ್ಕೆ ₹1 ಲಕ್ಷ ವಿಮಾ ಪರಿಹಾರ ಸಿಗಲಿದೆ’ ಎಂದರು.

ಪಂಚಾಯಿತಿ ವ್ಯಾಪ್ತಿಯ ಬ್ಯಾಂಕ್‌ನಲ್ಲಿ ಆಧಾರ್ ‌ಕಾರ್ಡ್, ಬ್ಯಾಂಕ್ ಖಾತೆಯ ಪ್ರತಿ ಮತ್ತು ನಾಮನಿರ್ದೇಶಿತರ (ನಾಮಿನಿ) ಆಧಾರ್‌ ಕಾರ್ಡ್, ಪಾಸ್‌ಪೋರ್ಟ್ ಸೈಜ್ ಫೋಟೋ ನೀಡುವ ಮೂಲಕ ವಿಮಾ ಸೌಲಭ್ಯ ಪಡೆಯಬಹುದು ಎಂದರು.

ಪಿಡಿಒ ಉಮೇಶ, ತಾಲ್ಲೂಕು ಸಂಯೋಜಕ ರಾಘವೇಂದ್ರ, ಟಿ.ಸಿ.ಮುಜಾಮಿಲ್, ಎನ್‌ಆರ್‌ಎಲ್‌ಎಂ ಶೇಖರ್, ಬಿಎಫ್‌ಟಿ ಮುಜಾಯಿದ್ ಸೇರಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.