
ಗುರುಮಠಕಲ್: ಪಟ್ಟಣದಲ್ಲಿ ಶನಿವಾರ(ಜ.31) ರಂದು ‘ಹಿಂದೂ ಸಮ್ಮೇಳನ ಶೋಭಾಯಾತ್ರೆ’ ಜರುಗಲಿದೆ ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಪನ್ನಾಲಾಲ್ ಪಟೇಲ್, ಉಪಾಧ್ಯಕ್ಷ ದೊಡ್ಲ ಪಂಡರಿ ತಿಳಿಸಿದರು.
ಪಟ್ಟಣದಲ್ಲಿ ಗುರುವಾರ ಕಾರ್ಯಕ್ರಮದ ಆಮಂತ್ರಣ ಮತ್ತು ಕರಪತ್ರ ಬಿಡುಗಡೆ ಹಾಗೂ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಶನಿವಾರ ಮದ್ಯಾಹ್ನ 3 ಗಂಟೆಗೆ ಪಟ್ಟಣದ ನಗರೇಶ್ವರ ದೇವಸ್ಥಾನದಲ್ಲಿ ಶೋಭಾಯಾತ್ರೆಗೆ ಚಾಲನೆ ನೀಡಲಾಗುವುದು’ ಎಂದರು.
ಗಂಗಾಪರಮೇಶ್ವರಿ ವೃತ್ತ, ಅಂಬಿಗರಚೌಡಯ್ಯ ವೃತ್ತ ಸೇರಿದಂತೆ ಮುಖ್ಯ ರಸ್ತೆಗಳ ಮೂಲಕ ಶೋಭಾಯಾತ್ರೆಯು ರಾಮನಗರ ಬಡಾವಣೆಯಲ್ಲಿ ಸಂಪನ್ನಗೊಳ್ಳಲಿದೆ. ಸಂಜೆ 5ಗಂಟೆಗೆ ರಾಮನಗರ ಬಡಾವಣೆಯಲ್ಲಿ ಕಾರ್ಯಕ್ರಮ ಆರಂಭಗೊಳ್ಳಲಿದೆ.
ಹೈದರಾಬಾದ್ ನಗರದ ಜಗದ್ಗಿರಿಗುಟ್ಟ ಮಾತಾ ಮಾಣಿಕೇಶ್ವರಿ ಆಶ್ರಮ ವೇದಪಾಠ ಶಾಲೆಯ ಮಲ್ಲಿಕಾರ್ಜುನ ಸ್ವಾಮಿ ಸಾನ್ನಿಧ್ಯದಲ್ಲಿ ಹುಬ್ಬಳ್ಳಿಯ ಮಲ್ಲಿಕಾರ್ಜುನ ಬಾಳಿಕಾಯಿ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ವಿಶಾಲವಾದ ಜನಜಾಗೃತಿ, ಜನತಾ ಜನಾರ್ಧನನ ವಿಶ್ವರೂಪ ದರ್ಶನ, ಹಿಂದೂಗಳಲ್ಲಿ ಸೋದರತೆ ಭಾವದ ಅಭಿವ್ಯಕ್ತಗೊಳಿಸುವ, ವೇಷ-ಭಾಷೆ, ಪಂತ-ಪೂಜೆ, ವಿಧಿ-ವಿಧಾನಗಳ ಭಿನ್ನತೆಯಲ್ಲೂ ಏಕತೆ, ಸ್ವಂತಕ್ಕೆ ಸ್ವಲ್ಪ-ಸಮಾಜಕ್ಕೆ ಸರ್ವಸ್ವ ಎನ್ನುವ ಕಲ್ಪನೆಯ ಉದ್ದೇಶಗಳೊಂದಿಗೆ ಕಾರ್ಯಕ್ರಮ ಆಯೋಜಿಸಿದ್ದಾಗಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸತೀಶ ತಿವಾರಿ, ಶ್ರೀನಿವಾಸ ಯಾದವ, ಶಿವಾನಂದ ಬೂದಿ, ಗುರುರಾಜ ಜೋಷಿ, ಮೋಹನ ಬುರುಬುರೆ, ಕಿಶೋರ ಢಗೆ, ಮಲ್ಲಿಕಾರ್ಜುನ ಹಿರೇಮಠ, ನಾರಾಯಣ ಮಜ್ಜಿಗೆ, ನರಸಿಂಹಲು ಗಂಗನೋಳ ಸೇರಿದಂತೆ ಸಮಿತಿ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.