ಯಾದಗಿರಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೂನ್ 21ರಂದು ಗ್ರಾಮ ವಾಸ್ತವ್ಯ ಮಾಡಲಿರುವ ಗುರುಮಠಕಲ್ ತಾಲ್ಲೂಕಿನ ಚಂಡರಕಿ ಗ್ರಾಮವು ಸೌಕರ್ಯಗಳ ತೀವ್ರ ಕೊರತೆ ಎದುರಿಸುತ್ತಿದೆ.
ಇಲ್ಲಿ ಅಕ್ಷರಶಃ ಬಯಲೇ ಶೌಚಾಲಯ. ತೆಗ್ಗುದಿಣ್ಣೆಗಳಿಂದ ಕೂಡಿರುವ ರಸ್ತೆ ಮೇಲೆಯೇ ಚರಂಡಿ ನೀರು ಹರಿಯುತ್ತದೆ. ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದರೂ ಇಲ್ಲಿ ಬ್ಯಾಂಕ್, ರೈತ ಸಂಪರ್ಕ ಕೇಂದ್ರ ಮತ್ತು ಆಸ್ಪತ್ರೆ ಇಲ್ಲ. ರಸ್ತೆಯ ಎರಡೂ ಬದಿಯಲ್ಲೂ ತಿಪ್ಪೆಗುಂಡಿಗಳ ರಾಶಿಯಿದೆ.
5,000ಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಶೇ 20ರಷ್ಟು ಮಾತ್ರ ಶೌಚಾಲಯ ಇದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಶುಚಿತ್ವದ ಕುರಿತು ಜಾಗೃತಿ ಮೂಡಿಸಿದರೂ ಬಹುತೇಕ ಮನೆಗಳಲ್ಲಿ ಶೌಚಾಲಯಗಳಿಲ್ಲ.
ಚಂಡರಕಿ ಗ್ರಾಮ ಪಂಚಾಯಿತಿಗೆ 19 ಮಂದಿ ಸದಸ್ಯರು ಇದ್ದಾರೆ. ಈ ಗ್ರಾಮಪಂಚಾಯಿತಿಗೆ ಮಡೆಪಲ್ಲಿ, ಕೇಶ್ವಾರ, ಕೇಶ್ವಾರ ತಾಂಡಾ ಒಳಪಟ್ಟಿದೆ. ಈ ಗ್ರಾಮದವರೇ ಪಂಚಾಯಿತಿಗೆ ಅಧ್ಯಕ್ಷ, ಉಪಾಧ್ಯಕ್ಷರು. ಒಬ್ಬರು ತಾಲ್ಲೂಕು ಪಂಚಾಯಿತಿ ಸದಸ್ಯರೂ ಇದ್ದಾರೆ. ಆದರೆ ಸಮಸ್ಯೆಗಳು ನಿವಾರಣೆಯಾಗಿಲ್ಲ. ಗ್ರಾಮಕ್ಕೆ ಸೌಲಭ್ಯಗಳು ದಕ್ಕಿಲ್ಲ.
ಕೆಲವರು ತಮ್ಮ ಮನೆಗಳಿಗೆ ಶೌಚಾಲಯ ನಿರ್ಮಿಸಿಕೊಂಡಿದ್ದರೆ, ಶೌಚಾಲಯ ಕಟ್ಟಿಕೊಂಡರೂ ಸರ್ಕಾರದಿಂದ ಹಣ ಬರುವುದಿಲ್ಲ ಎಂದು ಗ್ರಾಮಸ್ಥರು ಅದರ ಉಸಾಬದರಿಗೆ ಹೋಗಿಲ್ಲ.
ಇಲ್ಲಿ ನೀರಿನದ್ದೇ ದೊಡ್ಡ ಸಮಸ್ಯೆಯಾಗಿದೆ. ಸರ್ಕಾರಿ ಶಾಲಾ ಆವರಣದಲ್ಲಿಯೇ ಸುಮಾರು 8–10 ಕೊಳವೆ ಬಾವಿಗಳಿವೆ. ನೀರಿಲ್ಲದೇ ಕೆಲವು ಬತ್ತಿವೆ. ಈಗ ಖಾಸಗಿ ಕೊಳವೆ ಬಾವಿಯಿಂದ ಗ್ರಾಮಕ್ಕೆ ಪೈಪ್ ಲೈನ್ ಮೂಲಕ ನೀರು ಸರಬರಾಜು ವ್ಯವಸ್ಥೆ ಮಾಡಲಾಗಿದೆ. ಆದರೂ ನೀರಿಗಾಗಿ ಪರದಾಟ ತಪ್ಪಿಲ್ಲ.
‘ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಹೂಳು ಎತ್ತಿದ್ದೇವೆ. ಆದರೆ ಎರಡು ವರ್ಷಗಳಿಂದ ಕೂಲಿ ಹಣ ಬಂದಿಲ್ಲ. ಕೆಲಸ ಇಲ್ಲದೇ ಕಂಗಾಲು ಆಗಿ ಕೆಲವರು ಗ್ರಾಮದಲ್ಲಿಯೇ ಉಳಿದುಕೊಂಡಿದ್ದರೆ, ಕೆಲಸ ಹುಡುಕಿಕೊಂಡು ಕೆಲವರು ಕಲಬುರ್ಗಿ, ಬೆಂಗಳೂರು ಮತ್ತು ಹೈದರಾಬಾದ್ಗೆ ಗುಳೆ ಹೋಗಿದ್ದಾರೆ’ ಎಂದು ಗ್ರಾಮಸ್ಥರು ತಿಳಿಸಿದರು.
‘ಗ್ರಾಮಕ್ಕೆ ಬಸ್ ವ್ಯವಸ್ಥೆಯು ಸಮರ್ಪಕವಾಗಿಲ್ಲ. ಸಕಾಲಕ್ಕೆ ಬಸ್ ಬಾರದ ಕಾರಣ ವಿದ್ಯಾರ್ಥಿಗಳು ಶಾಲಾಕಾಲೇಜಿಗೆ ತಡವಾಗಿ ಹೋಗುತ್ತಾರೆ. ಇಲ್ಲಿ ಹಳೆಯ ಬಸ್ಗಳೇ ಹೆಚ್ಚು ಸಂಚರಿಸುವ ಕಾರಣ ಅವು ಗುಡ್ಡಗಾಡು ಪ್ರದೇಶದಲ್ಲಿ ಏರುವುದಿಲ್ಲ. ಹೀಗಾಗಿ ಕೆಲ ಸಂದರ್ಭಗಳಲ್ಲಿ ಪ್ರಯಾಣಿಕರೇ ಬಸ್ನ್ನು ತಳ್ಳಬೇಕಾಗುತ್ತದೆ’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.