ADVERTISEMENT

ಯಾದಗಿರಿ| ಪೊಲೀಸ್‌ ಭದ್ರತೆಯೊಂದಿಗೆ ಅಕ್ರಮ ಕಟ್ಟಡ ತೆರವು

ಉದ್ಯಾನ ಜಾಗದಲ್ಲಿ ಕಟ್ಟಡ ನಿರ್ಮಾಣ, ನಗರದಲ್ಲಿ ಬುಲ್ಡೋಜರ್ ಸದ್ದು

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 16:30 IST
Last Updated 2 ಅಕ್ಟೋಬರ್ 2022, 16:30 IST
ಯಾದಗಿರಿಯ ಲಕ್ಷ್ಮೀನಗರದ ಉದ್ಯಾನವನಕ್ಕೆಂದು ಮೀಸಲಿಟ್ಟಿದ್ದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದನ್ನು ನಗರಸಭೆಯಿಂದ ತೆರವುಗೊಳಿಸಲಾಯಿತು
ಯಾದಗಿರಿಯ ಲಕ್ಷ್ಮೀನಗರದ ಉದ್ಯಾನವನಕ್ಕೆಂದು ಮೀಸಲಿಟ್ಟಿದ್ದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದನ್ನು ನಗರಸಭೆಯಿಂದ ತೆರವುಗೊಳಿಸಲಾಯಿತು   

ಯಾದಗಿರಿ: ಲಕ್ಷ್ಮೀನಗರದ ಸರ್ವೆ ನಂ 282 ಹಾಗೂ 285/ಅ ಉದ್ಯಾನವನಕ್ಕೆಂದು ಮೀಸಲಿಟ್ಟಿದ್ದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದನ್ನು ನಗರಸಭೆಯಿಂದ ತೆರವುಗೊಳಿಸಲಾಯಿತು.

ನಗರಸಭೆ ವ್ಯಾಪ್ತಿಯಲ್ಲಿ ಬರುವ ಉದ್ಯಾನ ಜಾಗವನ್ನು ಒತ್ತುವರಿ ಮಾಡಲಾಗಿದೆ. ಅಂದಾಜು 2,700 ಚದರಡಿ ಉದ್ಯಾನವನದ ಜಾಗವನ್ನು ಒತ್ತುವರಿ ಮಾಡಿಕೊಂಡು ನಾಲ್ಕು ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಹಾಗೂ ಮತ್ತೊಂದು ಮೊದಲ ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ₹1 ಕೋಟಿ ಮೌಲ್ಯದ ಜಾಗವನ್ನು ಒತ್ತುವರಿಯಾಗಿದ್ದು, ಭಾನುವಾರ ಕಟ್ಟಡ ತೆರವು ಮಾಡಲಾಯಿತು.

ಪೊಲೀಸ್‌ ಭದ್ರತೆ ನಡುವೆ ತೆರವು:ಸಾರ್ವಜನಿಕರು ಉದ್ಯಾನ ಜಾಗವನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ದೂರು ನೀಡಿದ ಕಾರಣ ನಗರಸಭೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಸಮೀಕ್ಷೆ ನಡೆಸಿದಾಗ ಅಂದಾಜು 2,700 ಚದರಡಿ ಜಾಗವನ್ನು ಒತ್ತುವರಿಯಾದ ಬಗ್ಗೆ ವರದಿ ಮಾಡಲಾಗಿದೆ. ವರದಿ ಆಧರಿಸಿ ನಗರಸಭೆ ಅಧಿಕಾರಿಗಳು ತೆರವು ಮಾಡಿದರು. ಪೊಲೀಸ್‌ ಭದ್ರತೆಯೊಂದಿಗೆ ಅಕ್ರಮ ಕಟ್ಟಡಗಳ ತೆರವು ಮಾಡಲಾಯಿತು.

8 ಬಾರಿ ನೊಟೀಸ್:ಒತ್ತುವರಿದಾರರಿಗೆ ನಗರಸಭೆಯು 8 ಬಾರಿ ನೊಟೀಸ್ ನೀಡಲಾಗಿದೆ. ಆದರೆ, ಒತ್ತುವರಿದಾರರು ನೊಟೀಸ್‌ಗೆ ಕ್ಯಾರೆ ಎಂದಿದ್ದು, ನಂತರ ನಗರಸಭೆ ಪೌರಾಯುಕ್ತ ಶರಣಪ್ಪ ಅವರ ನೇತೃತ್ವದಲ್ಲಿ ಬುಲ್ಡೋಜರ್ ಮೂಲಕ ಒತ್ತುವರಿ ಕಟ್ಟಡ ತೆರವು ಮಾಡಲಾಯಿತು.

ಇನ್ನುಳಿದವರಿಗೆ ಶೀಘ್ರವೇ ಶಾಕ್: ನಗರಸಭೆ ವ್ಯಾಪ್ತಿಯಲ್ಲಿ ಉದ್ಯಾನ ಹಾಗೂ ಸರ್ಕಾರ ಜಾಗವನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡಿದ ಹಾಗೂ ನಿರ್ಮಾಣ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ದೂರು ಮಾಹಿತಿ ನೀಡಿದ್ದು, ಇದರ ಬಗ್ಗೆ ನಗರಸಭೆ ಅಧಿಕಾರಿಗಳು ಈ ಬಗ್ಗೆ ನಗರಸಭೆ ಜಾಗವನ್ನು ಉಳಿಸಿಕೊಳ್ಳಲು ಯೋಜನೆ ಮಾಡಿದೆ. ಉದ್ಯಾನ ಜಾಗವನ್ನು ಹಾಗೂ ಒತ್ತುವರಿ ಜಾಗದ ಬಗ್ಗೆ ಸರ್ವೆ ಮಾಡಲು ನಗರಸಭೆ ಅಧಿಕಾರಿಗಳು ಮುಂದಾಗಿದ್ದಾರೆ.

ಈ ವೇಳೆ ನಗರಸಭೆ ಪೌರಾಯುಕ್ತ ಶರಣಪ್ಪ, ಸಿಬ್ಬಂದಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.