ADVERTISEMENT

ತೊಗರಿ, ಹತ್ತಿಗೆ ಕೀಟ ಬಾಧೆ; ರೈತ ಕಂಗಾಲು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 3:51 IST
Last Updated 3 ಸೆಪ್ಟೆಂಬರ್ 2021, 3:51 IST
ಕೆಂಭಾವಿ ಸಮೀಪದ ಯಕ್ತಾಪುರದ ಜಮೀನಿನಲ್ಲಿನ ಹತ್ತಿ ಬೆಳೆ
ಕೆಂಭಾವಿ ಸಮೀಪದ ಯಕ್ತಾಪುರದ ಜಮೀನಿನಲ್ಲಿನ ಹತ್ತಿ ಬೆಳೆ   

ಕೆಂಭಾವಿ: ಕಳೆದ ಕೆಲವು ದಿನಗಳಿಂದ ಮೋಡ ಮುಸುಕಿದ ವಾತಾವರಣ ಇದ್ದು, ಆಗಾಗ ತುಂತರು ಮಳೆ ಸುರಿಯುತ್ತಿದೆ. ಇದರಿಂದ ತೊಗರಿ ಹಾಗೂ ಹತ್ತಿ ಬೆಳೆಗಳಿಗೆ ರಸಹೀರುವ ಕೀಟಬಾಧೆ ಕಾಣಿಸಿಕೊಂಡಿದೆ.

ಕಳೆದ ವರ್ಷ ವ್ಯಾಪಕ ಮಳೆ ಹಾಗೂ ಕೊರೊನಾದಿಂದ ರೈತರು ಸಾಕಷ್ಟು ಹೈರಾಣಾಗಿದ್ದರು. ಈ ಬಾರಿ ಸಕಾಲಕ್ಕೆ ಉತ್ತಮ ಮಳೆಯಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ತೊಗರಿ ಹಾಗೂ ಹತ್ತಿ ಬಿತ್ತನೆ ಆಗಿದೆ. ಬೆಳೆದು ನಿಂತ ಫಸಲಿಗೆ ಕೀಟಗಳ ಹಾವಳಿ ಹೆಚ್ಚಾಗಿದೆ. ಅವುಗಳ ನಿಯಂತ್ರಣಕ್ಕೆರೈತರು ಬೆಳೆಗಳಿಗೆ ಕೀಟನಾಶಕಸಿಂಪಡಣೆ ಮಾಡುತ್ತಿದ್ದಾರೆ. ಔಷಧಿಗಳ ಬೆಲೆಯೂ ಹೆಚ್ಚಾಗಿದ್ದು, ಕೀಟಗಳ ಜತೆಗೆ ಆರ್ಥಿಕ ಹೊರೆಯು ಬಾಧೆಯಾಗಿ ಪರಿಣಮಿಸಿದೆ ಎನ್ನುತ್ತಾರೆರೈತ ಕಾಂತಪ್ಪ ಕುಂಬಾರ.

ತುಂತುರು ಮಳೆಯು ತಡವಾಗಿ ಬಿತ್ತನೆಯಾದ ತೊಗರಿ ಮತ್ತು ಹತ್ತಿ ಬೆಳೆಗೆ ಅನುಕೂಲ ಮಾಡಿಕೊಟ್ಟಿದೆ. ಆದರೆ ಮುಂಚಿತವಾಗಿ ಬಿತ್ತಿದ ಬೆಳೆಗಳು ಮೋಡ ಕವಿದ ವಾತಾವರಣದಿಂದ ರೋಗ ಹಾಗೂ ಕೀಟ ಬಾಧೆಗೆ ತುತ್ತಾಗುತ್ತಿವೆ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದುಡಿಗ್ಗಾವಿ ರೈತ ಮಹಿಪಾಲರಡ್ಡಿ ತಿಳಿಸಿದರು.

ADVERTISEMENT

ಒಂದು ಕಡೆ ರಸಹೀರುವ ಕೀಟಗಳ ಹಾವಳಿ. ಮತ್ತೊಂದು ಕಡೆ ಕೀಟನಾಶಕ ಔಷಧಗಳ ದರದ ಹೆಚ್ಚಳ. ಇವುಗಳ ಮಧ್ಯೆ ಸಿಲುಕಿದ ಕೃಷಿಕರು ದಿಕ್ಕೆಟ್ಟಿದ್ದಾರೆ. ಅನಿವಾರ್ಯವಾಗಿ ದುಬಾರಿ ಬೆಲೆ ತೆತ್ತು ಖರೀದಿ ಮಾಡಲಾಗುತ್ತಿದೆ. ಕಳೆದ ವರ್ಷಕ್ಕಿಂತ ಕೀಟನಾಶಕ ಔಷಧ ಹಾಗೂ ರಸಗೊಬ್ಬರ ಬೆಲೆ ಹೆಚ್ಚಳವಾಗಿದ್ದು, ಹಲವು ರೈತರು ಸಾಲ ಮಾಡಿ ಖರೀದಿ ಸುತಿದ್ದಾರೆ ಎಂದು ಕಾಂತಪ್ಪ ಹೇಳಿದರು.

ಕೃಷಿಕರ ಬೇಡಿಕೆಗೆ ಅನುಗುಣವಾಗಿಗೊಬ್ಬರ ಪೂರೈಕೆ ಆಗುತ್ತಿಲ್ಲ. ಮಾರುಕಟ್ಟೆಯಲ್ಲಿ ಅಭಾವ ಕಂಡು ಬಂದಿದೆ. ಹೂ, ಕಾಯಿ ಕಟ್ಟುವ ಹಂತದಲ್ಲಿರುವ ತೊಗರಿ ಮತ್ತು ಹತ್ತಿ ಬೆಳಗಳಿಗೆ ಗೊಬ್ಬರದ ಅವಶ್ಯಕತೆಯಿದೆ. ದುಬಾರಿ ಬೆಲೆ ತೆತ್ತು ಖರೀದಿ ಮಾಡಲಾಗುತ್ತಿದೆ. 50 ಕೆ.ಜಿ. ಚೀಲಕ್ಕೆ ₹1000 ಇದ್ದದ್ದು ಈಗ ₹1100 ರಿಂದ 1600 ಗೆ ಏರಿಕೆಯಾಗಿದೆ ಎಂದು ಅವರು ಅಲವತ್ತುಕೊಂಡರು.

ಅಧಿಕಾರಿಗಳ ತಂಡ ಅಂಗಡಿಗಳಿಗೆ ತೆರಳಿ ಕೀಟನಾಶಕ ಔಷಧಿಗಳ ಮಾರಾಟ ದರದ ಬಗ್ಗೆ ಪರಿಶೀಲನೆ ನಡೆಸಲಿದೆ. ತಪ್ಪು ಕಂಡು ಬಂದಲ್ಲಿ ತಕ್ಷಣವೇ ನೋಟಿಸ್ ನೀಡಲಾಗುತ್ತದೆ. ರಸಗೊಬ್ಬರ ಹಾಗೂ ಕೀಟನಾಶಕ ಅಭಾವದ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರವೇ ಪುರೈಕೆ ಮಾಡಲಾಗುವುದು ಎಂದು ಕೃಷಿ ಅಧಿಕಾರಿ ಪ್ರಕಾಶ ಬಂಡೆಪ್ಪನಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.