ADVERTISEMENT

ಮಹಿಳಾ ದೌರ್ಜನ್ಯ ತಡೆಗೆ ಕೈಜೋಡಿಸಿ: ಅರ್ಜುನ ಬನಸೋಡೆ

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 2:01 IST
Last Updated 10 ಮಾರ್ಚ್ 2021, 2:01 IST
ಯಾದಗಿರಿಯ ಡಾನ್‌ ಬೋಸ್ಕೊ ಸಮಾಜ ಸೇವಾ ಕೇಂದ್ರದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ಅರ್ಜುನ ಬನಸೋಡೆ ಮಾತನಾಡಿದರು
ಯಾದಗಿರಿಯ ಡಾನ್‌ ಬೋಸ್ಕೊ ಸಮಾಜ ಸೇವಾ ಕೇಂದ್ರದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ಅರ್ಜುನ ಬನಸೋಡೆ ಮಾತನಾಡಿದರು   

ಯಾದಗಿರಿ: ‘ಪ್ರಸ್ತುತ ದಿನಗಳಲ್ಲಿಯೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಇದನ್ನು ತಡೆಗಟ್ಟಲು ಎಲ್ಲರೂ ಕೈ ಜೋಡಿಸಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ ಅರ್ಜುನ ಬನಸೋಡೆ ಹೇಳಿದರು.

ಬ್ರೇಡ್ಸ್‌ ಬೆಂಗಳೂರು, ಡಾನ್‌ ಬೋಸ್ಕೊ ಸಮಾಜ ಸೇವಾ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ನಗರದ ಡಾನ್‌ ಬೋಸ್ಕೊ ಸಮಾಜ ಸೇವಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಹೆಣ್ಣು ಮಕ್ಕಳ ಸಂಖ್ಯೆ ಕುಸಿಯುತ್ತಿದೆ. ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆತಪ್ಪಿಸಲು ಕಾನೂನು ನೆರವು ನೀಡುತ್ತಿದೆ. ‍ಪ್ರತಿ ಹಳ್ಳಿಗಳಲ್ಲಿಯೂ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇದನ್ನು ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು
ತಿಳಿಸಿದರು.

ADVERTISEMENT

‘ಮಹಿಳೆಯರ ಬಗ್ಗೆ ಗೌರವ ಮೂಡಿಸುವ ದಿನವನ್ನು ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಸ್ವಾತಂತ್ರ್ಯಪೂರ್ವದಲ್ಲಿ ಮಹಿಳೆಯರಿಗೆ ಶಿಕ್ಷಣ ಇರಲಿಲ್ಲ. ಈಗ ಎಲ್ಲ ಕಡೆ ಮೀಸಲಾತಿ ಇದೆ. ಇದನ್ನು ಸದುಪಯೋಗ ಮಾಡಿಕೊಂಡು ಉನ್ನತ ಸ್ಥಾನಕ್ಕೆ ಏರಬೇಕು’ ಎಂದು ಸಲಹೆ ನೀಡಿದರು.

‘ತಾಯಂದಿರು ಮಕ್ಕಳನ್ನು ಬಾಲ್ಯ ವಿವಾಹಕ್ಕೆ ದೂಡಬಾರದು. ವರದಕ್ಷಿಣೆಗೆ ಪ್ರೋತ್ಸಾಹ ನೀಡಬಾರದು. 3 ವರ್ಷ ಜೈಲು ಶಿಕ್ಷೆ ಇದೆ. ಹೀಗಾಗಿ ಮಹಿಳಾ ಪರವಾದ ಕಾನೂನುಗಳನ್ನು ತಿಳಿದುಕೊಳ್ಳಬೇಕು’ ಎಂದು ಮನವಿ ಮಾಡಿದರು.

ಡಾನ್‌ ಬೋಸ್ಕೊ ಸೇವಾ ಕೇಂದ್ರ ನಿರ್ದೇಶಕ ರೆವರೆಂಡ್‌ ಫಾ.‍ಪ್ರವೀಣ್‌ ಕೆ.ಜೆ ಪ್ರಸ್ತಾವಿಕ ಮಾತನಾಡಿ, ‘ಮಹಿಳಾ ದಿನಾಚರಣೆ ಪ್ರತಿಯೊಬ್ಬರ ಜವಾಬ್ದಾರಿ ನೆನಪಿಸುವ ದಿನವಾಗಿದೆ. ಮಹಿಳೆಯರು ತಾವು ಬುದ್ದಿವಂತರಾಗಿ ಮಕ್ಕಳಿಗೆ ಶಿಕ್ಷಣ ನೀಡಬೇಕು. ಜೊತೆಗೆ ಮಕ್ಕಳ ರಕ್ಷಣೆಯೂ ಪೋಷಕರದ್ದಾಗಿದೆ. ಹದಿಹರಿಯದ ಮಕ್ಕಳಿಗೆ ಪೋಷಕರುಶಿಕ್ಷಣ ನೀಡಬೇಕು’ ಎಂದರು.

ಇದೇ ವೇಳೆ ಮಹಿಳಾ ಮತ್ತು ಮಕ್ಕಳ ಕಾನೂನು ಸಲಹಾ ಸಮಿತಿ ರಚನೆ ಮಾಡಲಾಯಿತು.

ಡಾನ್‌ ಬೋಸ್ಕೊ ಸಂಸ್ಥೆಯ ರೆಕ್ಟರ್‌ ಮತ್ತು ಮ್ಯಾನೇಜರ್‌ ಫಾ.ಕೆ.ಸಿ. ಮ್ಯಾಥ್ಯೂ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಹಣಮಂತರಾಯ ಕರಡ್ಡಿ, ಮಹಿಳಾ ಪೊಲೀಸ್ ಠಾಣೆಯ ಪಿಎಸ್‌ಐ ಹೊಸಕೇರಪ್ಪ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಗೋವಿಂದ ಜಾಧವ, ಬಾಲ ನ್ಯಾಯ ಮಂಡಳಿ ಸದಸ್ಯೆ ನಿರ್ಮಲಾ ಹೂಗಾರ, ಮಹಿಳಾ ಶಕ್ತಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಬಸಲಿಂಗಮ್ಮ, ಡಾನ್‌ ಬೋಸ್ಕೊ ಆಂಗ್ಲ ಮಾಧ್ಯಮ ಶಾಲೆ ಪ್ರಾಂಶು‍ಪಾಲ ಫಾ.ಜಿತೀನ್‌, ಪ್ರಜಾವಾಣಿ ಜಿಲ್ಲಾ ವರದಿಗಾರ ಬಿ.ಜಿ.ಪ್ರವೀಣಕುಮಾರ, ಕಂದಕೂರ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಮಧುಮತಿ, ಸಂಸ್ಥೆಯ ಸಿಬ್ಬಂದಿ ಇದ್ದರು.

***

18 ಕ್ಕಿಂತ ಕಡಿಮೆ ವಯಸ್ಸಿನ ಯುವತಿಯರಿಗೆ ವಿವಾಹ ಮಾಡಬಾರದು. ಮಾಡಿದರೆ ಕಾನೂನು ಅಡಿಯಲ್ಲಿ ಶಿಕ್ಷೆ ಇದೆ. ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು

-ಪ್ರಕಾಶ ಅರ್ಜುನ ಬನಸೋಡೆ, ಹಿರಿಯ ಸಿವಿಲ್ ನ್ಯಾಯಾಧೀಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.