ADVERTISEMENT

ಕಕ್ಕೇರಾ: ರೈತರ ನೆಮ್ಮದಿ ಕಸಿದ ಮಳೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 17:31 IST
Last Updated 14 ಅಕ್ಟೋಬರ್ 2020, 17:31 IST
ಕಕ್ಕೇರಾ ಸಮೀಪದ ಹುಣಸಿಹೊಳೆಯ ಗ್ಯಾನಪ್ಪ ಕಾಂಬಳೆ ಗಾಳಿ-ಮಳೆಗೆ ನೆಲಕಚ್ಚಿದ ಭತ್ತ
ಕಕ್ಕೇರಾ ಸಮೀಪದ ಹುಣಸಿಹೊಳೆಯ ಗ್ಯಾನಪ್ಪ ಕಾಂಬಳೆ ಗಾಳಿ-ಮಳೆಗೆ ನೆಲಕಚ್ಚಿದ ಭತ್ತ   

ಕಕ್ಕೇರಾ: ‘ಇನ್ನು ಒಂದೂವರೆ ತಿಂಗಳೊಳಗೆ ಫಸಲು ಇನ್ನೇನು ಕೈಗೆಟಕಬಹುದು ಎಂದು ನೆಮ್ಮದಿಯಿಂದ ಇದ್ದೇವು. ಈ ಮಳೆಯಿಂದ ನೆಮ್ಮದಿಯ ಬದುಕು ಇಲ್ಲದಂತಾಗಿದೆ’ ಎಂದು ತಿಪ್ಪಣ್ಣ ಜಂಪಾ ತಮ್ಮ ನೋವು ತೋಡಿಕೊಂಡರು.

ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಪಟ್ಟಣದ ವ್ಯಾಪ್ತಿ ಹಾಗೂ ವಲಯದ ಅನೇಕ ಗ್ರಾಮಗಳಲ್ಲಿ ಅಪಾರ ಬೆಳೆ ಹಾಗೂ ಮನೆಗಳು ನೆಲಕ್ಕುರುಳಿವೆ. ಜನತೆ ಮಳೆ-ಗಾಳಿಗೆ ಹೆದರಿ ಮನೆಯಿಂದ ಹೊರಗೆ ಬಾರದೇ ಮನೆಯಲ್ಲಿ ಉಳಿಯುವಂತಾಯಿತು.

ಕಳೆದ ಹಲವು ದಿನಗಳಿಂದ ಜಿಲ್ಲೆಯಾದ್ಯಂತ ಭಾರೀ ಪ್ರಮಾಣದ ಗಾಳಿ ಬೀಸುವ ಮೂಲಕ ಮಳೆಯಾಗುತ್ತಿರುವುದರಿಂದ ವಲಯದ ದೇವಾಪುರ, ತಿಂಥಣಿ, ದೇವತ್ಕಲ್ ಹಾಗೂ ಆಲ್ದಾಳ್ ಗ್ರಾ.ಪಂ. ವ್ಯಾಪ್ತಿಗಳ ಹಲವು ಗ್ರಾಮಗಳಲ್ಲಿ ಅಪಾರ ಪ್ರಮಾಣದ ಭತ್ತ, ತೊಗರಿ ಹಾಗೂ ಹತ್ತಿ ಬೆಳೆಗಳು ಸಂಪೂರ್ಣ ನೆಲಕ್ಕಚ್ಚಿವೆ. ಮನೆಗಳ ಮೇಲ್ಚಾವಣಿ ಹಾಗೂ ಗೋಡೆಗಳು ಕುಸಿದಿವೆ. ಮಳೆಯಿಂದಾಗಿ ಹಳ್ಳ-ಕೊಳ್ಳಗಳು ಭರ್ತಿಯಾಗಿವೆ.

ADVERTISEMENT

ಮರಗಳು ವಿದ್ಯುತ್ ಕಂಬದ ಮೇಲೆ ಬಿದ್ದು ಮಂಗಳವಾರ ರಾತ್ರಿಯಿಂದ ಬುಧವಾರ ಮಧ್ಯಾಹ್ನದವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಪಟ್ಟಣದ ನಿಂಗಣ್ಣ ಬೋಯಿ ಗ್ಯಾರೇಜ್ ಮೇಲೆ ಬೃಹತ್ ಜಾಲಿಮರವೊಂದು ಬಿದ್ದು ಹಾನಿಯಾಗಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಜಿಟಿಜಿಟಿ ಮಳೆಯಲ್ಲಿ ಸಂತೆ: ಬುಧವಾರ ಸಂತೆಗೆ ಬಂದ ವ್ಯಾಪಾರಸ್ಥರು ಹಾಗೂ ಗ್ರಾಹಕರು ತಣ್ಣನೆಯ ಗಾಳಿ ಮಿಶ್ರಿತ ಜಿಟಿಜಿಟಿ ಮಳೆಯಿಂದ ರಕ್ಷಿಸಿಕೊಳ್ಳಲು ಕೊಡೆ ಮೊರೆಹೋದರು. ಆದರೂ ವ್ಯಾಪಾರ ಸ್ವಲ್ಪ ಕಡಿಮೆ ಎಂದು ಹೇಳುತ್ತಿದ್ದದ್ದು ಕಂಡು ಬಂತು.

ಲಕ್ಮಾಂತರ ರೂಪಾಯಿ ಸಾಲ ಮಾಡಿ ಭತ್ತ ಹಾಗೂ ಇನ್ನಿತರ ಬೆಳೆಗಳನ್ನು ಬೆಳೆದಿದ್ದೇವೆ. ಆದರೆ ಈ ಮಳೆ ಹಾಗೂ ಗಾಳಿಯಿಂದ ನಮ್ಮ ಕನಸೆಲ್ಲಾ ಮಣ್ಣಾಗಿದೆ. ಹೀಗಾಗಿ ಕೂಡಲೇ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಮನೆ ಹಾಗೂ ಜಮೀನು ಬೆಳೆ ಹಾನಿಯಾದ ರೈತರಿಗೆ ಕೂಡಲೇ ಪರಿಹಾರ ನೀಡಬೇಕೆಂದು ರೈತ ಸಂಘದ ಮುದ್ದಣ್ಣ ಅಮ್ಮಾಪೂರ, ಚಂದ್ರು ವಜ್ಜಲ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.