ಕೊಡೇಕಲ್ಲ (ಹುಣಸಗಿ): ನೆಲ ಜಲ ಮತ್ತು ಭಾಷೆಯ ವಿಷಯ ಬಂದಾಗ ಕರ್ನಾಟಕ ರಕ್ಷಣಾ ವೇದಿಕೆಯ ಎಲ್ಲ ಪದಾಧಿಕಾರಿಗಳು ಬೀದಿಗಿಳಿದು ಹೋರಾಟ ಮಾಡುವಲ್ಲಿ ಎಂದಿಗೂ ಮುಂದೆ ಇದ್ದಾರೆ ಎಂದು ಸುರಪುರ ಶಾಸಕ ರಾಜೂಗೌಡ ಹೇಳಿದರು.
ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ಪಟ್ಟಣದ ಶ್ರೀಗುರು ದುರದುಂಡೇಶ್ವರ ವಿರಕ್ತಮಠದ ಆವರಣದಲ್ಲಿ ಕರವೇ (ಪ್ರವೀಣ್ ಶೆಟ್ಟಿ ಬಣ) ತಾಲ್ಲೂಕು ಘಟಕದಿಂದ ಹಮ್ಮಿಕೊಂಡಿದ್ದ ಕಲ್ಯಾಣ ಕೊಡೇಕಲ್ಲ ವೈಭವ 9 ನೇ ವರ್ಷದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕನ್ನಡ ನಾಡಿಗೆ ಭವ್ಯ ಪರಂಪರೆಯ ಇತಿಹಾಸವಿದೆ. ಆದ್ದರಿಂದ ನಾವು ಎಲ್ಲರೂ ಹೆಮ್ಮೆ ಪಡುವ ರೀತಿಯಲ್ಲಿ ಕೆಲಸ ಮಾಡೋಣ ಎಂದರು.
ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಡಾ.ಶರಣು.ಬಿ.ಗದ್ದುಗೆ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದ ಗಡಿ ಭಾಗದ ಜನರು ಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕು ಪರದಾಡುತ್ತಿದ್ದಾರೆ. ಆದ್ದರಿಂದ ಗಡಿ ಭಾಗದಲ್ಲಿ ಭಾಷೆಯ ಬೆಳವಣಿಗೆಗೆ ಕಾರ್ಯತಂತ್ರ ರೂಪಿಸೋಣ. ಗಡಿಯಲ್ಲಿನ ಕನ್ನಡದ ಕಲಾವಿದರ ಹಿತಕ್ಕಾಗಿ ಯೋಜನೆ ಹಮ್ಮಿಕೊಳೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೊಡೇಕಲ್ಲ ಬಸವಪೀಠ ಪೀಠಾಧಿಪತಿ ವೃಷಬೇಂದ್ರ ಅಪ್ಪ, ದುರದುಂಡೇಶ್ವರ ವಿರಕ್ತಮಠದ ಪೀಠಾಧಿಪತಿ ಶಿವಕುಮಾರ ಸ್ವಾಮೀಜಿ ನೇತೃತ್ವ ವಹಿಸಿದ್ದರು.
ಬಲಶೆಟ್ಟಿಹಾಳದ ಸಿದ್ಧಲಿಂಗ ಶಾಸ್ತ್ರಿ, ರಾಜಾ ಜಿತೇಂದ್ರನಾಯಕ ಜಹಾಗಿರದಾರ, ರಾಜಾ ವೆಂಕಟಪ್ಪನಾಯಕ ಜಹಾಗಿರದಾರ, ಜಿ.ಪಂ.ಮಾಜಿ ಸದಸ್ಯ ಎಚ್.ಸಿ.ಪಾಟೀಲ್, ಬಿ.ಎಂ.ಹಳ್ಳಿಕೋಟೆ, ಕನಕು ಜೀರಾಳ, ವಸಂತಗೌಡ ಮಾಲಿಪಾಟೀಲ್, ಡಾ.ಬಿ.ಬಿ.ಬಿರಾದಾರ, ವೈದ್ಯಾಧಿಕಾರಿ ಡಾ.ಧರ್ಮರಾಜ ಹೊಸಮನಿ, ಸಿದ್ದನಗೌಡ ಕರಿಭಾವಿ, ಸುರೇಶ ದೇವೂರು, ನಿಂಗಣ್ಣ ಗೆದ್ದಲಮರಿ, ಶಿವರಾಜ ಹೊಕ್ರಾಣಿ, ಅಮರೇಶ ದೇವರಗಡ್ಡಿ, ತಿರುಪತಿ ಬೊಮ್ಮಗುಡ್ಡ, ದೇವು ತೀರ್ಥ ಇದ್ದರು.
ಇದೇ ಸಂದರ್ಭದಲ್ಲಿ ಡಾ.ನೀಲಮ್ಮ ಪಾಟೀಲ್, ಶರಣಪ್ಪ ಪತ್ತಾರ, ರಾಮನಗೌಡ ಮಾಲಿಪಾಟೀಲ್, ಮಲ್ಲಿಕಾರ್ಜುನ ಮಮದಾಪುರ, ಚಂದ್ರಶೇಖರ ಹೊಸಮಠ ಅವರಿಗೆ ಕರುನಾಡ ಕೇಸರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕರವೇ ತಾಲ್ಲೂಕು ಅಧ್ಯಕ್ಷ ರಮೇಶ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಗುರುರಾಜ ಜ್ಯೋಶಿ ಸ್ವಾಗತಿಸಿದರು. ರಮೇಶ ಪೂಜಾರಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.