ಯಾದಗಿರಿ: ಕನ್ನಡ ಕೇವಲ ಭಾಷೆಯಲ್ಲ. ಅದೊಂದು ಸಂಸ್ಕೃತಿಯಾಗಿದೆ ಎಂದು ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ಅಭಿಪ್ರಾಯಿಸಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 67 ನೇ ಕನ್ನಡ ರಾಜ್ಯೋತ್ಸವ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸತ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡಿಗರಾದ ನಾವುಗಳೆಲ್ಲ ಇಂದು ಕನ್ನಡದ ಅಸ್ಮಿತೆಯನ್ನು ಉಳಿಸಿ, ಬೆಳೆಸಬೇಕಾದ ಅನಿವಾರ್ಯ ಇದೆ. ಅಂತೆಯೇ ಬಿಎಂಶ್ರೀ ಅವರು ಕನ್ನಡ ಅದು ಮಂತ್ರ ಶಕ್ತಿ ಎಂದು ಹೇಳಿರುವುದು ಕನ್ನಡದ ಹಿರಿಮೆಯನ್ನು ಸಾರಿ ಹೇಳುತ್ತದೆ. ಅಂತಹ ಕನ್ಮಡ ಭಾಷೆಯನ್ನು ಅಸ್ಮಿತೆಯನ್ನು ಉಳಿಸುವ ಜವಾಬ್ದಾರಿ ನಮ್ಮದಾಗಿದೆ ಎಂದರು.
ಕನ್ನಡಕ್ಕೆ ಬಿಕ್ಕಟ್ಟು ಬಂದಾಗ ಅನೇಕ ಕನ್ನಡ ಪರ ಸಂಘಟನೆಗಳು ಹೋರಾಟವನ್ನು ಮಾಡಿವೆ. ಅದರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮುಂಚೂಣಿಯಲ್ಲಿ ನಿಂತು ಕನ್ನಡದ ಪರಂಪರೆಯನ್ನು ಎತ್ತಿ ಹಿಡಿದಿರುವುದು ಶ್ಲಾಘನೀಯ ಸಂಗತಿ ಎಂದರು.
ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎನ್ನುವಂತೆ ಮಾತನಾಡಲು ಕೋಟಿ ಭಾಷೆಗಳಿವೆ. ಕಲಿಯಲು ಮಾತ್ರ ಕನ್ನಡ ಭಾಷೆ ಒಂದೇ ಎಂಬ ಸತ್ಯವನ್ನು ಕನ್ನಡಿಗರೆಲ್ಲ ಅರಿಯಬೇಕೆಂದು ಹೇಳಿದರು.
ನಾವು ಬಾಳಿ ಬದುಕಲು ನಾಡು ಮತ್ತು ನಾವು ಆಡುವ ನುಡಿಯ ಬಗ್ಗೆ ಪ್ರತಿಯೊಬ್ಬರೂ ಗೌರವಾದಾರಗಳನ್ನು ಹೊಂದಬೇಕು ಎಂಬ ಮಾತಿನ ಮಹತ್ವವನ್ನು ತಿಳಿದುಕೊಳ್ಳಬೇಕೆಂದು ಹೇಳಿದರು.
ಸರ್ಕಾರಿ ಪದವಿ ಮಹಾವಿದ್ಯಾಲಯ ಕಾಲೇಜು ಪ್ರಾಂಶುಪಾಲ ಡಾ. ಶುಭಾಶ್ಚಂದ್ರ ಕೌಲಗಿ ಪ್ರಾಸ್ತಾವಿಕ ಮಾತನಾಡಿ, ಹಿರಿಯ ಸಾಹಿತಿಗಳು, ಕನ್ನಡ ನಾಡು ನುಡಿ ಕಟ್ಟಲು ಶ್ರಮಿಸಿದ್ದಾರೆ. ಕನ್ನಡ ಭಾಷೆ ಬೆಳೆಸುವ ಕೆಲಸ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದರು.
ಕಸಾಪ ಜಿಲ್ಲಾ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಅಧ್ಯಕ್ಷತೆ ವಹಿಸಿದ್ದರು.ನ್ಯೂ ಕನ್ನಡ ಕಾಲೇಜಿನ ಪ್ರಾಂಶುಪಾಲ ವೆಂಕಟರಾವ್ ಕುಲಕರ್ಣಿ, ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ, ಯುಡಾ ಅಧ್ಯಕ್ಷ ರುದ್ರಗೌಡ ಪಾಟೀಲ, ಯಾದಗಿರಿ ತಾಲ್ಲೂಕು ಅಧ್ಯಕ್ಷ ವೆಂಕಟೇಶ ಕಲಾಕಂಬ, ವಡಗೇರಾ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಕರಕಳ್ಳಿ ಇದ್ದರು.
ಬಸವರಾಜ ಮೋಟ್ನಳ್ಳಿ ಸ್ವಾಗತಿಸಿದರು. ಡಾ.ಸಿದ್ದರಾಜ ರೆಡ್ಡಿ ನಿರೂಪಿಸಿ, ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.