ADVERTISEMENT

ರಾಜ್ಯ ಬಜೆಟ್‌: ಬೆಟ್ಟದಷ್ಟು ನಿರೀಕ್ಷೆ, ಯಾದಗಿರಿ ಜಿಲ್ಲೆ ಸಿಕ್ಕಿದ್ದು ಅಲ್ಪ

ರಾಜ್ಯ ಬಜೆಟ್‌: ಜಿಲ್ಲೆಯ ಸಮಗ್ರ ಅಭಿವೃದ್ಧಿಗಿಲ್ಲ ಪ್ಯಾಕೇಜ್‌, ನಿರಾಶೆ ಮೂಡಿಸಿದ ಆಯವ್ಯಯ

ಬಿ.ಜಿ.ಪ್ರವೀಣಕುಮಾರ
Published 17 ಫೆಬ್ರುವರಿ 2023, 19:30 IST
Last Updated 17 ಫೆಬ್ರುವರಿ 2023, 19:30 IST
ಶಿವಯೋಗಿ ಜಿ. ಹಿರೇಮಠ, ಉದ್ಯಮಿ, ಶಹಾಪುರ
ಶಿವಯೋಗಿ ಜಿ. ಹಿರೇಮಠ, ಉದ್ಯಮಿ, ಶಹಾಪುರ   

ಯಾದಗಿರಿ: ಬಿಜೆಪಿ ಸರ್ಕಾರದ 2023–24ನೇ ಸಾಲಿನ ರಾಜ್ಯ ಬಜೆಟ್‌ ಮಂಡನೆಯಾಗಿದ್ದು, ಜಿಲ್ಲೆಗೆ ಬೆಟ್ಟದಷ್ಟು ನಿರೀಕ್ಷೆ ಇತ್ತು. ಅದರಲ್ಲಿ ಕೆಲವೇ ಘೋಷಣೆ ಮಾಡಲಾಗಿದೆ.

ನೀರಾವರಿಗೆ ಸ್ವಲ್ಪ ಮಟ್ಟಿಗೆ ಆದ್ಯತೆ ನೀಡಲಾಗಿದೆ. ಅದು ಬಿಟ್ಟರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯಾವುದೇ ಯೋಜನೆಗಳಿಲ್ಲ. ಇದರಿಂದ ಜಿಲ್ಲೆಯ ಜನತೆಗೆ ಮತ್ತೆ ನಿರಾಶೆ ಮೂಡಿದೆ.

ಹೊಸ ತಾಲ್ಲೂಕುಗಳು ಘೋಷಣೆಗೆ ಸೀಮಿತವಾಗಿವೆ. ಸಮಗ್ರ ಅಭಿವೃದ್ಧಿ ಬಗ್ಗೆ ಬೆಳಕು ಚೆಲ್ಲಿಲ್ಲ. ರಾಜ್ಯದ ಹೊಸ ತಾಲ್ಲೂಕುಗಳ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಲಾಗಿದೆ. ಹೊರತು ಯಾವ ರೀತಿ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿಲ್ಲ.

ADVERTISEMENT

ಪ್ರವಾಸೋದ್ಯಮ ಕ್ಷೇತ್ರಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಯಾವುದೇ ಯೋಜನೆ ಜಿಲ್ಲೆಗೆ ಘೋಷಣೆಯಾಗಿಲ್ಲ.

ಬ್ರಿಜ್‌ ಕಂ ಬ್ಯಾರೇಜ್‌ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮಹಾತ್ವಾಕಾಂಕ್ಷಿ ಜಿಲ್ಲೆಯಾಗಿದ್ದರಿಂದ ಹೆಚ್ಚಿನ ಅನುದಾನ ಅಥವಾ ಪ್ಯಾಕೇಜ್‌ ಘೋಷಣೆ ನಿರೀಕ್ಷೆ ಹುಸಿಯಾಗಿದೆ.

ಜಿಲ್ಲೆಯೂ ಎಲ್ಲ ರೀತಿಯಿಂದಲೂ ಹಿಂದುಳಿದಿದ್ದು, ಸಮಗ್ರ ಅಭಿವೃದ್ಧಿಗೆ ಸರ್ಕಾರ ಮುಂದಾಗುತ್ತದೆ ಎನ್ನುವ ನಿರೀಕ್ಷೆ ಹೊಂದಲಾಗಿತ್ತು. ಆದರೆ, ಮೂಗಿಗೆ ತುಪ್ಪ ಸವರಿದೆ ಎಂದು ಜಿಲ್ಲೆಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಘೋಷಣೆಯಾದ ಯೋಜನೆಗಳು ಅನುಷ್ಠಾನವಾಗಿಲ್ಲ. ಬಿಜೆಪಿ ಸರ್ಕಾರದಲ್ಲೂ ಘೋಷಣೆಗೆ ಸೀಮಿತವಾಗಿದೆ.

ಕೈಗಾರಿಕೆಗಳಿಲ್ಲದೇ ಜನ ಗುಳೆ ಹೋಗುವುದು ಸಾಮಾನ್ಯವಾಗಿದೆ. ಕಡೇಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಭೂಮಿ ಸ್ವಾಧೀನ ಪಡಿಸಿಕೊಂಡಿರುವುದೇ ಸಾಧನೆಯಾಗಿದೆ. ಇಲ್ಲಿಯತನಕ ನಿರೀಕ್ಷಿತ ಮಟ್ಟದಲ್ಲಿ ಕಂಪನೆಗಳು ಬಂದಿಲ್ಲ.

‘ರೈತರಿಗೆ 3ರಿಂದ 5ಲಕ್ಷ ವರೆಗೆ ಬಡ್ಡಿ ರಹಿತ ಸಾಲ ಘೋಷಿಸಿದ್ದು ಸ್ವಾಗತ. ಬರಿ ಘೋಷಣೆಯಾಗಬಾರದು. ತ್ವರಿತವಾಗಿ ಜಾರಿಯಾಗಬೇಕು. ಜಿಲ್ಲೆಗೆ ಪ್ರತ್ಯೇಕ ಸಹಕಾರ ಬ್ಯಾಂಕ್ ಸ್ಥಾಪನೆ ಮಾಡಬೇಕು’ ಎಂದು ನಾಯ್ಕಲ್‌ ಪ್ರಗತಿಪರ ರೈತ ಮಲ್ಲಿಕಾರ್ಜುನರೆಡ್ಡಿ ವಡವಡಗಿ ಹೇಳುತ್ತಾರೆ.

***

ಜಿಲ್ಲೆಗೆ ಸಿಕ್ಕಿದ್ದೇನು?

* ಯಾದಗಿರಿ- ಬಳ್ಳಾರಿ - ರಾಯಚೂರು: ಸಿಗಡಿ ಕೃಷಿ ಕ್ಲಸ್ಟರ್ ಸ್ಥಾಪನೆ

* ಯಾದಗಿರಿ ಹಾಗೂ ರಾಯಚೂರು: ಕೆರೆ ತುಂಬುವ ಯೋಜನೆಗಳು ಈ ವರ್ಷವೇ ಪೂರ್ಣ
* ನೆಟೆರೋಗ: ₹10 ಸಾವಿರ ಪರಿಹಾರ

* ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಕ್ರಿಟಿಕಲ್ ಕೇರ್ ಬ್ಲಾಕ್ ಸ್ಥಾಪನೆ

* ನಮ್ಮ ಜಿಲ್ಲೆ ನಮ್ಮ ಸಂಸ್ಕೃತಿ ಕಾರ್ಯಕ್ರಮದಡಿ ಪ್ರತಿ ಜಿಲ್ಲೆಯಲ್ಲಿ ಜಾನಪದ ಹಬ್ಬದ ಅಯೋಜನೆ

* ಯಾದಗಿರಿ ಮತ್ತು ಕಲಬುರ್ಗಿಯಲ್ಲಿ ₹443 ಕೋಟಿ ವೆಚ್ಚದಲ್ಲಿ 138 ಮೇಲ್ಮೈ ಸಣ್ಣ ನೀರಾವರಿ ಕಾಮಗಾರಿ ಕೈಗೊಳ್ಳಲು ಕ್ರಮ

***

ಬಜೆಟ್‌ನಲ್ಲಿ ಘೋಷಣೆ ಮಾಡಿದ್ದು ಅನುಷ್ಠಾನಗೊಳ್ಳಬೇಕು. ಸಿಗಡಿ ಕ್ಲಸ್ಟರ್ ನಮ್ಮಲ್ಲಿ ಯಶಸ್ವಿಯಾಗುವುದು ಅನುಮಾನ. ಕಾಲುವೆ ನೀರು ಸಮರ್ಪಕವಾಗಿ ಸಿಗದೆ ಇರುವಾಗ ಮೀನು ಸಾಕಾಣಿಕೆ ಮಾಡುವುದು ಕಷ್ಟದ ಕೆಲಸ. ಕೆಕೆಆರ್‌ಡಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಬೇಕಾಗಿತ್ತು
-ಶಿವಯೋಗಿ ಜಿ. ಹಿರೇಮಠ, ಉದ್ಯಮಿ, ಶಹಾಪುರ

***

ಬಜೆಟ್‌ನಲ್ಲಿ ಹತ್ತಿ ಬೆಳೆಗೆ ಬೆಂಬಲ ಬೆಲೆ ನೀಡಿದೆ ನಿರಾಶೆಗೊಳಿಸಿದೆ. ಕೃಷ್ಣಾಅಚ್ಚುಕಟ್ಟು ಪ್ರದೇಶದಲ್ಲಿ ರೈತರು ವಾಣಿಜ್ಯ ಬೆಳೆಯಾದ ಹತ್ತಿ ಬೆಳೆಯುತ್ತಿರುವಾಗ ಘೋಷಣೆ ಮಾಡಿದೆ ಇರುವುದು ರೈತರನ್ನು, ಹತ್ತಿ ಕಾರ್ಖಾನೆ ಮಾಲೀಕರನ್ನು ಸಂಕಷ್ಟಕ್ಕೆ ಸಿಲುಕುವ ಭೀತಿ ಎದುರಾಗಿದೆ.ಕೈಗಾರಿಕೆ ಉತ್ತೇಜನಕ್ಕೆ ಹೊಸ ಯೋಜನೆ ರೂಪಿಸಿಲ್ಲ.
-ಗುರು ಮಣಿಕಂಠ, ಉದ್ಯಮಿ, ಶಹಾಪುರ

***

ಗೃಹಿಣಿ ಶಕ್ತಿ ಯೋಜನೆ, ಭೂರಹಿತ ಮಹಿಳಾ ಕಾರ್ಮಿಕರಿಗೆ ತಿಂಗಳಿಗೆ ₹500 ಸಹಾಯ ಧನ, ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ಸೌಲಭ್ಯ ಹೊರತುಪಡಿಸಿ ಸಮಗ್ರ ಮಹಿಳಾ ಅಭಿವೃದ್ಧಿಗೆ ಒತ್ತು ನೀಡದಿರುವುದು ಖೇದಕರ.
-ಛಾಯಾ ಕುಂಟೋಜಿ, ವಕೀಲರು ಸುರಪುರ

***

ಸ್ವಾಮಿನಾಥನ್ ವರದಿಯ ಅಂಶಗಳು ಬಜೆಟ್‌ನಲ್ಲಿ ಇಲ್ಲ. ರೈತ ಆಸೆಯಿಂದ ಕಾಯುತ್ತಿದ್ದ ಬಜೆಟ್ ನಿರಾಸೆ ಮೂಡಿಸಿದೆ. ಬಡ್ಡಿ ರಹಿತ ಸಾಲ ಮೂಗಿಗೆ ತುಪ್ಪ ಸವರುವ ಕೆಲಸವಾಗಿದೆ
-ಹಣಮಂತ್ರಾಯ ಚಂದಲಾಪುರ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಸುರಪುರ

***

ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಹೊರಗುತ್ತಿಗೆ ನೌಕರರು ಆಸೆಗಣ್ಣಿನಿಂದ ನಿರೀಕ್ಷೆ ಮಾಡುತ್ತಿದ್ದ ನೇರ ವೇತನ ಪಾವತಿ ಬಜೆಟ್‌ನಲ್ಲಿ ಘೋಷಿಸಿಲ್ಲ. ಇದರಿಂದ ಕಾರ್ಮಿಕರಿಗೆ ನಿರಾಶೆಯಾಗಿದೆ.
-ಜಗದೀಶ ಶಾಖಾನವರ, ಪೌರಕಾರ್ಮಿಕ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಸುರಪುರ

***

ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಹಕಾರ ಸಂಘಗಳು ಸರಿಯಾಗಿ ನಡೆಯುತ್ತಿಲ್ಲ.‌ ಜೇವರ್ಗಿ ಬಳಿ ಫುಡ್ ಪಾರ್ಕ್ ಮಾಡಿದ್ದರೂ ಉಪಯೋಗವಿಲ್ಲ. ಕೃಷಿ ಉತ್ಪನ್ನಕ್ಕೆ ಬೆಲೆ ಕೊಡಿ ಕೆಲಸಕ್ಕೆ ಬಾರದ ಯೋಜನೆಗಳನ್ನು ಜಾರಿಗೆ ತಂದರೂ ಅಷ್ಟೆ
-ಭಾಸ್ಕರರಾವ ಮುಡಬೂಳ, ರೈತ ಮುಖಂಡ

***

ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದ್ದ ರಾಜ್ಯ ಸರ್ಕಾರ ನಿರಾಸೆ ಮೂಡಿಸುವ ಬಜೆಟ್ ಮಂಡಿಸಿದೆ. ಜಿಲ್ಲೆಯಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ಶೈಕ್ಷಣಿಕ ಪ್ರಗತಿಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳದೇ ಯಾದಗಿರಿ ಜಿಲ್ಲೆಯನ್ನು ಕಡೆಗಣಿಸಿರುವ ರಾಜ್ಯ ಸರ್ಕಾರದ ಬಜೆಟ್ ಸಪ್ಪೆಯಾಗಿದ್ದು, ಹಿಂದುಳಿದ ಜಿಲ್ಲೆಯ ಪ್ರಗತಿಗೆ ವಿಶೇಷ ಅಂಶಗಳು ಯಾವಿಲ್ಲ
-ಚನ್ನಪ್ಪಗೌಡ ಮೋಸಂಬಿ, ಜೆಡಿಎಸ್ ಜಿಲ್ಲಾಧ್ಯಕ್ಷ

***

ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ಬಸ್ ಪಾಸ್ ವ್ಯವಸ್ಥೆ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಗ್ರಂಥಾಲಯಕ್ಕೆ ಒತ್ತು ನೀಡಿರುವುದು ಖುಷಿ ತಂದಿದೆ. ಇದೇ ರೀತಿ ವಿದ್ಯಾರ್ಥಿಗಳ ಉನ್ನತ ಭವಿಷ್ಯಕ್ಕೆ ಹೆಚ್ಚು ಪ್ರೋತ್ಸಾಹ ಧನವನ್ನು ನೀಡುವ ಮೂಲಕ ಸರ್ಕಾರ ಉನ್ನತ ಶಿಕ್ಷಣಕ್ಕೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಬೇಕಿದೆ.
-ಸಿದ್ದು, ಪದವಿ ವಿದ್ಯಾರ್ಥಿ ಹುಣಸಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.