ADVERTISEMENT

‘ಬೆಳಕು ಜ್ಞಾನದ ಸಂಕೇತ’

ಆಂಧ್ರಪ್ರದೇಶದ ಶ್ರೀಶೈಲಂನಲ್ಲಿ ಕಾರ್ತಿಕ ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 3:59 IST
Last Updated 4 ಡಿಸೆಂಬರ್ 2021, 3:59 IST
ಆಂಧ್ರಪ್ರದೇಶದ ಶ್ರೀಶೈಲಂನಲ್ಲಿರುವ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಲಕ್ಷ ದೀಪೋತ್ಸವಕ್ಕೆ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು
ಆಂಧ್ರಪ್ರದೇಶದ ಶ್ರೀಶೈಲಂನಲ್ಲಿರುವ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಲಕ್ಷ ದೀಪೋತ್ಸವಕ್ಕೆ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು   

ಯಾದಗಿರಿ: ಕತ್ತಲೆ ಅಜ್ಞಾನದ ಸಂಕೇತವಾದರೇ, ಬೆಳಕು ಜ್ಞಾನದ ಸಂಕೇತ. ಬಾಹ್ಯ ಕತ್ತಲೆ ಕಳೆಯಲು ದೀಪ ಬೇಕು. ಮನದ ಅಜ್ಞಾನ ದೂರ ಮಾಡಲು ಜ್ಞಾನ ಬೋಧಾಮೃತ ಬೆಳಕಿನ ಕಿರಣ ಮುಖ್ಯ ಎಂದು ಶ್ರೀಶೈಲಂ ಪೀಠದ 1008 ಜಗದ್ಗುರು ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿದರು.

ನೆರೆಯ ಆಂಧ್ರಪ್ರದೇಶದ ಶ್ರೀಶೈಲಂನಲ್ಲಿರುವ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಕಾರ್ತಿಕ ಮಾಸದಅಂಗವಾಗಿಗದಗನ ಹೇಮರೆಡ್ಡಿ ಮಲ್ಲಮ್ಮ ರಾಜ್ಯ ಯುವ ಜಾಗೃತಿ ವೇದಿಕೆ ಹಮ್ಮಿಕೊಂಡಿದ್ದ ದಶಮಾನೋತ್ಸವ ಲಕ್ಷ ದೀಪೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಹೇಮರೆಡ್ಡಿ ಮಲ್ಲಮ್ಮ ತಮ್ಮ ಆಧ್ಯಾತ್ಮಿಕ ಸಾಧನೆಯಿಂದ ಶಿವನ ಒಲುಮೆ ಗಳಿಸಿ ಸಾಂಸಾರಿಕ ಹಾಗೂ ಪಾರಮಾರ್ಥಿಕವಾಗಿ ಬದುಕಿನಲ್ಲಿ ಯಶಸ್ವಿ ಗಳಿಸಿ ಸಮಾಜಕ್ಕೆ ಮಾನವೀಯ ಮೌಲ್ಯಗಳನ್ನು ನೀಡಿ ಇತಿಹಾಸ ಪುಟದಲ್ಲಿ ಉಳಿದಿದ್ದಾರೆ ಎಂದು ಹೇಳಿದರು.

ADVERTISEMENT

ಶ್ರೀಶೈಲಂ ಕ್ಷೇತ್ರಕ್ಕೆ ಅನಾದಿಕಾಲದಿಂದಲೂ ಕನ್ನಡಿಗರೂ ಅಗತ್ಯ ಸಹಾಯ ಸಹಕಾರ ನೀಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ್ದಾರೆ. ಆಂಧ್ರಪ್ರದೇಶ ಸರ್ಕಾರ ಶ್ರೀಶೈಲಂ ಪೀಠಕ್ಕೆ 10 ಎಕರೆ ಜಮೀನು ನೀಡಿದೆ. ಮೊದಲ ಹಂತವಾಗಿ ಮಲ್ಲಮ್ಮಳ ದೇವಸ್ಥಾನದ ಎದುರೆ 5 ಎಕರೆ ಭೂಮಿ ಗುರುತಿಸಲಾಗಿದೆ ಎಂದರು.

ಯುಗಾದಿ ಹಾಗೂ ಶಿವರಾತ್ರಿ ದಿನದಂದು ಇಲ್ಲಿಗೆ ಆಗಮಿಸುವ ಸಹಸ್ರಾರು ಕನ್ನಡಿಗ ಭಕ್ತರಿಗೆ ಅನುಕೂಲವಾಗಲು ಭವ್ಯ ಯಾತ್ರಿ ನಿವಾಸ, ಆಸ್ಪತ್ರೆ ನಿರ್ಮಾಣ ಮಾಡಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಮುಂದಿನ ವರ್ಷ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಶೈಲಂ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಲವನ್ನ, ಇಡೀ ಭರತ ಭೂಮಿಯಲ್ಲಿಯೇ ಶ್ರೀಶೈಲಂ ಕ್ಷೇತ್ರ ಭೂ ಕೈಲಾಸವಾಗಿದೆ. ದರ್ಶನ ಪಡೆದ ಜನರ ಬದುಕು ಪಾವನವಾಗುತ್ತದೆ ಎಂದು ಹೇಳಿದರು.

ಸಮಾಜದ ಯುವ ಮುಖಂಡ ಮಿಥುನ್ ಪಾಟೀಲ ರೋಣ, ರಾಜ್ಯ ಘಟಕದ ಅಧ್ಯಕ್ಷ ಅನಿಲಕುಮಾರ ತೆಗ್ಗಿನಕೇರಿ ಮಾತನಾಡಿದರು.

ಜಮಖಂಡಿಯ ಗೌರಿಶಂಕರ ಶಿವಾಚಾರ್ಯರು, ಜೈನಾಪುರದ ರೇಣುಕಾ ಶಿವಾಚಾರ್ಯರು, ವೈ.ರುದ್ರಗೌಡ, ಗುರುಪಾದಯ್ಯಸ್ವಾಮಿ, ಓಂಕಾರಯ್ಯಸ್ವಾಮಿ, ಮಂಜುನಾಥರೆಡ್ಡಿ ಗದಗ, ಚಂದ್ರಶೇಖರ ಪಾಟೀಲ ದೇವದುರ್ಗ, ಭಾಸ್ಕರರೆಡ್ಡಿ, ಯಲ್ಲಾಲಿಂಗರೆಡ್ಡಿ ತಳಕ, ವೀರೇಂದ್ರ ಶಿರೋಳ, ರಮೇಶ ರಬ್ಬನಳ್ಳಿ, ಮಂಜು ಭಗವತಿ, ವಿಜಯ ಶಿವಪ್ಪ ಸೇರಿದಂತೆ ರಾಜ್ಯದ ವಿವಿಧೆಡೆಯಿಮದ ಸಾವಿರಾರು ಭಕ್ತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.