
ಕೆಂಭಾವಿ: ಪಟ್ಟಣದ ಸರ್ವೆ ನಂ 612ರ ಜಾಗವನ್ನು ಅನಧೀಕೃತ ಒತ್ತುವರಿಯಾಗಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಕಳೆದ ನಾಲ್ಕು ದಿನಗಳಿಂದ ಹಾಲುಮತ ಸಮಾಜದವರು ನಡೆಸುತ್ತಿದ್ದ ಧರಣಿ ಸತ್ಯಾಗ್ರಹ ಶನಿವಾರ ರಾತ್ರಿ ಅಂತ್ಯಗೊಂಡಿತು.
ಮಾಳಹಳ್ಳಿ ಮಾಳಿಂಗರಾಯನ ದೇವಸ್ಥಾನದ ಕೆಂಚರಾಯ ಮುತ್ಯಾ ನೇತೃತ್ವದಲ್ಲಿ ಸಮಾಜದ ಹಲವರು ಈ ಬಗ್ಗೆ ಅನಧೀಕೃತವಾಗಿ ನಿರ್ಮಿಸಿದ್ದ ಶೆಡ್ ಮುಂದೆ ಧರಣಿ ಕುಳಿತಿದ್ದರು.
‘ಕಾನೂನಿನ ಅನ್ವಯ ಕಂದಾಯ ಮತ್ತು ಪುರಸಭೆ ಅಧಿಕಾರಿಗಳು ಜಂಟಿಯಾಗಿ ಶನಿವಾರ ರಾತ್ರಿ ಅನಧೀಕೃತ ಶೆಡ್ ತೆರವುಗೊಳಿಸಿದ. ಹೀಗಾಗಿ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕ ಹಿಂದಕ್ಕೆ ಪಡೆಯಲಾಗಿದ್ದು ನಮ್ಮ ದೇವಸ್ಥಾನದ ಜಾಗದಲ್ಲಿ ಮುಂದಿನ ದಿನಗಳಲ್ಲಿ ಯಾರಾದರೂ ಅನಧೀಕೃತವಾಗಿ ಆಕ್ರಮಿಸಿದರೆ ನಮ್ಮ ಹೋರಾಟ ಮತ್ತೆ ನಿರಂತರ ನಡೆಯಲಿದೆ’ ಎಂದು ಕೆಂಚರಾಯ ಮುತ್ಯಾ ತಿಳಿಸಿದರು.
ಪ್ರತಿಭಟನ ಸ್ಥಳಕ್ಕೆ ಶನಿವಾರ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಶರಣಪ್ಪ ಸಲಾದಪೂರ ಅವರು ಭೇಟಿ ನೀಡಿ ಪುರಸಭೆ, ಕಂದಾಯ ಅಧಿಕಾರಿಗಳು ಹಾಗೂ ಧರಣಿ ನಿರತ ಸಮಾಜದ ಪ್ರಮುಖರ ಜೊತೆ ಚರ್ಚಿಸಿ ಸ್ಥಳದಲ್ಲಿಯೆ ತಹಸೀಲ್ದಾರ್ ಜೊತೆ ಮಾತನಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.