ADVERTISEMENT

ದಂಡಾಧಿಕಾರಿಗಳಿಂದ ಕೆಂಭಾವಿ ವಲಯ ನಿರ್ಲಕ್ಷ 

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 8:00 IST
Last Updated 10 ಅಕ್ಟೋಬರ್ 2025, 8:00 IST
ನಿಂಗನಗೌಡ ದೇಸಾಯಿ
ನಿಂಗನಗೌಡ ದೇಸಾಯಿ   

ಕೆಂಭಾವಿ: ‘ಪಟ್ಟಣ ಸೇರಿದಂತೆ ವಲಯದಲ್ಲಿ ವಿಪರೀತ ಮಳೆ ಸುರಿದ ಹಿನ್ನೆಲೆ  ಅತಿವೃಷ್ಠಿ ಸಂಭವಿಸಿ, ಜನಬೀಡಿತ ಪ್ರದೇಶಗಳಲ್ಲಿ ನೀರು ನುಗ್ಗಿ ಹಲವು ಅವಾಂತರಗಳು ಸೃಷ್ಠಿಯಾದರೂ ಸುರಪುರ ತಹಶೀಲ್ದಾರ್‌ರು ಅತಿವೃಷ್ಟಿ ಪ್ರದೇಶಗಳಿಗೆ ಭೇಟಿ ನೀಡಿ, ಜನರ ಕಷ್ಟ ಆಲಿಸಿಲ್ಲ’ ಎಂದು ಕೆಂಭಾವಿ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ನಿಂಗನಗೌಡ ದೇಸಾಯಿ ಹದನೂರ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಗುರುವಾರ ಮಾತನಾಡಿದ ಅವರು, ಹಾನಿಯಾದ ಸ್ಥಳಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ದಿನಂಪ್ರತಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಆದರೆ ಸುರಪುರ ತಾಲ್ಲೂಕು ದಂಡಾಧಿಕಾರಿಗಳು ಕೆಂಭಾವಿ ವಲಯದಲ್ಲಿನ ಹಾನಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡದೇ ವಲಯವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಕೇವಲ ಸಚಿವರು ಬಂದಾಗ ಹಿಂಗ್ ಬಂದು ಹಾಂಗ್ ಮುಖ ತೋರಿಸಿ ಹೋಗಿದ್ದು ಬಿಟ್ಟರೆ ಮತ್ತೆ ಇತ್ತ ಬಂದೆ ಇಲ್ಲ’ ಎಂದು ಅಸಮಾಧಾನ ಹೊರಹಾಕಿದರು.

ಪಟ್ಟಣದಲ್ಲಿರುವ ತಮ್ಮದೇ ಇಲಾಖೆಯ ಉಪ ತಹಶೀಲ್ದಾರ್ ಕಾರ್ಯಾಲಯಕ್ಕೆ ಮಳೆ ನೀರು ನುಗ್ಗಿ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದ್ದರೂ, ಸ್ಮಶಾನಗಳಲ್ಲಿ ನೀರು ನಿಂತು ಅವಾಂತರ ಸೃಷ್ಠಿಯಾದರೂ ಸಹಿತ ತಹಶೀಲ್ದಾರ್ ಅವರು ಗಮನ ಹರಿಸದೇ ಇರುವದು ನಮ್ಮ ವಲಯದ ಬಗ್ಗೆ ಅಧಿಕಾರಿಗಳಿಗೆ ಇರುವ ಮಲತಾಯಿಧೋರಣೆ ಎದ್ದು ಕಾಣಿಸುತ್ತಿದೆ ಎಂದರು.

ADVERTISEMENT

ಹದನೂರ ಗ್ರಾಮದ ರೈತನೋರ್ವ ಪಹಣಿಗಾಗಿ ನಾಲ್ಕು ವರ್ಷದಿಂದ ಅಲೆದಾಡಿದರೂ ಕೆಲಸವಾಗಿಲ್ಲ. ಅಧಿಕಾರ ವಹಿಸಿಕೊಂಡ ದಿನದಿಂದ ಯಾವುದೇ ದಲಿತ ಕೇರಿಗಳಿಗೂ ಭೇಟಿ ನೀಡಿಲ್ಲ. ಒಂದೆ-ಒಂದು ಜನಸ್ಪಂದನ ಸಭೆ ಸಹ ಆಗಿಲ್ಲ ಎಂದು ಸಾಲು ಸಾಲು ದೂರಿದ ಅವರು, ಇದನ್ನು ಗಮನಿಸಿದಾಗ ಕೆಂಭಾವಿ ವಲಯದ ಮೇಲಿರುವ ತಾತ್ಸರ ಭಾವನೆ ಹೊಂದಿರುವುದು ಗೊತ್ತಾಗುತ್ತದೆ ಎಂದರು.

ಇನ್ನಾದರೂ ಜಿಲ್ಲಾಧಿಕಾರಿಗಳು ಈ ಬಗ್ಗೆ ಮುತುವರ್ಜಿ ವಹಿಸಿ ಸುರಪುರ ತಹಶೀಲ್ದಾರ ಮೇಲೆ ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಹೋರಾಟ ಅನಿವಾರ್ಯವಾಗುತ್ತದೆ ಎಂದು ದೇಸಾಯಿ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.