ಯಾದಗಿರಿ: ಮಹಾರಾಷ್ಟ್ರದಿಂದ ಬಂದ ವಲಸೆ ಕಾರ್ಮಿಕರಲ್ಲಿ ಬುಧವಾರ 2 ವರ್ಷದ ಬಾಲಕ ಸೇರಿದಂತೆ 9 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಇದರಿಂದ ಕೋವಿಡ್–19 ಪೀಡಿತರ ಸಂಖ್ಯೆ 299ಕ್ಕೆ ಏರಿಕೆಯಾಗಿದೆ.
ಮಂಗಳವಾರ 5 ಪ್ರಕರಣಗಳು ಪತ್ತೆಯಾಗಿದ್ದವು. ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೆ ಇದೆ. 27 ಮಂದಿ ಕೋವಿಡ್ ಪೀಡಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈಗಾಗಲೇ ಒಬ್ಬರು ಕೋವಿಡ್ನಿಂದ ಸಾವನ್ನಪ್ಪಿದ್ದಾರೆ.
ಶಹಾಪುರ ತಾಲ್ಲೂಕಿನ ದಾರಿಗುಡ್ಡ ಉಕ್ಕಿನಾಳ ತಾಂಡಾದ 32 ವರ್ಷದ ಪುರುಷ (ಪಿ-3901), 45 ವರ್ಷದ ಪುರುಷ (ಪಿ-3902), 40 ವರ್ಷದ ಮಹಿಳೆ (ಪಿ-3903), 28 ವರ್ಷದ ಮಹಿಳೆ (ಪಿ-3904), ಹಾಲಗೇರಾ ಗ್ರಾಮದ 39 ವರ್ಷದ ಪುರುಷ (ಪಿ-3905), 23 ವರ್ಷದ ಪುರುಷ (ಪಿ-3906), 46 ವರ್ಷದ ಪುರುಷ (ಪಿ-3907), 36 ವರ್ಷದ ಮಹಿಳೆ (ಪಿ-3908), 2 ವರ್ಷದಬಾಲಕ(ಪಿ-3909) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಸೋಂಕಿತರೆಲ್ಲರೂ ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮಹಾರಾಷ್ಟ್ರದ ಮುಂಬೈಯಿಂದ ಜಿಲ್ಲೆಗೆ ಹಿಂದಿರುಗಿದ್ದಾರೆ.
ಗೃಹ ದಿಗ್ಬಂಧನ ಉಲ್ಲಂಘನೆ ಮಾಡದವರಿಗೆ ಆಹಾರ ಧಾನ್ಯ
ಹೊರ ರಾಜ್ಯಗಳಿಂದ ಆಗಮಿಸಿದ ಕಾರ್ಮಿಕರನ್ನು ಸಾಂಸ್ಥಿಕ ಕ್ವಾರಂಟೈನ್ ನಿಗದಿತ ಅವಲೋಕನಾ ಅವಧಿ ಮುಕ್ತಾಯಗೊಂಡ ನಂತರ ಕಡ್ಡಾಯವಾಗಿ ಗೃಹ ದಿಗ್ಬಂಧನ ಅವಲೋಕನೆಗಾಗಿ ಕಳುಹಿಸಲಾಗುತ್ತಿದೆ. ಗೃಹ ದಿಗ್ಬಂಧನದಲ್ಲಿರುವವರು ಮನೆಯಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ಮನೆಯಿಂದ ಹೊರಗಡೆ ತಿರುಗಾಡದೆ, ಗೃಹ ದಿಗ್ಬಂಧನ ಅವಲೋಕನಾ ಅವಧಿ ಉಲ್ಲಂಘನೆ ಮಾಡದೇ ಇದ್ದಲ್ಲಿ ಅಂಥವರಿಗೆ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಆಹಾರ ಧಾನ್ಯಗಳನ್ನು ವಿತರಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಂದು ವೇಳೆ ಗೃಹ ದಿಗ್ಬಂಧನ ಬಿಟ್ಟು ಹೊರಗಡೆ ತಿರುಗಾಡುವುದು ಕಂಡುಬಂದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಹಾಗೂ ಅಂಥವರನ್ನು ಪುನಃ ಸಾಂಸ್ಥಿಕ ದಿಗ್ಬಂಧನದ ಅವಲೋಕನೆಗಾಗಿ ಕಳುಹಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
129 ವಲಸೆ ಕಾರ್ಮಿಕರ ಆಗಮನ: ಮಹಾರಾಷ್ಟ್ರ ರಾಜ್ಯದಿಂದ ಜೂನ್ 2ರಂದು ರಾತ್ರಿ 8.30 ಗಂಟೆಗೆ ಉದ್ಯಾನ್ ಎಕ್ಸ್ಪ್ರೆಸ್ ರೈಲು ಮುಖಾಂತರ ಜಿಲ್ಲೆಗೆ 129 ವಲಸೆ ಕಾರ್ಮಿಕರು ಬಂದಿದ್ದಾರೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.