ADVERTISEMENT

‘ಕೋವಿಡ್ ಹೆಚ್ಚಿದರೂ ಬಾರದ ಸಚಿವರು’

​ಪ್ರಜಾವಾಣಿ ವಾರ್ತೆ
Published 26 ಮೇ 2020, 1:03 IST
Last Updated 26 ಮೇ 2020, 1:03 IST
ದಾವಲಸಾಬ್ ನದಾಫ್
ದಾವಲಸಾಬ್ ನದಾಫ್   

ಶಹಾಪುರ: ‘ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 126ಕ್ಕೆ ಜಿಗಿತವಾಗಿದೆ. ಇಡೀ ಜಿಲ್ಲೆಯ ಜನ ಭೀತಿ ಹಾಗೂ ಆತಂಕಕ್ಕೆ ಒಳಗಾಗಿದ್ದಾರೆ. ಇಂತಹ ತುರ್ತು ಪರಿಸ್ಥಿತಿಯಲ್ಲಿ ಜಿಲ್ಲೆಗೆ ಆರೋಗ್ಯ ಸಚಿವರಾಗಲೀ, ಜಿಲ್ಲಾ ಉಸ್ತುವಾರಿ ಸಚಿವರಾಗಲೀ, ವೈದ್ಯಕೀಯ ಸಚಿವರು, ಸಂಸದರು, ಶಾಸಕರು ಭೇಟಿ ನೀಡದೆ ನಿಷ್ಕಾಳಜಿ ತೋರಿಸಿದ್ದಾರೆ’ ಎಂದು ಕರ್ನಾಟಕ ಕೃಷಿಕೂಲಿಕಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಾವಲಸಾಬ್ ನದಾಫ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ‘ದಿನೇ ದಿನೇ ಪಾಸಿಟಿವ್ ಪ್ರಕರಣ ಅಧಿಕವಾಗುತ್ತಲಿವೆ. ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ಅದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಅಧಿಕಾರಿಗಳ ಸಭೆ ನಡೆಸುವುದಕ್ಕೆ ಸೀಮಿತವಾಗಿದ್ದಾರೆ. ಕ್ವಾರಂಟೈನ್ ಕೇಂದ್ರದ ಅವ್ಯವಸ್ಥೆಯಿಂದಲೇ ರೋಗ ಪಸರಿಸಲು ಕಾರಣವಾಗಿದೆ. ಆಯಾ ತಾಲ್ಲೂಕಿನ ಶಾಸಕರು ಕ್ವಾರಂಟೈನ್ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರೆ ಇಂತಹ ದುಸ್ಥಿತಿ ಬರುತ್ತಿರಲಿಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅದೇ ಬೆಂಗಳೂರಿನ ಪಾದರಾಯನಪುರ, ಮಂಡ್ಯ, ಮೈಸೂರು ಮುಂತಾದ ಕಡೆ ಭೇಟಿ ನೀಡಿದ್ದರು. ಅಲ್ಲದೆ ಕಾಂಗ್ರೆಸ್ ಪಕ್ಷದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸಹ ನಮ್ಮ ಜಿಲ್ಲೆಯನ್ನು ಕಡೆಗಣಿಸಿದ್ದಾರೆ. ಜಿಲ್ಲೆಯಲ್ಲಿ ಯಾವ ಸಮಯದಲ್ಲಿ ಏನಾಗುತ್ತದೆ ಎಂಬ ಭೀತಿ ಉಂಟಾಗಿದೆ. ಅಸಹಾಯಕ ಜನತೆಗೆ ಮಾನಸಿಕ ಸ್ಥೈರ್ಯವನ್ನು ತುಂಬುವ ಕೆಲಸವಾಗಲಿ ಎಂದಿದ್ದಾರೆ.

ADVERTISEMENT

ಇನ್ನೆರಡು ದಿನದಲ್ಲಿ ಭೇಟಿ: ‘ಆರೋಗ್ಯ ಸಚಿವರ ಜೊತೆ ದೂರವಾಣಿಯ ಮೂಲಕ ಮಾತನಾಡಿರುವೆ. ಕೋವಿಡ್ ಪ್ರಕರಣ ಬೆಳಕಿಗೆ ಬಂದ ನಂತರ ಜಿಲ್ಲೆಗೆ ಭೇಟಿ ನೀಡಿಲ್ಲ. ಈಗಾಗಲೇ 126 ಪ್ರಕರಣ ಬೆಳಕಿಗೆ ಬಂದಿವೆ. ಜಿಲ್ಲೆಗೆ ಭೇಟಿ ನೀಡಲು ಮನವಿ ಮಾಡಿದಾಗ ಇನ್ನೆರಡು ದಿನದಲ್ಲಿಆಗಮಿಸುವೆ ಎಂದು ಸಚಿವರು ಭರವಸೆ ನೀಡಿದ್ದಾರೆ’ ಎಂದು ಬಿಜೆಪಿಯ ತಾಲ್ಲೂಕು ಘಟಕದ ಅಧ್ಯಕ್ಷ ರಾಜೂಗೌಡ ಉಕ್ಕಿನಾಳ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.