ADVERTISEMENT

‘ಕೃಷ್ಣೆ ನಮ್ಮ ಮ್ಯಾಲ್ ಮುನಿಸಿಕೊಂಡಾಳಪ್ಪ...’

23 ಹಳ್ಳಿಗಳಿಗೆ ತಪ್ಪದ ಪ್ರವಾಹದ ಆತಂಕ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 19:30 IST
Last Updated 18 ಆಗಸ್ಟ್ 2020, 19:30 IST
ಶಹಾಪುರ ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದ ಸೇತುವೆ ಮುಳುಗಡೆಯಾಗಿದೆ
ಶಹಾಪುರ ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದ ಸೇತುವೆ ಮುಳುಗಡೆಯಾಗಿದೆ   

ಶಹಾಪುರ/ವಡಗೇರಾ: ‘ಯಪ್ಪಾ ತಾಯಿ ಕೃಷ್ಣೆಯ ನೀರಿನ ಭರವಸೆಯ ಮ್ಯಾಲ್ ಜೀವನ ಸಾಗಿಸುತ್ತಿದ್ದವರಿಗೆ ಇದೇ ನೀರು ಬದುಕು ಕಸಿದುಕೊಂಡಿದೆ. ಎಷ್ಟೊಂದು ಭರವಸೆಯನ್ನು ಹೊತ್ತು ಜೀವನ ಮುನ್ನಡೆಸಬೇಕು? ಹ್ವಾದ ವರ್ಷ ಹಾಳಾಗಿ ಮನೆ ಸೇರಿದ್ದಿವಿ. ಇನ್ನಾದರೂ ನಮ್ಮನ್ನು ಬದುಕಲು ಬಿಡಿ ತಾಯಿ...’

ಕೃಷ್ಣಾ ನದಿ ಪ್ರವಾಹದ ಸಂಕಷ್ಟವನ್ನು ಎದುರಿಸುತ್ತಲೇ ಆತಂಕದ ದಿನಗಳನ್ನು ಕಳೆಯುತ್ತಿರುವ ಅಲ್ಲಿನ ಜನತೆಯ ಮತುಗಳು ಇವು.

ಕಳೆದ ವರ್ಷ ಸಾಕಷ್ಟು ಹೈರಾಣಗೊಂಡು ಹೊರ ಬಂದಿದ್ದೆವು. ಈಗ ಬಿತ್ತನೆ ಮಾಡಿದ ಹತ್ತಿ, ಭತ್ತದ ಗದ್ದೆಗಳಿಗೆ ನೀರು ನುಗ್ಗಿದೆ. ಬೆಳೆ ಕೊಚ್ಚಿ ಹೋಗುವ ಆತಂಕ ಮನೆ ಮಾಡಿದೆ. ಬಿತ್ತನೆಗೆ ಹಾಕಿದ ರಸಗೊಬ್ಬರ, ವಿದ್ಯುತ್ ಮೋಟರ್, ಟಿ.ಸಿ ಮತ್ತೆ ಎಲ್ಲಿ ಸುಟ್ಟು ಹೋಗುತ್ತವೆ ಎಂಬ ಭೀತಿ ಆವರಿಸಿದೆ ಎಂದು ಗೌಡೂರ ಗ್ರಾಮದ ದೇವಿಂದ್ರ ತಿಳಿಸಿದರು.

ADVERTISEMENT

ವಡಗೇರಾ ತಾಲ್ಲೂಕಿನ ಯಕ್ಷಿಂತಿ, ಗೌಡೂರ, ತುಮಕೂರ, ಗೊಂದೆನೂರ ಹಲವಾರು ಹಳ್ಳಿಗಳಿಗೆ ಪ್ರವಾಹದ ನಷ್ಟದ ಹಣ ಬಂದಿಲ್ಲ. ತಾಂತ್ರಿಕದ ನೆಪ ಮುಂದಿಟ್ಟುಕೊಂಡು ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ನಮಗೂ ಒಂದು ತಾಳ್ಮೆ ಇರುತ್ತದೆ, ಎಷ್ಟೊಂದು ಪರೀಕ್ಷೆ ಮಾಡುತ್ತೀರಿ ಎಂದು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಗೂಗಲ್ ಬ್ಯಾರೇಜ್: ಗೂಗಲ್ ಬ್ರಿಜ್ ಕಂ ಬ್ಯಾರೇಜ್‌ನ ಗೇಟ್ ಎತ್ತರಿಸಲು ನಿಗಮದ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ತುಕ್ಕು ಹಿಡಿದ ಗೇಟ್ ಸರಿಪಡಿಸಲು ಕ್ರೇನ್ ಬಳಸಿಕೊಂಡು ಎತ್ತರಿಸುವ ಕಾರ್ಯ ಸಾಗಿದೆ. ಗೇಟ್ ಎತ್ತರಿಸುವುದರಿಂದ ನೀರಿನ ಪ್ರವಾಹ ಕಡಿಮೆಯಾಗಿ ಗ್ರಾಮಗಳಿಗೆ ಹಿನ್ನೀರಿನ ಸಮಸ್ಯೆ ಆಗುವುದಿಲ್ಲ. ಸಾಕಷ್ಟು ಬಾರಿ ಮನವಿ ಮಾಡಿದ್ದರೂಅಧಿಕಾರಿಗಳು ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಿಲ್ಲ ಎಂದು ಐಕೂರ ಗ್ರಾಮದ ರೈತ ಮುಖಂಡ ತಿಪ್ಪಣ್ಣ ದೊರೆ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.