ಶಹಾಪುರ/ ವಡಗೇರಾ: ಕೃಷ್ಣಾ ನದಿಯ ಪ್ರವಾಹ ಇಳಿಮುಖವಾಗಿದ್ದು, ತಾಲ್ಲೂಕಿನ 23 ಹಳ್ಳಿಯ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ನಾರಾಯಣಪುರ ಬಸವಸಾಗರದಿಂದ ನದಿಗೆ ನೀರು ಹರಿಸುವುದು ಕಡಿಮೆಯಾಗಿದೆ. ಇನ್ನೂ ಯಾವುದೇ ಸಮಯದಲ್ಲಿ ನೀರು ಬಿಡುವ ಸಾಧ್ಯತೆ ಇದೆ. ಮುಂದಿನ ಆದೇಶದವರೆಗೆ ರೈತರು ಪಂಪಸೆಟ್ ಅಳವಡಿಸಬಾರದು ಮತ್ತು ನದಿ ದಂಡೆಗೆ ಜಾನುವಾರುಗಳನ್ನು ಬಿಡಬಾರದು ಎಂದು ಶಹಾಪುರ ತಹಶೀಲ್ದಾರ ಜಗನಾಥರಡ್ಡಿ ತಿಳಿಸಿದ್ದಾರೆ.
ಕಳೆದ ವರ್ಷ ಇದೇ ತಿಂಗಳಲ್ಲಿ ನದಿಗೆ ಅಧಿಕ ಪ್ರಮಾಣ ನೀರು ಬಿಡುಗಡೆಯಿಂದ ನದಿ ದಂಡೆಯ ಗ್ರಾಮಸ್ಥರು ಸಾಕಷ್ಟು ತೊಂದರೆ ಅನುಭವಿಸಿ ನಿರಾಶ್ರಿತ ಕೇಂದ್ರದಲ್ಲಿ ನೆಲೆ ಕಂಡಿದ್ದರು. ಈ ಬಾರಿ ಅಷ್ಟೊಂದು ಸಮಸ್ಯೆಯಾಗಲಿಲ್ಲ. ಆದರೆ, ತಗ್ಗು ಪ್ರದೇಶದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಅದರಲ್ಲಿ ಹತ್ತಿ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಕೊಳ್ಳೂರ ಗ್ರಾಮದ ರೈತ ಮುಖಂಡ ಲಕ್ಷ್ಮಿಕಾಂತ ನಾಯಕ ತಿಳಿಸಿದರು.
‘ನಮಗೆ ಈಗ ಮತ್ತೊಂದು ಸಮಸ್ಯೆ ಕಾಡುತ್ತಲಿದೆ. ಟಿ.ಸಿ(ವಿದ್ಯುತ್ ಪರಿವರ್ತಕ) ಹಾನಿಯಾಗಿವೆ ಎಂಬ ಆತಂಕ ಶುರುವಾಗಿದೆ. ಮತ್ತೆ ಪಂಪ್ಸೆಟ್ ಜೋಡಣೆ ಮಾಡಿ ತ್ವರಿತವಾಗಿ ನೀರು ಬೆಳೆಗೆ ಹಾಯಿಸಬೇಕಾಗಿದೆ. ಈಗ ಸಹಜ ಸ್ಥಿತಿಗೆ ಸಾಗಿದ್ದೇವೆ’ ಎಂದು ಕೃಷ್ಣಾ ನದಿ ದಂಡೆಯ ಗ್ರಾಮಸ್ಥರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.