ಯಾದಗಿರಿ: ಸುರಪುರ, ಯಾದಗಿರಿ ನಗರಸಭೆ ಹಾಗೂ ಗುರುಮಠಕಲ್ ಪುರಸಭೆ ಚುನಾವಣೆಗೆ ಸೋಮವಾರ ನಾಮಪತ್ರ ಪರಿಶೀಲನೆ ನಂತರ ಲೋಕಲ್ ಅಖಾಡ ಸಜ್ಜಾಗಿದ್ದು, ಹಣಾಹಣಿ ಏರ್ಪಟ್ಟಿದೆ.
ಆಗಸ್ಟ್ 10ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿತ್ತು. ಉಮೇದುವಾರಿಕೆ ಸಲ್ಲಿಕೆಗೆ ಕೊನೆಯ ದಿನವಾದ ಶನಿವಾರ ಒಂದೇ ದಿನ 196 ನಾಮಪತ್ರಗಳನ್ನು ಸಲ್ಲಿಕೆಯಾಗಿದ್ದವು. ಅದರಲ್ಲಿ ಸುರಪುರ ಗರಸಭೆಯ 31 ಸ್ಥಾನಗಳಿಗೆ 117 ಮಂದಿ ನಾಮಪತ್ರ ಸಲ್ಲಿಸಿದ್ದರು. ಗುರುಮಠಕಲ್ ಪುರಸಭೆಯ 23 ಸ್ಥಾನಗಳಿಗೆ 91 ಮಂದಿ ನಾಮಪತ್ರ ಸಲ್ಲಿಸಿದ್ದು, ವಾರ್ಡುಗಳಲ್ಲಿ ಬಿರುಸಿನ ಪ್ರಚಾರಕ್ಕೆ ಅಭ್ಯರ್ಥಿಗಳು ಸಜ್ಜಾಗಿದ್ದಾರೆ.
ಯಾದಗಿರಿ ಸೇರಿದಂತೆ ಜಿಲ್ಲೆಯಲ್ಲಿ ಬಿಜೆಪಿ ಶಾಸಕರು ಇರುವ ಸ್ಥಳೀಯ ಸಂಸ್ಥೆಗಳಲ್ಲಿ ಸಹಜವಾಗಿಯೇ ಆ ಪಕ್ಷದಿಂದ ನಾಮಪತ್ರ ಸಲ್ಲಿಸಿದವರ ಸಂಖ್ಯೆಯೇ ಹೆಚ್ಚಾಗಿದೆ. ಗುರುಮಠಲ್ ಹಾಗೂ ಯಾದಗಿರಿಯಲ್ಲಿ ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ ನಾಮಪತ್ರ ಸಲ್ಲಿಸಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಯಾದಗಿರಿ 31 ಸ್ಥಾನಗಳಿಗೆ ಬಿಜೆಪಿಯ 88 ಮಂದಿ ನಾಮಪತ್ರ ಸಲ್ಲಿಸಿದ್ದು, ಪಕ್ಷದಿಂದ ‘ಬಿ’ಫಾರಂ ಪಡೆದಿರುವ 31ಮಂದಿ ನಾಮಪತ್ರ ಪರಿಶೀಲನೆ ವೇಳೆ ಅಂತಿಮಗೊಂಡಿದ್ದಾರೆ. ಕಾಂಗ್ರೆಸ್ನಿಂದ 30 ಮಂದಿ, ಜೆಡಿಸ್ನಿಂದ 17, ಬಿಎಸ್ಪಿಯಿಂದ 6, ಎನ್ಸಿಪಿಯಿಂದ ಒಬ್ಬರು ಹಾಗೂ ಪಕ್ಷೇತರರು 48 ಮಂದಿ ನಾಮಪತ್ರ ಸಲ್ಲಿಸಿದ್ದರು.
ಗುರುಮಠಕಲ್ನಲ್ಲಿ ಕಾಂಗ್ರೆಸ್ನಿಂದ 23, ಬಿಜೆಪಿಯಿಂದ 23, ಜೆಡಿಎಸ್ 22 ಹಾಗೂ ಪಕ್ಷೇತರರು 22 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಸುರಪುರದಲ್ಲಿ ಕಾಂಗ್ರೆಸ್ನಿಂದ 66, ಬಿಜೆಪಿ 66, ಜೆಡಿಎಸ್ 6, ಪಕ್ಷೇತರರು 9 ಮಂದಿ ಉಮೇದುವಾರಿಕೆ ಸಲ್ಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.