ದೋರನಹಳ್ಳಿ (ಶಹಾಪುರ): ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಹತ್ತಿರವಿರುವ ಮಹಾಂತೇಶ್ವರ ಬೆಟ್ಟದ ಬಳಿಯ ಸರ್ವೇ ನಂ– 630ರಲ್ಲಿ ನಡೆಯುತ್ತಿರುವ ಕಲ್ಲು ಗಣಿಗರಿಕೆ ಪ್ರದೇಶಕ್ಕೆ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ (ಕೆಎಸ್ಐಐಡಿಸಿ) ಕಲಬುರ್ಗಿ ವಿಭಾಗದ ಅಧಿಕಾರಿಗಳ ತಂಡ ಭೇಟಿ ನೀಡಿ ಕಲ್ಲು ಗಣಿಗಾರಿಕೆ ಯಂತ್ರಗಳಿಗೆ ಬೀಗ ಹಾಕಿದೆ.
ಕಲಬುರ್ಗಿ ಗ್ರಾನೈಟ್ ಮೆಟಲ್ ಇಂಡಸ್ಟ್ರಿ ಕಂಪನಿಯ ಮಾಲೀಕರು ನಿಗಮದಿಂದ ₹1.3ಕೋಟಿ ಸಾಲ ಪಡೆದುಕೊಂಡಿದ್ದರು ಎನ್ನಲಾಗಿದೆ.
2019 ಜೂನ್ ತಿಂಗಳಲ್ಲಿ ಹಣ ಮರಳಿ ಹಣ ಪಾವತಿಸುವಂತೆ ಸದರಿ ಮಾಲೀಕರಿಗೆ ನಿಗಮದ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರೂ ಹಣ ಪಾವತಿಸದ ಕಾರಣ ಕಲ್ಲು ಗಣಿಗಾರಿಕೆ ಯಂತ್ರಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಕೆಎಸ್ಐಐಡಿಸಿ ಅಧಿಕಾರಿಗಳ ತಂಡದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಕೆಎಸ್ಐಐಡಿಸಿ ಅಧಿಕಾರಿಗಳ ತಂಡದ ಮುಖ್ಯಸ್ಥರಾದ ರಮೇಶ ಜಿ.ಎಚ್.ಆನಂದ ಹಾಗೂ ಬಾಬು ಅವರು ಕಲ್ಲು ಗಣಿಗಾರಿಕೆ ಪ್ರದೇಶದ ಕಲ್ಲು ಪುಡಿ ಮಾಡುವ ಯಂತ್ರ, ಕಂಕರ, ಕಚೇರಿ ಹೀಗೆ ಹಲವು ಕಡೆ ಪ್ರತಿಯೊಂದು ಯಂತ್ರಕ್ಕೆ ಬೀಗ ಹಾಕಿದರು.
ದೋರನಹಳ್ಳಿ ಬಳಿ ಸ್ಥಾಪಿಸಿರುವ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ಜೆಸ್ಕಾಂ ವಿಭಾಗದಿಂದ ಯಾವುದೇ ಪರವಾನಗಿನೀಡಿಲ್ಲ. ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸುವ ಪ್ರಶ್ನೆ ಉದ್ಬವಿಸದು. ಕಲ್ಲು ಗಣಿಗಾರಿಕೆಯನ್ನು ಜನರೇಟರ್ ಮೂಲಕ ನಡೆಸುತ್ತಿದ್ದರು. ಜನರೇಟರ್ ಯಂತ್ರಗಳಿಗೆ ಬೀಗ ಹಾಕಿರುವ ಬಗ್ಗೆ ಮಾಹಿತಿ ಬಂದಿದೆ ಎಂದು ವಿದ್ಯುತ್ ಪ್ರಸರಣ ನಿಗಮದ ಎಇಇ ಶಾಂತಪ್ಪ ಪೂಜಾರಿ ತಿಳಿಸಿದ್ದಾರೆ.
ಅಕ್ರಮ ಕಲ್ಲು ಗಣಿಗಾರಿಕೆ
ತಾಲ್ಲೂಕಿನ ಗಂಗನಾಳ,ಗೋಗಿ, ದಿಗ್ಗಿ ಇನ್ನಿತರ ಕಡೆ ಸರ್ಕಾರದಿಂದ ಯಾವುದೇ ಪರವಾನಗಿ ಪಡೆದುಕೊಳ್ಳದೆ ಅಕ್ರಮವಾಗಿ ಕಲ್ಲು ಗಣಿಗಾರಿಕೆಯನ್ನು ನಡೆಸಲಾಗುತ್ತಿದೆ. ಪರಿಸರ ಇಲಾಖೆಯ ಅಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ಯಾವುದೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ಉನ್ನತಮಟ್ಟದ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿಯ ಮುಖಂಡ ಯಲ್ಲಯ್ಯ ನಾಯಕ ವನದುರ್ಗ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.