ADVERTISEMENT

ಉತ್ತುಂಗ ತಲುಪಿ ನೇಪಥ್ಯಕ್ಕೆ ಸರಿದ ‘ನಾಯಕರು’

ರಾಜಕೀಯ ಚದುರಂಗದಾಟದಲ್ಲಿ ನಲುಗಿದ ನಾಯಕರು

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2024, 6:08 IST
Last Updated 27 ಏಪ್ರಿಲ್ 2024, 6:08 IST
ರಾಜಾ ಪಿಡ್ಡನಾಯಕ
ರಾಜಾ ಪಿಡ್ಡನಾಯಕ   

ಸುರಪುರ: ವಿವಿಧ ರಾಜ ಮನೆತನಕ್ಕೆ ಸೇರಿದ ಸುರಪುರ ವಿಧಾನಸಭಾ ಕ್ಷೇತ್ರದ ಮೂವರು ಶಾಸಕರು ಒಂದು ಹಂತದಲ್ಲಿ ರಾಜಕೀಯದ ಉಚ್ಛ್ರಾಯ ಸ್ಥಿತಿಗೆ ತಲುಪಿದ್ದವರು. ನಂತರ ರಾಜಕೀಯ ಚದುರಂಗದಾಟಕ್ಕೆ ಸಿಲುಕಿ ನೇಪಥ್ಯಕ್ಕೆ ಸರಿದರು.

ರಾಜಾ ಪಿಡ್ಡನಾಯಕ:

ದೇಶದ ಸ್ವಾತಂತ್ರ್ಯಕ್ಕೆ ಅನನ್ಯ ಕೊಡುಗೆ ನೀಡಿದ ಇಲ್ಲಿನ ಗೋಸಲ ವಂಶಸ್ಥ ರಾಜಾ ಪಿಡ್ಡನಾಯಕ ಅಲಿಘಡ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದವರು.

ADVERTISEMENT

1962, 67 ಮತ್ತು 72ರಲ್ಲಿ ಸತತ ಶಾಸಕರಾಗಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಕ್ಷೇತ್ರದ ಮತದಾರರಿಗೆ ಇಲ್ಲಿನ ರಾಜರೆಂದರೆ ಅಪಾರ ಗೌರವ.

ಜನರು ಮತ ಯಾಚಿಸಲು ಬಂದ ದೊರೆಯ ಕಾಲು ತೊಳೆದು ಹೂಮಾಲೆ ಹಾಕಿ ಗೌರವಿಸುತ್ತಿದ್ದರು. ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ನಿರಾಯಾಸವಾಗಿ ರಾಜಾ ಪಿಡ್ಡನಾಯಕ ವಿಜೇತರಾಗುತ್ತಿದ್ದರು. ಒಂದು ಹಂತದಲ್ಲಿ ರಾಜಕೀಯದ ಉಚ್ಛ್ರಾಯ ಸ್ಥಿತಿಗೆ ತಲುಪಿದ್ದರು. ವಿಧಾನಸಭೆಯಲ್ಲಿ ಅಂದಿನ ಮುಖ್ಯಮಂತ್ರಿಗಳು, ಸಚಿವರು ಎದ್ದು ನಿಂತು ಗೌರವ ಕೊಡುತ್ತಿದ್ದರು. ಅವರ ವಿರುದ್ಧ ಎಂತಹ ಬಲಾಢ್ಯರು ಸ್ಪರ್ಧಿಸಿದರೂ ಗೆಲ್ಲದ ಸ್ಥಿತಿ ಇತ್ತು.
ಎರಡು ಬಾರಿ ಸಚಿವ ಸ್ಥಾನ ಹುಡುಕಿಕೊಂಡು ಬಂದರೂ ನಯವಾಗಿ ನಿರಾಕರಿಸಿದ್ದರು. ನಾನು ಅರಸ, ಮಂತ್ರಿ ಏಕೆ ಆಗಬೇಕು ಎಂಬ ನಿಲುವು ಅವರಲ್ಲಿತ್ತು. ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದರು. ಭ್ರಷ್ಟಾಚಾರ ಅವರ ಹತ್ತಿರ ಸುಳಿಯಲೇ ಇಲ್ಲ. ನೈತಿಕ ರಾಜಕಾರಣಕ್ಕೆ ಹೆಸರಾಗಿದ್ದರು.

ಇಂತಹ ಧೀಮಂತ ನಾಯಕ 1978, 83 ಮತ್ತು 85 ರಲ್ಲಿ ಹ್ಯಾಟ್ರಿಕ್ ಸೋಲು ಕಾಣಬೇಕಾಯಿತು. 1980ರಲ್ಲಿ ರಾಯಚೂರು ಲೋಕಸಭೆಗೆ ಸ್ಪರ್ಧಿಸಿದ್ದರೂ ಯಶ ಕಾಣಲಿಲ್ಲ. ನಂತರ ಅವರು ನೇಪಥ್ಯಕ್ಕೆ ಸರಿದುಬಿಟ್ಟರು. 1991 ರಲ್ಲಿ ನಿಧನರಾದರು.

‘ನಮ್ಮ ಮನೆತನಕ್ಕೆ ಜನ ಅಪಾರ ಗೌರವ ಕೊಡುತ್ತಾರೆ. ರಾಜಕೀಯ ಕಲುಷಿತಗೊಂಡಿದ್ದು ಜನರ ಗೌರವ ಮತಗಳಾಗಿ ಪರಿವರ್ತನೆಯಾಗುತ್ತಿಲ್ಲ. ಭವಿಷ್ಯದಲ್ಲಿ ನೈತಿಕತೆಗೆ ಬೆಲೆ ಇಲ್ಲ’ ಎಂಬ ಅಸಮಾಧಾನ ಅವರಲ್ಲಿತ್ತು. 

ಅವರ ಹಿರಿಯ ಪುತ್ರ ರಾಜಾ ವೆಂಕಟಪ್ಪನಾಯಕ ತಾತಾ, ಮೊಮ್ಮಗ ರಾಜಾ ಕೃಷ್ಣಪ್ಪನಾಯಕ ತಲಾ ಒಂದು ಬಾರಿ ವಿಧಾನಸಭೆಗೆ ಸ್ಪರ್ಧಿಸಿದ್ದರೂ ಯಶ ಕಾಣಲಿಲ್ಲ.

ರಾಜಾ ಕುಮಾರನಾಯಕ:

ಮೂಲತಃ ಆಂಧ್ರಪ್ರದೇಶದ ಪ್ಯಾಪ್ಲಿ ರಾಜ ವಂಶಸ್ಥರಾದ ರಾಜಾ ಕುಮಾರನಾಯಕ ಹೈದರಾಬಾದ ಉಸ್ಮಾನಿಯಾ ವಿಶ್ವವಿದ್ಯಾಲಯದ ಪದವೀಧರರು.

ತಮ್ಮ ಅಕ್ಕನ ಗಂಡ ಬ್ಯಾರಿಸ್ಟರ್ ರಾಜಾ ವೆಂಕಟಪ್ಪನಾಯಕ ಸುರಪುರಕ್ಕೆ ಕರೆದುಕೊಂಡು ಬಂದು 1957ರಲ್ಲಿ ಇಲ್ಲಿನ ಶಾಸಕರನ್ನಾಗಿ ಮಾಡಿದರು. ರಾಜಾ ಕುಮಾರನಾಯಕ ರಾಜಕೀಯ ತಂತ್ರಗಳನ್ನೆಲ್ಲ ಕರಗತ ಮಾಡಿಕೊಂಡು ಪ್ರಬಲರಾಗಿ ಬೆಳೆದರು. 1967 ರಲ್ಲಿ ಪಕ್ಕದ ಲಿಂಗಸುಗೂರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.

1978 ರಲ್ಲಿ ಮತ್ತೇ ಸುರಪುರದ ಶಾಸಕರಾದರು. ಈ ಹಂತದಲ್ಲಿ ಸುರಪುರದಲ್ಲಿ ಅವರು ಹೇಳಿದ್ದೇ ರಾಜಕಾರಣ. ಎಲ್ಲ ಸ್ಥಳೀಯ ಸಂಸ್ಥೆಗಳು ಅವರ ಹಿಡಿತದಲ್ಲೆ ಇದ್ದವು. ಎದುರಾಳಿಗಳೇ ಇರದಷ್ಟು ಬಲಾಢ್ಯರಾಗಿದ್ದರು. 1983 ರ ಸೋಲಿನ ನಂತರ ರಾಜಕೀಯದ ಬಗ್ಗೆ ಆಸಕ್ತಿ ಕಳೆದುಕೊಂಡರು. ತಮ್ಮ ಮಕ್ಕಳಿಗೆ ರಾಜಕೀಯದ ಪಾಠ ಹೇಳಿ ಕೊಟ್ಟಿದ್ದರು. 1988ರಲ್ಲಿ ಇಹಲೋಕ ತ್ಯಜಿಸಿದರು.

ಅವರ ಹಿರಿಯ ಪುತ್ರ ರಾಜಾ ವೆಂಕಟಪ್ಪನಾಯಕ 4 ಬಾರಿ ಶಾಸಕರಾಗಿದ್ದರು. ಎರಡನೇ ಪುತ್ರ ರಾಜಾ ರಂಗಪ್ಪನಾಯಕ ಒಮ್ಮೆ ರಾಯಚೂರು ಸಂಸದರಾಗಿದ್ದರು. ರಾಜಾ ವೆಂಕಟಪ್ಪನಾಯಕ ಅವರ ಅಕಾಲಿಕ ನಿಧನದಿಂದ ಉಪ ಚುನಾವಣೆ ನಡೆಯುತ್ತಿದ್ದು, ಮೊಮ್ಮಗ ರಾಜಾ ವೇಣುಗೋಪಾಲ ನಾಯಕ (ರಾಜಾ ವೆಂಕಟಪ್ಪನಾಯಕ ಅವರ ಹಿರಿಯ ಮಗ) ಅಭ್ಯರ್ಥಿಯಾಗಿದ್ದಾರೆ.

ರಾಜಾ ಮದನಗೋಪಾಲ ನಾಯಕ:

ಮೂಲತಃ ಆಂಧ್ರಪ್ರದೇಶದ ಕೋಸಗಿ ಅರಸು ಮನೆತನದ ರಾಜಾ ಮದನಗೋಪಾಲ ನಾಯಕ ಅವರ ಹಿರಿಯರು ಸುರಪುರಕ್ಕೆ ವಲಸೆ ಬಂದವರು. ಸುರಪುರದ ಪ್ರಭು ಕಾಲೇಜಿನಲ್ಲಿ ಪದವಿ ಪಡೆದ ಮದನಗೋಪಾಲ ನಾಯಕ ಅವರು
ವಿದ್ಯಾರ್ಥಿ ನಾಯಕರಾಗಿ ಹೆಸರು ಮಾಡಿದ್ದರಿಂದ 1983 ರಲ್ಲಿ ಕಾಂಗ್ರೆಸ್ ಟಿಕೆಟ್ ದೊರೆಯಿತು. 1983, 85 ಮತ್ತು 89 ರಲ್ಲಿ ಸತತವಾಗಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದರು. 92 ರಲ್ಲಿ ಸಚಿವರೂ ಆಗಿದ್ದರು.

ರಾಜಕೀಯದ ಉಚ್ಛ್ರಾಯ ಸ್ಥಿತಿಗೆ ತಲುಪಿದ್ದ ಅವರು ಶೋಮ್ಯಾನ್ ಎಂದೇ ಹೆಸರಾಗಿದ್ದರು. ಮತದಾರರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಿದ್ದ ಅವರಿಗೆ ಸೋಲು ಇಲ್ಲವೇನೋ ಎಂಬ ಪರಿಸ್ಥಿತಿ ಇತ್ತು.  ಆದರೆ 1994ರಲ್ಲಿ ಸೋಲು ಅವರನ್ನು ಅರಸಿಕೊಂಡು ಬಂತು. 1999ರಲ್ಲಿ ಪಕ್ಷೇತರರಾಗಿ, 2013 ರಲ್ಲಿ ಬಿಜೆಪಿಯಿಂದ ವಿಧಾನಸಭೆಗೆ, 2004 ರಲ್ಲಿ ಜೆಡಿಎಸ್‍ನಿಂದ ಲೋಕಸಭೆಗೆ ಸ್ಪರ್ಧಿಸಿದ್ದರು. ಆದರೆ ಗೆಲುವು ಮರೀಚಿಕೆಯಾಯಿತು.

ರಾಜಕೀಯದಿಂದ ನೇಪಥ್ಯಕ್ಕೆ ಸರಿದ ಅವರು ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿ ಸಗರನಾಡಿನ ಸಾಂಸ್ಕೃತಿಕ ರಾಯಭಾರಿ ಎಂದು ಕರೆಸಿಕೊಂಡಿದ್ದರು. 2020ರಲ್ಲಿ ವಿಧಿವಶರಾದರು. ಅವರ ಮಕ್ಕಳು ರಾಜಕೀಯದಿಂದ ದೂರ ಉಳಿದಿದ್ದಾರೆ.

‘ಚುನಾವಣೆಗಳು ಈಗ ಹಣ, ಹೆಂಡದ ಮೇಲೆ ಅವಲಂಬಿತವಾಗಿವೆ. ಬಡವರು ಚುನಾವಣೆಗೆ ನಿಲ್ಲಲು ಸಾಧ್ಯವೇ ಇಲ್ಲ. ಕೋಟ್ಯಂತರ ಹಣ ಖರ್ಚು ಮಾಡುವ ಅಭ್ಯರ್ಥಿಗಳು ಭ್ರಷ್ಟಾಚಾರಿಗಳಾಗಲೇಬೇಕಾತ್ತದೆ’ ಎಂದು ರಾಜಾ ಮದನಗೋಪಾಲ ನಾಯಕ ಆಗಾಗ್ಗೆ ಹೇಳುತ್ತಿದ್ದರು.

ರಾಜಾ ಕುಮಾರನಾಯಕ
ರಾಜಾ ಮದನಗೋಪಾಲ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.