ಸೈದಾಪುರ: ಭಗವಾನ್ ಮಹಾವೀರರು ಅಹಿಂಸೆ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ಅವರು ಸಾಮಾಜಿಕ ಸಮಾನತೆಯ ತತ್ವಗಳನ್ನು ಬೋಧಿಸಿದ ಮಹಾನ್ ನಾಯಕರು ಎಂದು ಪಿಡಿಒ ಮೌಲಾಲಿ ಐಕೂರು ಹೇಳಿದರು.
ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಿದ್ದ ವರ್ಧಮಾನ ಮಹಾವೀರ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಮಹಾವೀರರು ಸಮಾಜದಲ್ಲಿನ ಮೂಢನಂಬಿಕೆ ತೊಡೆದು ಹಾಕುವುದರ ಜತೆಗೆ ಶಾಂತಿ ಮತ್ತು ಅಹಿಂಸೆಯ ಗುಣಗಳನ್ನು ತಿಳಿಸಿದ್ದರು. ಬಾಬಾ ಸಾಹೇಬರು ಸಮಾಜದ ಕೆಳವರ್ಗದವರಿಗೆ ಸಮಾನತೆಯ ಬದುಕು ಕಲ್ಪಿಸಿಕೊಡಲು ಹೋರಾಟದ ಹಾದಿ ಹಿಡಿದರು ಎಂದು ತಿಳಿಸಿದರು.
ಇಂತಹ ಮಹಾನೀಯರ ಜೀವನದ ಫಲವಾಗಿ ಇಂದು ನಾವು ನೆಮ್ಮದಿಯ ಬದುಕು ಸಾಗಿಸುತ್ತಿದ್ದೇವೆ. ದೇಶದಲ್ಲಿ ಸುಭದ್ರ ಆಡಳಿತಕ್ಕೆ ಬೇಕಾದ ಸಂವಿಧಾನ ರೂಪಿಸಿದ ಮಹಾನ್ ನಾಯಕ ಅಂಬೇಡ್ಕರ್. ಜಗತ್ತಿನ ದೃಷ್ಟಿಯಲ್ಲಿ ಅಜರಾಮರ. ಅಂಬೇಡ್ಕರ್ ಅವರನ್ನು ಪೂಜಿಸುವುದಕ್ಕಿಂತ ಆದರ್ಶಗಳನ್ನು ಪಾಲಿಸಬೇಕಿದೆ ಎಂದರು.
ಸಮಿತಿಯ ವಲಯ ಅಧ್ಯಕ್ಷ ನೀಲ ಕಂಠರೆಡ್ಡಿ, ಗ್ರಾ.ಪಂ ಅಧ್ಯಕ್ಷ ಮಾಳಪ್ಪ ಅರಿಕೇರಿ, ಸದಸ್ಯ ಅರ್ಜುನ ಚವ್ಹಾಣ, ಬಾಬು ಕಲಾಲ್, ಕೃಷ್ಣಾ, ಶರಣಪ್ಪಗೌಡ ಬಾಲಚೇಡ, ಮಾಳಪ್ಪ, ಹಣಮಂತ, ರಾಜು ದೊರೆ, ರಾಘವೇಂದ್ರ ಕಲಾಲ್, ಭೀಮಣ್ಣ ಮಡಿವಾಳ, ಮಹಿಪಾಲರೆಡ್ಡಿ ಮುನಗಾಲ, ಮರಿಲಿಂಗ, ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.