ADVERTISEMENT

ಮಾವು: ಉತ್ತಮ ಫಸಲಿನ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2024, 6:24 IST
Last Updated 13 ಫೆಬ್ರುವರಿ 2024, 6:24 IST
ನಾರಾಯಣಪುರದ ಸಹಾಯಕ ತೋಟಗಾರಿಕ ನಿರ್ದೇಶಕರು, ರಾಜ್ಯ ವಲಯದ ತೋಟಗಾರಿಕಾ ಫಾರಂನ ಮುಖ್ಯದ್ವಾರ
ನಾರಾಯಣಪುರದ ಸಹಾಯಕ ತೋಟಗಾರಿಕ ನಿರ್ದೇಶಕರು, ರಾಜ್ಯ ವಲಯದ ತೋಟಗಾರಿಕಾ ಫಾರಂನ ಮುಖ್ಯದ್ವಾರ   

ನಾರಾಯಣಪುರ: ಇಲ್ಲಿನ ರಾಜ್ಯ ವಲಯದ ತೋಟಗಾರಿಕ ಹಣ್ಣಿನ ಫಾರಂನಲ್ಲಿ ಹಣ್ಣುಗಳ ರಾಜ ಮಾವಿನ ಮರಗಳಲ್ಲಿ ಸಮೃದ್ಧವಾಗಿ ಹೂವು ಬಿಟ್ಟಿದ್ದು ಉತ್ತಮ ಫಸಲನ್ನು ನಿರೀಕ್ಷೆ ಮಾಡಬಹುದಾಗಿದೆ.

ಸದ್ಯ ತೋಟಗಾರಿಕಾ ಫಾರಂನಲ್ಲಿ 20ಕ್ಕೂ ಹೆಚ್ಚು ತಳಿಯ 344ಕ್ಕೂ ಹೆಚ್ಚು ಮಾವಿನ ಹಣ್ಣಿನ ಗಿಡಗಳಿವೆ. ಜೊತೆಗೆ 320 ಚಿಕ್ಕು ಹಣ್ಣಿನ ಗಿಡಗಳು. 340 ತೆಂಗು, 200 ಹುಣಸೆ ಗಿಡಗಳಿವೆ, 100 ದಾಳಿಂಬೆ, ನೇರಳೆ, ಅಂಜುರ ಹಣ್ಣಿನ ಗಿಡಗಳಿದ್ದು ಪ್ರತಿ ವರ್ಷವೂ ಫಸಲನ್ನು ಮಾರಾಟ ಮಾಡಲು ಆನಲೈನ್ ಟೆಂಡಡ್‌ ಮಾಡಲಾಗುತ್ತದೆ. ಪ್ರತಿ ಆರ್ಥಿಕ ವರ್ಷ ಅಂದಾಜು ₹16 ಲಕ್ಷ ಲಾಭ ತಂದು ಕೊಡುವ ಮೂಲವು ಆಗಿದೆ.

‘ಇದರ ನಡುವೆ ಕೆಲವು ಮಾವಿನ ಗಿಡಗಳಿಗೆ ಜಿಗಿ ರೋಗ ಅಂಟಿಕೊಂಡು ಹೂವುಗಳು ಉದುರುತ್ತಿರುವುದು ಆತಂಕ ಮೂಡಿಸಿದೆ. ಈ ನಿಟ್ಟಿನಲ್ಲಿ ಹಣ್ಣಿನ ಫಸಲಿನ ಇಳುವರಿ ಕುಂಠಿತವಾಗುವ ಸಾಧ್ಯತೆ ಇದೆ. ಹೀಗಾಗಿ ಇಲಾಖೆಯವರು ಈ ರೋಗ ನಿಯಂತ್ರಣಕ್ಕೆ ಕೀಟನಾಶಕಗಳನ್ನು ನಿಗದಿತ ಪ್ರಮಾಣದಲ್ಲಿ ಸಿಂಪಡಿಸಿದರೆ ರೋಗ ಹತೋಟಿಗೆ ಬರಬಹುದು’ ಎಂದು ಎಎಚ್ಒ ವಿನೋದಕುಮಾರ ಹೇಳುತ್ತಾರೆ.

ADVERTISEMENT

ಮುಂಗಾರ ಮಳೆ ಮತ್ತು ಅಂತರ್ಜಲದ ಕೊರೆತೆಯಿಂದ ಫಾರಂನಲ್ಲಿ ಇರುವ ಬಾವಿಗಳಲ್ಲಿ ನೀರಿನ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಿದ್ದು, ಬಾವಿಗಳಲ್ಲಿ ನೀರು ತಳಕಚ್ಚಿದೆ. ಹೀಗಾಗಿ ವಿಸ್ತಾರ ಪ್ರದೇಶದಲ್ಲಿ ಬೆಳೆಯಲಾದ ನಾನಾ ಹಣ್ಣಿನ ಗಿಡಗಳಿಗೆ ತೇವಾಂಶ ಕೊರೆತೆಯಾಗಿದೆ. ಇದರಿಂದ ಕಾಯಿಕೊರೆತ ಹಾಗೂ ಗಾತ್ರ ಸಣ್ಣದಾಗುವ ಸಾಧ್ಯತೆ ಇರುತ್ತದೆ ಎಂಬುದು ಇಲ್ಲಿನ ಕೆಲಸಗಾರ ಅಭಿಪ್ರಾಯ. ನೀರಿನ ಕೊರತೆ ನೀಗಿಸಲು ಹತ್ತಿರದ ಬಸವಸಾಗರ ಜಲಾಶಯದಿಂದ ನೇರವಾಗಿ ತೋಟಗಾರಿಕೆ ಫಾರಂಗೆ ನೀರು ಸರಬರಾಜು ಮಾಡುವ ಯೋಜನೆ ರೂಪಿಸಿ, ಶಾಶ್ವತ ಪರಿಹಾರಕ್ಕೆ ಇಲಾಖೆ ಮುಂದಾಗಬೇಕು ಹಾಗೂ ತೋಟಗಾರಿಕ ಫಾರಂ ಸುತ್ತಲೂ ರಕ್ಷಣಾ ಗೋಡೆಗಳನ್ನು ನಿರ್ಮಿಸಲು ಕೂಡಾ ಮುತುವರ್ಜಿ ವಹಿಸಬೇಕು. ಇದರಿಂದ ಕುರಿ, ದನ ಕರುಗಳ ಹಾವಳಿಯಿಂದ ಫಸಲು ನಾಶವನ್ನು ತಪ್ಪಿಸಬಹುದು ಎಂಬುದು ಸಾರ್ವಜನಿಕರ ಮಾತು.

ಫಾರಂನಲ್ಲಿ ಈ ಮೊದಲು 80 ಜನ ಸಿಬ್ಬಂದಿ ಇದ್ದರು. ಸದ್ಯ 38 ಜನ ಇದ್ದಾರೆ. ಇವರೆಲ್ಲಾ ಫಾರಂನ ಗ್ರೌಂಡ್‌ ನರ್ಸರಿಯಲ್ಲಿ ನಿತ್ಯ ವಿವಿಧ ಹೂ, ಹಣ್ಣು, ಅಲಂಕಾರಿಕ ಗಿಡಗಳು, ಸಸ್ಯಾಭಿವೃದ್ಧಿ, ನಿರ್ವಹಣೆ ಕೆಲಸಕ್ಕೆ ಆಗಮಿಸುತ್ತಾರೆ. ಸ್ಥಳೀಯ ಗ್ರಾಮ ಪಂಚಾಯಿತಿ ಸಹಭಾಗಿತ್ವದಲ್ಲಿ ಮಣ್ಣು ಹಾಗೂ ನೀರಿನ ಸಂರಕ್ಷಣೆಗೆ ಪೂರಕವಾಗುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮೂಲಕವೂ ಪ್ರಸಕ್ತ ಸಾಲಿನಲ್ಲಿ 2402 ಮಾನವ ದಿನಗಳನ್ನು ನಿರ್ಮಿಸಲಾಗಿದ್ದು ಅಂದಾಜು ₹7ಲಕ್ಷ ರೂಪಾಯಿಯನ್ನು ನರೇಗಾದಲ್ಲಿ ವೆಚ್ಚ ಮಾಡಲಾಗಿದೆ.‌

ನಾರಾಯಣಪುರ ತೋಟಗಾರಿಕಾ ಫಾರಂನ ಮಾವಿನ ಗಿಡ ಹೂ ಹೊತ್ತು ನಿಂತಿರುವುದು
344ಕ್ಕೂ ಹೆಚ್ಚು ಮಾವಿನ ಗಿಡಗಳು 320 ಚಿಕ್ಕು, 340 ತೆಂಗು ಪ್ರತಿ ವರ್ಷ ₹16 ಲಕ್ಷ ಲಾಭ
ಮುಂಬರುವ ದಿನಗಳಲ್ಲಿ ಹೊಸ ಕ್ರಿಯಾ ಯೋಜನೆಯಲ್ಲಿ ಮೇಲಧಿಕಾರಿಗಳ ಗಮನಕ್ಕೆ ತಂದು ತೋಟಗಾರಿಕಾ ಫಾರಂ ಸುತ್ತಲೂ ಕಾಂಪೌಂಡ್ ನಿರ್ಮಿಸುವ ಗುರಿ ಹೊಂದಲಾಗಿದೆ
ಬಸನಗೌಡ ಎಡಿಎಚ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.