ADVERTISEMENT

ಮಾರುಕಟ್ಟೆ ನೋಟ- ಮಳೆಯಿಂದ ತರಕಾರಿ ದರ ಏರಿಳಿಕೆ

ಜಿಟಿ ಜಿಟಿ ಮಳೆಯಿಂದ ತರಕಾರಿ ಬಿಡಿಸಲು ರೈತರಿಗೆ ಸಮಸ್ಯೆ, ಮಾರುಕಟ್ಟೆಯಲ್ಲಿ ಆವಕ ಇಳಿಕೆ

ಬಿ.ಜಿ.ಪ್ರವೀಣಕುಮಾರ
Published 18 ಜುಲೈ 2021, 4:32 IST
Last Updated 18 ಜುಲೈ 2021, 4:32 IST
ಯಾದಗಿರಿಯ ರೈಲ್ವೆ ಸ್ಟೇಷನ್‌ ರಸ್ತೆಯ ತರಕಾರಿ ಮಾರುಕಟ್ಟೆ ನೋಟ
ಯಾದಗಿರಿಯ ರೈಲ್ವೆ ಸ್ಟೇಷನ್‌ ರಸ್ತೆಯ ತರಕಾರಿ ಮಾರುಕಟ್ಟೆ ನೋಟ   

ಯಾದಗಿರಿ: ನಗರದ ವಿವಿಧ ತರಕಾರಿ ಮಾರುಕಟ್ಟೆಗಳಲ್ಲಿ ತರಕಾರಿ ದರ ಮಳೆ ಕಾರಣದಿಂದ ದರ ಏರಿಳಿಕೆಯಾಗುತ್ತಿದೆ. ಸೊಪ್ಪುಗಳ ಬೆಲೆಯೂ ಏರಿಕೆಯಾಗಿದೆ.

ನುಗ್ಗೆಕಾಯಿ ಕೆ.ಜಿಗೆ ₹60, ಶುಂಠಿ ₹60, ದೊಡ್ಡ ಗಾತ್ರದ ಒಂದು ನಿಂಬೆ ಹಣ್ಣು ₹5, ಚಿಕ್ಕ ಗಾತ್ರದ 4ಕ್ಕೆ ₹10 ದರ ಇದೆ. ಬೆಳ್ಳೊಳ್ಳಿ ₹60 ಕೇಜಿ ಇದೆ.

ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಆಗಾಗ ಮಳೆ ಸುರಿಯುತ್ತಿದ್ದು, ರೈತರು ತರಕಾರಿ ಬಿಡಿಸಲು ಆಗುತ್ತಿಲ್ಲ. ಇದರಿಂದ ಮಾರುಕಟ್ಟೆಗೆ ಬರುವ ಆವಕ ಕಡಿಮೆಯಾಗಿದೆ. ಇದರಿಂದ ತರಕಾರಿ ದರದಲ್ಲಿ ಏರಿಳಿತವಾಗುತ್ತಿದ್ದು, ಗ್ರಾಹಕರಿಗೆ ಸಮಸ್ಯೆಯಾಗಿದೆ.

ADVERTISEMENT

ಸ್ಥಳೀಯ ಮಟ್ಟದಲ್ಲಿ ತರಕಾರಿ ಲಭ್ಯವಿದ್ದರೂ ಮಾರುಕಟ್ಟೆಗಳಿಗೆ ಆವಕ ಬರುತ್ತಿಲ್ಲ. ಹೀಗಾಗಿ ಮಾರುಕಟ್ಟೆಗಳಲ್ಲಿ ದರ ಏರಿಳಿಕೆಗೆ ಕಾರಣವಾಗಿದೆ. ಟೊಮೆಟೊ, ಸೋರೆಕಾಯಿ ಮಾತ್ರ ಅತಿ ಕಡಿಮೆ ದರದಲ್ಲಿ ಸಿಗುತ್ತಿವೆ. ಉಳಿದಂತೆ ಬೇರೆ ತರಕಾರಿ ದರದಲ್ಲಿ ಹೆಚ್ಚಳವಿದೆ.

ಮಳೆಯಿಂದ ಹಾಳು: ಮಳೆಯಿಂದ ಸೊಪ್ಪುಗಳು ಹಾಳಾಗುತ್ತಿವೆ. ನೀರಿನಾಂಶ ಹೆಚ್ಚಾಗಿ ಸೊಪ್ಪುಗಳು ಕೆಟ್ಟು ಹೋಗುತ್ತಿವೆ. ಇದರಿಂದ ರೈತರಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಹೀಗಾಗಿ ಜಮೀನಿನಿಂದ ತರುವುದನ್ನು ಕಡಿಮೆ ಮಾಡಿದ್ದಾರೆ ಎನ್ನುವುದು ವ್ಯಾಪಾರಿಗಳ ಮಾತಾಗಿದೆ.

ರಸ್ತೆ ಬದಿಯಲ್ಲಿ ಮೆಕ್ಕೆಜೋಳ ಸ್ಥಾನ ಪಡೆದಿದೆ.ಕುದಿಸಿದ ಒಂದು ಮೆಕ್ಕೆಜೋಳಕ್ಕೆ ₹20 ಇದ್ದರೆ ಮೂರು ತೆಗೆದುಕೊಂಡರೆ ₹50ಗೆ ಸಿಗುತ್ತಿದೆ.

ಸೊಪ್ಪುಗಳ ದರ: ಪಾಲಕ್‌ ಸೊಪ್ಪು ₹20ಗೆ ಮೂರು ಕಟ್ಟು, ಪುದೀನಾ ₹30, ಕೋಂತಬರಿ ₹10, ಸಬ್ಬಸಗಿ ₹10, ರಾಜಗಿರಿ ಸೊಪ್ಪು ₹10, ಮೆಂತ್ಯೆ ₹25 ಕಟ್ಟು ಮಾರುಕಟ್ಟೆಯಲ್ಲಿ ಸಿಗುತ್ತಿದೆ.

ಹಣ್ಣುಗಳ ದರ: ಒಂದು ಸೇಬು ಹಣ್ಣು ದೊಡ್ಡ ಗಾತ್ರದು ₹20, ಸಣ್ಣ ಗಾತ್ರದ್ದು ₹15 ಇದೆ. ಒಂದು ಮೊಸಂಬಿ ₹10–15, ದಾಳಿಂಬೆ ಹಣ್ಣು ಕೆ.ಜಿಗೆ ₹150–180ರ ತನಕ ದರ ಇದೆ. ದ್ರಾಕ್ಷಿ ₹80 ಕೆ.ಜಿ ಇದೆ. ಬಾಳೆ ಹಣ್ಣು ಡಜನ್‌ ₹40, ಮಾವಿನ ಹಣ್ಣು ₹40ರಿಂದ 50 ಕೆ.ಜಿ. ಇದೆ. ಕಾಯಿ ₹60 ಕೆ.ಜಿ. ಇದೆ.

****

ತರಕಾರಿ ದರ (₹ ಕೆ.ಜಿಗಳಲ್ಲಿ)

ಟೊಮೆಟೊ;20-15
ಬದನೆಕಾಯಿ;50-45
ಬೆಂಡೆಕಾಯಿ;40-35
ದೊಣ್ಣೆಮೆಣಸಿನಕಾಯಿ;50;45
ಆಲೂಗಡ್ಡೆ;20-25
ಈರುಳ್ಳಿ;30-25
ಎಲೆಕೋಸು;30–25
ಹೂಕೋಸು;60-55
ಚವಳೆಕಾಯಿ;35–40
ಬೀನ್ಸ್; 60-55
ಗಜ್ಜರಿ;60-55
ಸೌತೆಕಾಯಿ;30-25
ಮೂಲಂಗಿ;30-35
ಮೆಣಸಿನಕಾಯಿ;40-35
ಸೋರೆಕಾಯಿ;15–10
ಬಿಟ್ ರೂಟ್;40-45
ಹೀರೆಕಾಯಿ;40-45
ಹಾಗಲಕಾಯಿ;40-35
ತೊಂಡೆಕಾಯಿ;30-35
ಅವರೆಕಾಯಿ;60–55

***

ಮಾರುಕಟ್ಟೆಗೆ ಈ ಮೊದಲು 10 ಕ್ಯಾನ್‌ ತರುತ್ತಿದ್ದ ರೈತರು ಈಗ ಕೇವಲ 5 ಕ್ಯಾನ್ ತರುತ್ತಿದ್ದಾರೆ. ಇದರಿಂದಲೂ ತಕರಾರಿ ಆವಕ ಕಡಿಮೆಯಾಗಿದ್ದು, ದರ ಸಮರಕ್ಕೆ ಕಾರಣವಾಗಿದೆ
ಅಬ್ದುಲ್‌ ಅಮೀದ್‌, ತರಕಾರಿ ವ್ಯಾಪಾರಿ

***

ರೈತರು ಮಾರುಕಟ್ಟೆಗೆ ತರಕಾರಿ ತರುತ್ತಿಲ್ಲ ಎಂದು ಹೆಚ್ಚಿನ ದರ ಮಾರಾಟ ಮಾಡಲಾಗುತ್ತಿದೆ. ಇದು ಗ್ರಾಹಕರಿಗೆ ಹೊರೆಯಾಗಿದೆ. ಅಲ್ಲದೇ ಮನೆ ಮನೆಗೆ ಮಹಿಳೆಯರು ತರುವ ಪುಟ್ಟಿ ತರಕಾರಿಯೂ ಹೆಚ್ಚಿನ ದರವಿದೆ ಎಂದು ಕೆಲ ಸೊಪ್ಪುಗಳನ್ನು ತರುತ್ತಿಲ್ಲ
ಅನಿತಾ ರಾಜೇಶ, ಗೃಹಿಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.