
ಶಹಾಪುರ: ‘ನಮ್ಮಲ್ಲಿ ಯಾವುದೇ ಜಾತಿ, ಧರ್ಮಕ್ಕೆ ಅವಕಾಶವಿಲ್ಲ. ಎಲ್ಲಾ ಸಮುದಾಯ ಹಾಗೂ ಜಾತಿಗಳ ಒಳಗೊಂಡ ಕ್ಷೇತ್ರ ನಮ್ಮದಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.
ತಾಲ್ಲೂಕಿನ ಮುಡಬೂಳ ಗ್ರಾಮದ ವೇಣುಗೋಪಾಲಸ್ವಾಮಿ ದೇವಸ್ಥಾನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ದೇವಸ್ಥಾನಗಳಿಗೆ ಹೆಚ್ಚಿನ ಅನುದಾನ ಒದಗಿಸುತ್ತಾ ಬಂದಿರುವೆ. ಇತಿಹಾಸ ಪ್ರಸಿದ್ಧವಾಗಿರುವ ವೇಣುಗೋಪಾಲಸ್ವಾಮಿ ದೇವಸ್ಥಾನದ ನೂತನ ಕಟ್ಟಡಕ್ಕೆ ₹ 50 ಲಕ್ಷ ಅನುದಾನ ನೀಡಲಾಗುವುದು. ದೇವಾಲಯ ನಿರ್ಮಾಣದಲ್ಲಿ ಗ್ರಾಮಸ್ಥರ ಸಹಕಾರವು ಅಗತ್ಯವಾಗಿದೆ’ ಎಂದರು.
‘ದೇವಾಲಯಗಳು ಧಾರ್ಮಿಕ ಶ್ರದ್ದಾ ಕೇಂದ್ರವಾಗಿವೆ. ಅಲ್ಲದೆ ನೆಮ್ಮದಿಯನ್ನು ನೀಡುವ ಆಶ್ರಯ ತಾಣವು ಆಗಿರುತ್ತವೆ. ದೇಗುಲ ನಿರ್ಮಿಸಿದರೆ ಸಾಲದು ಅದರ ನಿರ್ವಹಣೆ ತುಂಬಾ ಮುಖ್ಯವಾಗಿದೆ. ಅದರ ಸುತ್ತಮುತ್ತಲು ಶಾಂತಿಯ ವಾತಾವರಣ ಹಾಗೂ ಸ್ವಚ್ಛತೆಯನ್ನು ಕಾಪಾಡಬೇಕು. ಸಣ್ಣಪುಟ್ಟ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ನೆರವಾಗುತ್ತವೆ’ ಎಂದರು.
ಕಡಕೊಳದ ರುದ್ರಮುನಿ ಶಿವಾಚಾರ್ಯರು, ಶ್ರೀಶೂಲಪ್ಪ ದೇವರು, ರಾಜ್ಯ ಮದ್ಯ ಸಂಯಮ ಮಂಡಳಿ ಅಧ್ಯಕ್ಷ ಶರಣಬಪ್ಪ ಸಲಾದಪುರ, ಶಿವಮಹಾಂತ ಚಂದಾಪುರ, ವೀರಭದ್ರಪ್ಪ ನಿಷ್ಠಿ, ಸುರಪುರ ದೇವಸ್ಥಾನದ ಮುಖ್ಯ ಅರ್ಚಕ ಆಂಜನೇಯಲು ಹಾಗೂ ಗ್ರಾಮದ ಮುಖಂಡರಾದ ಗೋಪಣ್ಣ ಹವಾಲ್ದಾರ್, ಬಸಲಿಂಗಪ್ಪ ಹವಾಲ್ದಾರ್, ಸಂಗಣಗೌಡ ಮಾಲಿ ಪಾಟೀಲ, ಬಸನಗೌಡ ಪೊಲೀಸ್ ಪಾಟೀಲ, ಶಿವಮಾನಯ್ಯ ಹವಾಲ್ದಾರ್, ಅಶೋಕರಾವ ಮಲ್ಲಾಬಾದಿ, ಬಸವರಾಜ ಹವಾಲ್ದಾರ್, ಅಂಬ್ಲಪ್ಪ, ನಿಂಗಣ್ಣ ಗೋಪಾಳಿ, ವೆಂಕಟೇಶ ಹವಾಲ್ದಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.