ಯಾದಗಿರಿ: ‘ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಇಲ್ಲ. ಸಚಿವರು ಬಿಟ್ಟ ಖಾತೆ ತೆಗೆದುಕೊಳ್ಳಲು ಸಿದ್ದನಿದ್ದೇನೆ’ ಎಂದುಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ಹೇಳಿದರು.
‘ನನಗೆ ಮಾಡಲು ಅನೇಕ ಕೆಲಸಗಳಿವೆ. ಯಾದಗಿರಿ ಉಸ್ತುವಾರಿ ನೀಡಿದರೂ, ಅಭಿವೃದ್ಧಿ ಕಾರ್ಯ ಮಾಡುತ್ತೇನೆ. ಯಾವ ಜಿಲ್ಲೆಯ ಜವಾಬ್ದಾರಿ ಕೊಟ್ಟರೂ ಕೆಲಸ ಮಾಡುತ್ತೇನೆ. ಸಿಎಂ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿದ್ದೇನೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ವಿರೋಧ ಪಕ್ಷ ಪ್ರೇರಿತ ಪ್ರತಿಭಟನೆ’: ‘ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಟ್ರ್ಯಾಕ್ಟರ್ ರ್ಯಾಲಿ ವಿರೋಧ ಪಕ್ಷಗಳ ಕುಮ್ಮಕ್ಕಿನಿಂದ ನಡೆಯುತ್ತಿದೆ’ ಎಂದು ದೂರಿದರು.
‘ವಿರೋಧ ಪಕ್ಷದವರು ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ರೈತರ ಟ್ರ್ಯಾಕ್ಟರ್ ರ್ಯಾಲಿ ರಾಜಕೀಯ ದುರದ್ದೇಶದಿಂದ ಕೂಡಿದೆ. ಇದರಲ್ಲಿ ನಿಜವಾದ ಕಳಕಳಿ ಇಲ್ಲ’ ಎಂದು ಆಕ್ಷೇಪಿಸಿದರು.
ರ್ಯಾಲಿ ಮುಗಿದ ಬಳಿಕ ಇದರ ಹಿಂದೆ ಯಾರಿದ್ದಾರೆ? ಇದಕ್ಕೆ ಕುಮ್ಮಕ್ಕು ನೀಡಿದವರು ಯಾರು? ಎಂಬುದು ಗೊತ್ತಾಗಲಿದೆ. ಕೆಲವರು ಈ ಹೋರಾಟವನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಪ್ರತಿಪಕ್ಷಗಳ ವಿರುದ್ಧವೂ ಚಾಟಿ ಬೀಸಿದರು.
ಯುವಕರು ಕೃಷಿಯಲ್ಲಿ ತೊಡಗಿಕೊಳ್ಳಿ: ಭಾರತ ವಿಶ್ವದ ಅತಿದೊಡ್ಡ ಫಲವತ್ತಾದ ಭೂಮಿ ಹೊಂದಿದೆ. ನಮ್ಮ ಮಣ್ಣು ಮತ್ತು ನೀರಿಗೆ ಜಗತ್ತಿಗೆ ಅನ್ನ ನೀಡುವ ದಿವ್ಯ ಶಕ್ತಿ ಇದೆ. ತಾಯಿ ಭಾರತಮಾತೆ ನಮ್ಮನ್ನು ಸೇರಿದಂತೆ ವಿಶ್ವವನ್ನು ಪೊರೆಯುವ ಅನ್ನಪೂರ್ಣೆಶ್ವರಿ. ಈ ನಿಟ್ಟಿನಲ್ಲಿ ಯುವಕರು ಕೃಷಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಳ್ಳಬೇಕು ಎಂದರು.
ಕೃಷಿ ಒಂದು ಪಾರಂಪರಿಕೆ ಉದ್ಯೋಗವಾಗದೇ ಒಂದು ಲಾಭದಾಯಕ ಉದ್ಯಮವಾಗಿ ಪರಿವರ್ತನೆಗೊಳ್ಳಬೇಕು. ಕೃಷಿವೃತ್ತಿಎನ್ನುವ ನಿಟ್ಟಿನಲ್ಲಿ ಕೃಷಿ ಅಭಿವೃದ್ದಿಗೊಳಿಸಬೇಕು. ಕೃಷಿಗೆ ಸ್ಥಳೀಯ ಮಟ್ಟದಲ್ಲಿಯೇಮಾರುಕಟ್ಟೆ ಕಲ್ಪಿಸುವುದು. ಕೃಷಿ ಉತ್ಪನಗಳ ಮೌಲ್ಯವರ್ಧನೆ ಮಾಡುವುದು ಆತ್ಮನಿರ್ಭರ ಭಾರತದ ಮೊದಲ ಹೆಜ್ಜೆಯಾಗಿದೆ.ರೈತರ ಆದಾಯ ದ್ವಿಗುಣಗೊಳಿಸುವುದು ಕೇಂದ್ರ ಸರ್ಕಾರದ ಬಹುಮುಖ್ಯ ಧ್ಯೇಯ. ಈ ನಿಟ್ಟಿನಲ್ಲಿ ಕೃಷಿ ಕಾಯ್ದೆಯಲ್ಲಿ ತಿದ್ದುಪಡಿ ತರಲಾಗಿದೆ. ರೈತರ ಬೆವರಿಗೆ ಪೂರ್ಣಫಲ ನೀಡುವುದು. ಅವನು ಬೆಳೆದ ಫಸಲಿನ ಪೂರ್ಣ ಲಾಭವನ್ನು ರೈತರಿಗೆ ದೊರೆಯುವಂತೆ ಮಾಡುವುದು ಕೇಂದ್ರ ಸರ್ಕಾರದ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.