ADVERTISEMENT

‘ಗುರುಮಠಕಲ್ ಪ್ರವಾಹ ಪೀಡಿತ’

ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಶಾಸಕ ನಾಗನಗೌಡ ಕಂದಕೂರ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 16:38 IST
Last Updated 5 ನವೆಂಬರ್ 2020, 16:38 IST
ನಾಗನಗೌಡ ಕಂದಕೂರ
ನಾಗನಗೌಡ ಕಂದಕೂರ   

ಯಾದಗಿರಿ: ರಾಜ್ಯ ಸರ್ಕಾರವು ಐದು ಜಿಲ್ಲೆಗಳ ಒಟ್ಟು ಏಳು ತಾಲ್ಲೂಕುಗಳನ್ನು ಅತಿವೃಷ್ಟಿ ಹಾಗೂ ಪ್ರವಾಹಪೀಡಿತ ಎಂದು ಘೋಷಿಸಿದ್ದು, ಅದರಲ್ಲಿ ಗುರುಮಠಕಲ್ ತಾಲ್ಲೂಕನ್ನೂ ಪರಿಗಣಿಸಲಾಗಿದೆ ಎಂದು ಶಾಸಕ ನಾಗನಗೌಡ ಕಂದಕೂರ ತಿಳಿಸಿದರು.

ಪತ್ರಿಕಾ ಪ್ರಕಟಣೆ ನೀಡಿದ ಅವರು, ಸರ್ಕಾರವು ಗುರುಮಠಕಲ್ ತಾಲ್ಲೂಕನ್ನೂ ಪ್ರವಾಹಪೀಡಿತ ಎಂದು ಪರಿಗಣಿಸಿದ್ದಕ್ಕೆ ಧನ್ಯವಾ ಸಲ್ಲಿಸುತ್ತೇನೆ. ತಾಲ್ಲೂಕು ವ್ಯಾಪ್ತಿಯಲ್ಲೂ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಯಾಗಿದೆ. ತಾಲ್ಲೂಕು ವ್ಯಾಪ್ತಿಯಲ್ಲಿ 45,108 ಹೆಕ್ಟೇರ್‌ ಮುಂಗಾರು ಬಿತ್ತನೆಯಾಗಿತ್ತು. ಅದರಲ್ಲಿ 20,344 ಹೆಕ್ಟೇರ್‌ ಹತ್ತಿ, 12,265 ಹೆಕ್ಟೇರ್‌ ತೊಗರಿ, 6,924 ಹೆಕ್ಟೇರ್‌ ಹೆಸರು ಹಾಗೂ 4626 ಹೆಕ್ಟೇರ್‌ ಭತ್ತ ಒಳಗೊಂಡಿದೆ. ಈ ಬಾರಿ ವಾಡಿಕೆಯ ಪ್ರಮಾಣಕ್ಕಿಂತ ಶೇ 88ರಷ್ಟು (295 ಮಿ.ಮೀ) ಹೆಚ್ಚುವರಿ ಮಳೆ ಆಗಿರುವುದರಿಂದ ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮವಾಗಿದೆ ಎಂದು ತಿಳಿಸಿದ್ದಾರೆ.

ಈ ವರ್ಷದ ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ 21,456 ಹೆಕ್ಟರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನ ವಿವಿಧ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಈ ಕುರಿತು ನಾನು ಸರ್ಕಾರದ ಗಮನಕ್ಕೆ ತಂದು, ಮನಿ ಮಾಡಿದ್ದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ನಮ್ಮ ಮನವಿಗೆ ಸ್ಪಂಧಿಸಿದ ಕಂದಾಯ ಸಚಿವರಾದ ಆರ್.ಅಶೋಕ ಅವರಿಗೂ ಜೊತೆಗೆ ಗುರುಮಠಕಲ್ ತಾಲ್ಲೂಕನ್ನು ಪರಿಗಣಿಸುವಲ್ಲಿ ಯಾದಗಿರಿಯ ಜಿಲ್ಲಾಧಿಕಾರಿಗಳಾದ ಡಾ.ರಾಗಪ್ರಿಯಾ ಆರ್. ಅವರಿಗೂ ಜನತೆಯ ಪರವಾಗಿ ಧನ್ಯವಾದ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.