ಹುಣಸಗಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆಲಾಗಿರುವ ಭತ್ತದ ರಾಶಿ ಕಾರ್ಯದಲ್ಲಿ ಬಹುತೇಕ ರೈತರು ನಿರತರಾಗುತ್ತಿದ್ದಾರೆ.
ಹಿಂಗಾರು ಹಂಗಾಮಿಗೆ ಚಾಲು ಬಂದಿ ಕ್ರಮದಂತೆ ಏ.10 ವರೆಗೂ ನೀರು ಹರಿಸಿದ್ದರಿಂದಾಗಿ ಕಳೆದ ಮೂರು ನಾಲ್ಕು ದಿನಗಳಿಂದ ರಾಶಿ ಮಾಡುವ ಕಾರ್ಯ ಭರದಿಂದ ನಡೆದಿದ್ದು, ನಿತ್ಯವೂ ಪ್ರತಿ ಗ್ರಾಮಗಳ ಹೊಲಗದ್ದೆಗಳಲ್ಲಿ ಯಂತ್ರಗಳ ಸದ್ದು ಜೋರಾಗುತ್ತದೆ. ಸ್ಥಳೀಯವಾಗಿಯೇ ಹೆಚ್ಚಿನ ಕಟಾವುಯಂತ್ರಗಳು ಗ್ರಾಮಿಣ ಭಾಗದಲ್ಲಿ ಲಗ್ಗೆ ಇಟ್ಟಿದ್ದರಿಂದಾಗಿ ಕಟಾವು ಯಂತ್ರಗಳ ಅಭಾವ ಇಲ್ಲದಂತಾಗಿ ಕಟಾವಿನ ಬೆಲೆ ಗಗನಕ್ಕೇರದೇ ರೈತರ ಸ್ನೇಹಿಯಾಗುತ್ತಿದೆ.
ನಿರೀಕ್ಷಿತ ಪ್ರಮಾಣದಲ್ಲಿ ಕಾಲುವೆಗೆ ನೀರು ಹರಿಸಿದ್ದರಿಂದ ಈ ಬಾರಿ ಬಹುತೇಕ ರೈತರು ಕಾವೇರಿ, ಆರ್.ಎನ್.ಆರ್ ತಳಿಯ ಭತ್ತವನ್ನು ನಾಟಿ ಮಾಡಿಕೊಂಡಿದ್ದರು. ಕ್ರಿಮಿನಾಶಕ ಹಾಗೂ ರಸಗೊಬ್ಬರದ ಹಾಕಿದ್ದರಿಂದ ಪ್ರತಿ ಎಕರೆಗೆ ಸುಮಾರು 40 ಸಾವಿರ ಖರ್ಚು ಬಂದಿದೆ. ಇಳುವರಿ ಸುಮಾರು 40 ರಿಂದ 45 ಚೀಲ ಬರುತ್ತಿದೆ. ಆದರೆ ಭತ್ತದ ಬೆಲೆ ಸದ್ಯ 1,540 ರಿಂದ 1,560ರವರೆಗೆ ಇದ್ದು ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ಈ ಬಾರಿ ನಿರೀಕ್ಷಿತ ಬೆಲೆ ದೊರೆತಲ್ಲಿ ರೈತರು ನೆಮ್ಮದಿ ಜೀವನ ನಡೆಸುವಂತಾಗಲಿದೆ ಎಂದು ವಜ್ಜಲ ಗ್ರಾಮದ ಪ್ರಗತಿಪರ ರೈತ ನಿಂಗನಗೌಡ ಬಸನಗೌಡ್ರ ವಜ್ಜಲ ಗ್ರಾಮದ ದೊಡ್ಡಪ್ಪ ಕಕ್ಕೇರಿ, ಮಲ್ಲಪ್ಪ ದೇವತಕಲ್ಲ ಹೇಳುತ್ತಾರೆ.
ಬಹುತೇಕ ರೈತರು ಹಿಂಗಾರು ಹಂಗಾಮಿನಲ್ಲಿ ಆರ್.ಎನ್.ಆರ್ ತಳಿಯ ಭತ್ತವನ್ನೇ ನಾಟಿ ಮಾಡಿದ್ದರು. ಆದರೆ ಕಳೆದ ಎರಡು ವಾರಗಳ ಹಿಂದೆ ಕಾಳು ಕಟ್ಟುವ ಹಂತದಲ್ಲಿ ಅಲ್ಲಲ್ಲಿ ತಾಲ್ (ಜೋಳ್ಳು) ಬರುತ್ತಿದ್ದು ಇಳುವರಿಯಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ ಎಂದು ಕಾಮನಟಗಿ ಗ್ರಾಮದ ರೈತ ರಂಗಪ್ಪ ಡಂಗಿ ಹಾಗೂ ಬೀರಪ್ಪ ಮೇಟಿ ಹೇಳಿದರು.
ಸರ್ಕಾರವೇ ಖರೀದಿಸಲಿ: ರಾಜ್ಯದಲ್ಲಿ ಬೆಳೆದಿರುವ ಭತ್ತವನ್ನು ಸರ್ಕಾರದ ಮುಖಾಂತರವೇ ಇದ್ದ ಸ್ಥಳದಲ್ಲಿಯೇ ಖರೀದಿಸುವಂತಾಗಬೇಕು. ಅಂದಾಗ ಮಾತ್ರ ರೈತರಿಗೆ ಅನುಕೂಲವಾಗಲಿದೆ. ಇಲ್ಲದಿದ್ದಲ್ಲಿ ಪ್ರತಿವರ್ಷವೂ ಸಾಕಷ್ಟು ರೈತರು ಭತ್ತ ಖರೀದಿದಾರರಿಂದ ಮೋಸ ಹೋಗಿ ಆರ್ಥಿಕ ಸಂಕಷ್ಟಕ್ಕಿಡಾದ ಘಟನೆ ನಡೆದಿವೆ. ಸರ್ಕಾರ ಖರೀದಿಸಿದಲ್ಲಿ ರೈತರಿಗೆ ಆರ್ಥಿಕ ಭದ್ರತೆ ಖಾತರಿ ಇರುತ್ತದೆ ಎಂದು ದ್ಯಾಮನಹಾಳ ಗ್ರಾಮದ ರೈತ ಲಕ್ಷ್ಮಿಕಾಂತ ಕುಲಕರ್ಣಿ ಹಾಗೂ ಗುಳಬಾಳ ಗ್ರಾಮದ ಸೋಮಣ್ಣ ಮೇಟಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.