ADVERTISEMENT

ಗುರುಮಠಕಲ್: ನೇಣು ಬಿಗಿದು ಪತ್ನಿ ಕೊಂದ ಆರೋಪಿ ವಶಕ್ಕೆ

ಮದುವೆ ವಾರ್ಷಿಕೋತ್ಸವದ ದಿನವೇ ಕೃತ್ಯ

​ಪ್ರಜಾವಾಣಿ ವಾರ್ತೆ
Published 18 ಮೇ 2022, 4:17 IST
Last Updated 18 ಮೇ 2022, 4:17 IST
ಭೀಮರಾಯ ಭಂಗಿ
ಭೀಮರಾಯ ಭಂಗಿ   

ಗುರುಮಠಕಲ್: ತಾಲ್ಲೂಕಿನ ಗೋಪಾಳಪುರ ಗ್ರಾಮದಲ್ಲಿ ಶುಕ್ರವಾರ (ಮೇ 13) ರಾತ್ರಿ ವೇಳೆ ಪತ್ನಿಗೆ ನೇಣು ಬಿಗಿದು ಕೊಲೆ ಮಾಡಿದ ಆರೋಪಿಯನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.

ಮೃತ ಪಾರ್ವತಿ ಹಾಗೂ ಆರೋಪಿ ಭೀಮರಾಯ ಭಂಗಿ ಅವರಿಗೆ ಕಳೆದ ವರ್ಷ ಮದುವೆಯಾಗಿತ್ತು. ಅಡುಗೆ ಸರಿಯಾಗಿ ಮಾಡುತ್ತಿಲ್ಲ ಎನ್ನುವ ಕಾರಣಕ್ಕೆ ಆಗಾಗ ಜಗಳ ಮಾಡುತ್ತಿದ್ದ.

ಎರಡು ತಿಂಗಳ ಹಿಂದೆ ಅಡುಗೆ ಕಲಿತು ಬರುವಂತೆ ಪತ್ನಿಯನ್ನು ತಾಲ್ಲೂಕಿನ ಸೌರಾಷ್ಟ್ರಹಳ್ಳಿಯ ಮೃತಳ ತವರು ಮನೆಗೆ ಬಿಟ್ಟು ಬಂದಿದ್ದ ಆರೋಪಿ ಕೆಲ ದಿನಗಳ ಹಿಂದೆ ವಾಪಸ್ ಕರೆತಂದಿದ್ದ. ಶುಕ್ರವಾರ (ಮೇ 13 ) ತಮ್ಮ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ನಂತರ ಮನೆಯ ಛಾವಣಿಯಲ್ಲಿ ಮಲಗಲು ಕರೆದೊಯ್ದಿದ್ದಾನೆ. ನಂತರ ಜಗಳವಾಡಿದ್ದು, ಅಲ್ಲಿದ್ದ ಕಾಟನ್‌ ಬಟ್ಟೆಯಂತಹ ದಾರದಿಂದ ನೇಣುಬಿಗಿದು ಕೊಲೆ ಮಾಡಿದ್ದಾನೆ.

ADVERTISEMENT

ಬೆಳಿಗ್ಗೆಯ ತನಕ ಶವದೊಡನೆ ಮಲಗಿ ‘ತನ್ನ ಪತ್ನಿ ಹೇಗೋ ಮೃತಪಟ್ಟಿದ್ದಾಳೆ’ ಎಂದು ನಂಬಿಸಲು ಯತ್ನಿಸಿದ್ದಾನೆ. ಆದರೆ, ಜನರು ಮೃತ ಪಾರ್ವತಿಯ ಕತ್ತಿನ ಮೇಲೆ ದಾರದ ಗಾಯಗಳು ಗುರುತಿಸಿದ್ದರಿಂದ ತಲೆಮರಿಸಿಕೊಂಡಿದ್ದ. ವಿಷಯ ತಿಳಿದ ಮೃತಳ ತಂದೆ ಆಂಜನೇಯ ಅವರು ಗುರುಮಠಕಲ್ ಠಾಣೆಗೆ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದರು.

ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಹಾಗೂ ಡಿವೈಎಸ್ಪಿ ವೀರೇಶ ಕರಿಗುಡ್ಡ ಅವರ ಮಾರ್ಗದರ್ಶನದಲ್ಲಿ ನಮ್ಮ ತಂಡ ಆರೋಪಿಯನ್ನು ಕಂದಕೂರ ಗ್ರಾಮದ ಬಳಿ ಪತ್ತೆಹಚ್ಚಿ ಬಂಧಿಸಿದೆ. ಆರೋಪಿಯನ್ನು ನ್ಯಾಯಾಂಗ ಬಂಧನದಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಖಾಜಾಹುಸೇನ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.