
ಯಾದಗಿರಿ: ‘ತ್ರಿಪದಿಯ ಮೂರು ಸಾಲುಗಳ ವಚನಗಳ ಮೂಲಕ ಜಗದ ಸಾರ ತಿಳಿಸಿದ ಸರ್ವಜ್ಞ ಅವರು ಶ್ರೇಷ್ಠ ಜ್ಞಾನಿ’ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್ ಹೇಳಿದರು.
ಇಲ್ಲಿನ ಕನ್ನಡ ಸಾಹಿತ್ಯ ಪರಿಷ್ ಜಿಲ್ಲಾ ಘಟಕದ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಸಂತಕವಿ ಸರ್ವಜ್ಞ ಜಯಂತ್ಯುತ್ಸವ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಸರ್ವಜ್ಞ ಹಾವೇರಿ ಜಿಲ್ಲೆಯ ಮೂಲದವರಾಗಿದ್ದು, ಬಾಲ್ಯದ ಹೆಸರು ಪುಷ್ಪದತ್ತ ಎಂದಿತ್ತು. ತ್ರಿಪದಿ ವಚನಗಳ ರಚನೆ ಮೂಲಕ ಸರ್ವಜ್ಞ ಎಂದು ಪ್ರಸಿದ್ಧಿಯಾದರು. ಬಾಲ್ಯದಲ್ಲಿ ಅಗಾಧವಾದ ಪಾಂಡಿತ್ಯ ಗಳಿಸಿದ್ದರು’ ಎಂದರು.
‘ಸರ್ವಜ್ಞ ಸುಮಾರು ರಚಿಸಿ 7,070 ತ್ರಿಪದಿ ವಚನಗಳು ಲಭ್ಯವಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಅವರ ಜೀವನ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಸರ್ವಜ್ಞ ಭವನಕ್ಕೆ ನಿವೇಶನ ನೀಡಲಾಗುವುದು’ ಎಂದು ಹೇಳಿದರು.
ಉಪನ್ಯಾಸ ನೀಡಿ ಮಾತನಾಡಿದ ಅಯ್ಯಮ್ಮ ಜೇಗಾಂ ಸೌರಾಷ್ಟ್ರಹಳ್ಳಿ, ‘ಸರ್ವಜ್ಞ ಎಂದರೆ ಸಂಸ್ಕೃತದಲ್ಲಿ ಎಲ್ಲವನ್ನೂ ತಿಳಿದವ ಎಂದರ್ಥ. ಕನ್ನಡ ತ್ರಿಪದಿ ಸಾಹಿತ್ಯದ ಅಗ್ರಗಣ್ಯ ಕವಿ. ಅಲ್ಪ ಶಬ್ದಗಳಲ್ಲಿ ಅಗಾಧವಾದ ಅರ್ಥವನ್ನು ತಿಳಿಸಿದ ಮಹಾನ್ ಜ್ಞಾನಿ’ ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸುರೇಶ ಅಂಕಲಗಿ, ಯುವ ಕ್ರೀಡಾ ಇಲಾಖೆ ಅಧಿಕಾರಿ ಯುವ ಸಬಲೀಕರಣ ಹಾಗೂ ಕ್ರೀಡಾಧಿಕಾರಿ ರಾಜು ಬಾವಿಹಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ, ಕುಂಬಾರ ಸಮಾಜದ ಜಿಲ್ಲಾ ಅಧ್ಯಕ್ಷ ದೇವಿಂದ್ರಪ್ಪ ದರ್ಶನಾಪುರ ಸೇರಿ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.