ಯಾದಗಿರಿ: ಮೈಲಾರಲಿಂಗ ದೇವರ 77 ಕ್ಷೇತ್ರಗಳ ಪೈಕಿ ತಾಲ್ಲೂಕಿನ ಮೈಲಾಪುರ ಕೊನೆಯ ಕ್ಷೇತ್ರವಾಗಿದೆ. ದೇಶದ 77 ಕ್ಷೇತ್ರಗಳಲ್ಲಿ ಒಂದೊಂದು ಅವತಾರದಲ್ಲಿ ಮೈಲಾರಲಿಂಗ ದೇವರು ಕಾಣಿಸಿಕೊಂಡಿದ್ದಾರೆ ಎನ್ನುವುದು ಭಕ್ತರ ನಂಬಿಕೆ.
ತಾಲ್ಲೂಕಿನ ಮೈಲಾಪುರ ಮೈಲಾರಲಿಂಗೇಶ್ವರನ ಜಾತ್ರೆಗೆ ಸಕಲ ಸಿದ್ಧತೆ ನಡೆದಿದ್ದು, (ಜ.14) ಮಂಗಳವಾರ ಪಲ್ಲಕ್ಕಿ ಉತ್ಸವ ನಡೆಯಲಿದೆ. ಸೋಮವಾರ ರಾತ್ರಿಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ರಾತ್ರಿ 8ರಿಂದ 12ರವರೆಗೆ ಧೂಳುಗಾಯಿ ದರ್ಶನ ನಡೆಯಲಿದೆ. ರಾತ್ರಿ 1ರಿಂದ ಬೆಳಗಿನ ಜಾವ 5 ಗಂಟೆವರೆಗೆ ಮಲ್ಲಯ್ಯನಿಗೆ ರುದ್ರಾಭಿಷೇಕ ಜರುಗಲಿದೆ.
ಮಂಗಳವಾರ ಮಧ್ಯಾಹ್ನ 1ರಿಂದ 2.30ರ ತನಕ ಹೊನ್ನೆಕೇರಿಯಲ್ಲಿ ಗಂಗಾಸ್ನಾನ ನಡೆಯಲಿದೆ. 2.30ರ ನಂತರ ಸರಪಳಿ ಹರಿಯುವ ಕಾರ್ಯಕ್ರಮ, ರಾತ್ರಿ 12 ಗಂಟೆಗೆ ಗಂಗೀ ಮಾಳಮ್ಮ ಮಲ್ಲಯ್ಯ ವಿವಾಹ ಮಹೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಮೂಲಗಳು ಹೇಳುವ ಮಾತಾಗಿದೆ.
ಮಲ್ಲಯ್ಯನ ದೇವಸ್ಥಾನಕ್ಕೆ ಬರುವ ಭಕ್ತರಿಗಾಗಿ ಗ್ರಾಮಕ್ಕೆ ಕೂಡುವ 6 ರಸ್ತೆಗಳಿದ್ದು, ಅವುಗಳಿಗೆ ಚೆಕ್ ಪೋಸ್ಟ್ ತೆರೆದು ಕಾರ್ಯ ನಿರ್ವಹಿಸಲಾಗುತ್ತಿವೆ. ಜಾತ್ರೆಗೆ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.
ಸ್ವಚ್ಛತೆ ಇರಲಿ: ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಮೈಲಾಪುರದ ಮೈಲಾರಲಿಂಗೇಶ್ವರ ಜಾತ್ರೆ ನಡೆಯಲಿದೆ. ಜಾತ್ರೆ ಅಂಗವಾಗಿ ದೇವಸ್ಥಾನ ಪಕ್ಕದ ಹೊನ್ನಕೆರೆಯಲ್ಲಿ ಪುಣ್ಯಸ್ನಾನ ಮಾಡುವುದು ವಾಡಿಕೆ. ಸ್ನಾನದ ನಂತರ ಬಟ್ಟೆಗಳನ್ನು ಕೆರೆಯಲ್ಲಿ ಬಿಸಾಡುವುದು, ಕೆರೆದಡದಲ್ಲಿ ಬಿಸಾಡುವುದರಿಂದ ಇಡೀ ಪರಿಸರ ಕಲುಷಿತವಾಗುತ್ತಿದೆ. ಇದರ ಜೊತೆಗೆ ಜಾತ್ರೆಯ ವಿವಿಧ ತ್ಯಾಜ್ಯಗಳನ್ನು ಕೆರೆ ಅಕ್ಕಪಕ್ಕದಲ್ಲಿ ಬಿಸಾಡಿದ್ದು, ಅಸ್ವಚ್ಛತೆ ಕಂಡು ಬರುತ್ತಿದೆ. ಇದನ್ನು ತಡೆಗಟ್ಟಲು ಭಕ್ತರು, ದೇವಸ್ಥಾನ ಸಮಿತಿಯವರು ಜಾಗೃತಿ ವಹಿಸಬೇಕಿದೆ.
ವಿಶೇಷ ಬಸ್ ವ್ಯವಸ್ಥೆ: ತಾಲ್ಲೂಕಿನ ಮೈಲಾಪುರ ಮೈಲಾರಲಿಂಗೇಶ್ವರ ಜಾತ್ರೆಗೆ ಯಾದಗಿರಿ ವಿಭಾಗದಿಂದ ಸುಮಾರು 80 ವಿಶೇಷ ಬಸ್ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಜನವರಿ 12 ರಿಂದ 18ರವರೆಗೆ ಮೈಲಾಪುರ ಮೈಲಾರಲಿಂಗೇಶ್ವರ ದೇವರ ಜಾತ್ರೆ ಜರುಗಲಿರುವ ಪ್ರಯುಕ್ತ ಜಾತ್ರೆಗೆ ಬರುವ ಭಕ್ತ ಪ್ರಯಾಣಿಕರ ಸಾರಿಗೆ ಅನುಕೂಲಕ್ಕಾಗಿ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ.
ವಿಶೇಷ ಬಸ್ಗಳು ಯಾದಗಿರಿ, ಶಹಾಪುರ, ಸುರಪುರ, ಗುರುಮಠಕಲ್, ವಾಡಿ, ಸೇಡಂ, ಕೊಡಂಗಲ್, ನಾರಾಯಣಪೇಟ, ತಾಳಿಕೋಟೆ, ಹುಣಸಗಿ, ಕೆಂಭಾವಿ, ಸಿಂದಗಿ, ಹುಬ್ಬಳ್ಳಿ, ಗದಗ ಮುಂತಾದ ಸ್ಥಳಗಳಿಗೆ ಕಾರ್ಯಾಚರಣೆ ಮಾಡಲಾಗುತ್ತದೆ.
ಸೂಕ್ತ ಬಂದೋಬಸ್ತ್: ಮೈಲಾಪುರ ಜಾತ್ರೆ ಅಂಗವಾಗಿ ಸೂಕ್ತ ಭದ್ರತೆ ಕಲ್ಪಿಸಲಾಗಿದೆ. ಡಿವೈಎಸ್ಪಿ 4, ಸಿಪಿಐ 14, ಪಿಎಸ್ಐ 37, ಗೃಹ ರಕ್ಷಕ ದಳ ಸಿಬ್ಬಂದಿ 400, ಎಚ್ಸಿ, ಪಿಸಿ 370, ಡಿಎಆರ್ 3 ಹೀಗೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಮೈಲಾಪುರ ಮೈಲಾರಲಿಂಗೇಶ್ವರ ಜಾತ್ರೆಗಾಗಿ ಭಕ್ತರ ಬೇಡಿಕೆಗೆ ತಕ್ಕಂತೆ ವಿಶೇಷ ಬಸ್ಗಳು ಕಾರ್ಯಾಚರಣೆ ನಡೆಸುತ್ತಿವೆ.–ಸುನಿಲ್ ಚಂದರಗಿ, ಕೆಕೆಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ
ಮೈಲಾರಲಿಂಗೇಶ್ವರ ಜಾತ್ರೆಗೆ ರಾಜ್ಯ ಸೇರಿದಂತೆ ಅಕ್ಕಪಕ್ಕದ ರಾಜ್ಯಗಳಿಂದ ಭಕ್ತರು ಆಗಮಿಸಲಿದ್ದು ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.–ಪೃಥ್ವಿಕ್ ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರತಿ ವರ್ಷ ಮೈಲಾಪುರ ಮಲ್ಲಯ್ಯನ ದೇವಸ್ಥಾನಕ್ಕೆ ಹೋಗಿ ಮಲ್ಲಯ್ಯ ದೇವರ ಸರಪಳಿ ಹಾಗೂ ದೇವರ ದರ್ಶನ ಮಾಡುತ್ತೇವೆ.–ಸಾಬಯ್ಯ ನಾಯಕ, ಭಕ್ತ
ದೇಗುಲದ ಐತಿಹಾಸಿಕ ಹಿನ್ನೆಲೆ
ಮೈಲಾಪುರದ ಗುಹಾಂತರ ದೇವಾಲಯದಲ್ಲಿ ಒಂದೇ ಬೃಹತ್ ಕಲ್ಲು ಬಂಡೆ ಇದ್ದು ಮೂರು ಕಡೆಯೂ ದೇವಸ್ಥಾನ ನಿರ್ಮಿಸಲಾಗಿದೆ. ಮೈಲಾರಲಿಂಗೇಶ್ವರ ದೇವರಿಗೆ ಇಬ್ಬರು ಪತ್ನಿಯರಿದ್ದು ಧರ್ಮಪತ್ನಿ ಗಂಗಿ ಮಾಳಮ್ಮ ಎರಡನೇ ಪತ್ನಿ ತುರಂಗ ಬಾಲಮ್ಮ ಇಬ್ಬರಿಗೂ ದೇಗುಲ ನಿರ್ಮಿಸಲಾಗಿದೆ. ದೇವಸ್ಥಾನಕ್ಕೆ 600ರಿಂದ 700 ವರ್ಷಗಳ ಇತಿಹಾಸ ಇದೆ. 6 ಕುಟುಂಬಗಳು ಇಲ್ಲಿ ಪೂಜಾರಿಕೆ ಮಾಡಿಕೊಂಡು ಬರುತ್ತಿದ್ದಾರೆ.
ವರ್ಷದಲ್ಲಿ ಎರಡು ಬಾರಿ ಜಾತ್ರೆ ಉತ್ಸವ ನಡೆಯುತ್ತದೆ. ದೀಪಾವಳಿ ಸಂಕ್ರಾತಿ ದಿನ ಇಲ್ಲಿ ವಿಶೇಷ ಧಾರ್ಮಿಕ ಆಚರಣೆಗಳು ನಡೆಯುತ್ತವೆ. ದೇವಸ್ಥಾನದಲ್ಲಿ ನಡೆಯುವ ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಭಕ್ತರಿಗೆ ಹೋಳಿಗೆ ಪ್ರಸಾದ ನೀಡುವುದು ಇಲ್ಲಿಯ ವಿಶೇಷತೆ. ಅಮಾವಾಸ್ಯೆ ಹುಣ್ಣಿಮೆ ಧಾರ್ಮಿಕ ವಿಶೇಷ ದಿನಗಳಲ್ಲಿಯೂ ಹೋಳಿಗೆ ಊಟ ಇರುತ್ತದೆ.
‘ಹೂಗಾರ ಕುರುಬರು ಕೋಲಿ ದಲಿತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆದರೆ ಒಂದೂ ಮುಸ್ಲಿಂ ಕುಟುಂಬದ ಮನೆ ಇಲ್ಲಿಲ್ಲ’ ಎಂದು ಗ್ರಾಮಸ್ಥ ಮಲ್ಲಯ್ಯ ಪೂಜಾರಿ ಹೇಳುತ್ತಾರೆ.
ಕೋಳಿ ಮಂಚ ಇಲ್ಲ: ಗ್ರಾಮದ ವಿಶೇಷವೆಂದರೆ ಇಲ್ಲಿ ಕೋಳಿ ಕೂಗುವ ಶಬ್ದ ಕೇಳಿಸುವುದಿಲ್ಲ. ಮಂಚವೂ ಇಲ್ಲಿಲ್ಲ. ಇದು ಗ್ರಾಮದ ವಿಶೇಷವಾಗಿದೆ. ಮತ್ತೊಂದು ವಿಶೇಷವೆಂದರೆ ಗ್ರಾಮದ ಹೆಣ್ಣು ಕೊಡುವಾಗ ಮಂಚ ಕೊಡುವುದಿಲ್ಲ. ಅಲ್ಲದೆ ಪುರುಷರು ಮಂಚ ಉಡುಗೊರೆಯಾಗಿ ಪಡೆಯುವುದಿಲ್ಲ. ಬಾಣಂತಿ ಸೇರಿದಂತೆ ಯಾರೂ ಮಂಚದ ಮೇಲೆ ಮಲಗುವುದಿಲ್ಲ. ಮೈಲಾರಲಿಂಗೇಶ್ವರ ದೇವರಿಗೆ ಕೋಳಿ ಕೂಗುವ ಶಬ್ದ ಕೇಳಬಾರದು.
ದೇವಸ್ಥಾನದಲ್ಲಿ ಮರದ ಮಂಚ ಗಾದಿ ಇರುವುದರಿಂದ ಗ್ರಾಮದಲ್ಲಿಯೂ ಮಂಚದ ಬಳಕೆ ಇಲ್ಲ. ಕೋಳಿ ಸಾಕಾಣಿಯೂ ಇಲ್ಲ. ಶತಮಾನಗಳಿಂದಲೂ ಈ ಪದ್ಧತಿಯನ್ನು ಶ್ರದ್ಧಾ ಭಕ್ತಿಯಿಂದ ಪಾಲಿಸಿಕೊಂಡು ಬಂದಿದ್ದೇವೆ ಎನ್ನುತ್ತಾರೆ ಗ್ರಾಮಸ್ಥರು. ಪಲ್ಲಕ್ಕಿ ಉತ್ಸವ ವೇಳೆ ಕುರಿಮರಿಗಳನ್ನು ಪಲ್ಲಕ್ಕಿ ಮೇಲೆ ಹಾರಿಸುವುದು ವಾಡಿಕೆ. ಆದರೆ ಜಿಲ್ಲಾಡಳಿತ ಕುರಿಮರಿಗಳನ್ನು ಪಲ್ಲಕ್ಕಿ ಮೇಲೆ ಹಾರಿಸುವುದನ್ನು ನಿಷೇಧಿಸಿದ ಬಳಿಕ ಚೆಕ್ಪೋಸ್ಟ್ನಲ್ಲಿ ಪಶು ಸಂಗೋಪನಾ ಇಲಾಖೆಯಿಂದ ವಶಪಡಿಸಿಕೊಳ್ಳಲಾಗುತ್ತದೆ. ಜಾತ್ರೆಯ ಮರುದಿನ ಕುರಿಮರಿಗಳನ್ನು ಹರಾಜು ಹಾಕಲಾಗುತ್ತದೆ.
ಪಾದಯಾತ್ರೆ ಮೂಲಕ ಭಕ್ತರ ಆಗಮನ
ಯಾದಗಿರಿ: ತಾಲ್ಲೂಕಿನ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಜನವರಿ 12 ರಿಂದ 18ರವರೆಗೆ ಸಂಕ್ರಾಂತಿ ಹಬ್ಬದ ವಿಶೇಷ ಧಾರ್ಮಿಕ ಪೂಜೆಗಳು ನಡೆದಿದ್ದು ಹರಕೆ ಹೊತ್ತವರು ಪಾದಯಾತ್ರೆ ಮೂಲಕ ಆಗಮಿಸುತ್ತಿದ್ದಾರೆ. ಕಳೆದ 3-4 ದಿನಗಳಿಂದ ಭಕ್ತರು ಮೈಲಾಪುರದ ಜಾತ್ರಾಮಹೋತ್ಸವ ಅಂಗವಾಗಿ ಪಾದಯಾತ್ರೆ ಮೂಲಕ ಮೈ ಕೊರೆಯುವ ಚಳಿಯ ಮಧ್ಯೆ ಪಾದಯಾತ್ರೆ ಮೂಲಕ ಹೊರಟಿದ್ದಾರೆ.
ಏಳು ಕೋಟಿ....ಏಳು ಕೋಟಿ....ಏಳು ಕೋಟಿ..... ಎಂಬ ಜಯಘೋಷಗಳ ಮಧ್ಯೆ ಹೀಗೆ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ಭಾನುವಾರ ತೆರಳಿದರು. ಮಲ್ಲಯ್ಯ ದೇವರ ಪಲ್ಲಕ್ಕಿ ಉತ್ಸವ ಮೂರ್ತಿ ಮಲ್ಲಯ್ಯ ದೇವರು ಹೊತ್ತುಕೊಂಡು ಸುಕ್ಷೇತ್ರ ಮೈಲಾಪುರಕ್ಕೆ ಸಾಗುತ್ತಿದ್ದಾರೆ. ನೆರೆಯ ಜಿಲ್ಲೆಗಳಾದ ರಾಯಚೂರು ಕಲಬುರಗಿ ವಿಜಯಪುರ ಬಾಗಲಕೋಟೆ ಗದಗ ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು ಪಾದಯಾತ್ರೆ ಮೂಲಕ ಆಗಮಿಸುತ್ತಿದ್ದಾರೆ.
ಅಲ್ಲಲ್ಲಿ ಭೋಜನದ ವ್ಯವಸ್ಥೆ: ಪಾದಯಾತ್ರಿಗಳು ಸೇರಿದಂತೆ ಮೈಲಾಪುರ ಮಾರ್ಗವಾಗಿ ತೆರಳುವವರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ವಿವಿಧ ಕಡೆಗೂ ಕುಡಿಯುವ ನೀರು ಉಪಾಹಾರ ವ್ಯವಸ್ಥೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.