ಶಹಾಪುರ: ತಾಲ್ಲೂಕಿನ ಕಕ್ಕಸಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲ್ದಾಳ ಗ್ರಾಮದಲ್ಲಿ ಇಬ್ಬರು ಅಭ್ಯರ್ಥಿಗಳು ಸಮಮತ ಪಡೆದು ಚೀಟಿ ಎತ್ತುವುದಕ್ಕೆ ನಿರ್ಣ ಯಿಸಿದ್ದರು. ಆದರೆ, ಚೀಟಿ ಮೊದಲು ಯಾರು ಎತ್ತಬೇಕು ಎನ್ನುವುದಕ್ಕೂ ಟಾಸ್ ಮಾಡುವ ಅನಿವಾರ್ಯತೆ ಎದುರಾದ ಘಟನೆ ಬುಧವಾರ ಮತ ಎಣಿಕೆಯಲ್ಲಿ ನಡೆಯಿತು.
ಆಲ್ದಾಳ ಗ್ರಾಮದ ವಾರ್ಡ್ ಸಂಖ್ಯೆ 2ರಲ್ಲಿ ನಾಗಪ್ಪ 489 ಮತ ಹಾಗೂ ರಂಗಪ್ಪ 489 ಮತಗಳನ್ನು ಪಡೆದು ಸಮಬಲ ಸಾಧಿಸಿದರು. ಅಭ್ಯರ್ಥಿ ಆಯ್ಕೆಯ ಕಗ್ಗಂಟು ಮುಂದುವರೆದಾಗ ಚೀಟಿ ಎತ್ತುವುದಕ್ಕೆ ಇಬ್ಬರು ಸದಸ್ಯರು ಸಹಮತ ವ್ಯಕ್ತಪಡಿಸಿದರು. ಆಗ ಮತ್ತೊಂದು ತೊಡುಕು ಎದುರಾಯಿತು. ಮೊದಲು ಚೀಟಿ ಯಾರು ಎತ್ತಬೇಕು ಎಂಬ ಪ್ರಶ್ನೆ ಉದ್ಭವಿಸಿತು. ಆಗ ಟಾಸ್ ಮಾಡಲು ಮುಂದಾದರು. ರಂಗಪ್ಪ ಟಾಸ್ ಪಡೆಯುವಲ್ಲಿ ಯಶಸ್ವಿಯಾದರು. ಆದರೆ, ಚೀಟಿ ಎತ್ತಿದಾಗ ಅವರ ಅದೃಷ್ಟ ಕೈಕೊಟ್ಟಿತು. ನಾಗಪ್ಪ ಗೆಲುವಿನ ನಗೆ ಬೀರಿದರು. ಚುನಾವಣೆ ಅಧಿಕಾರಿ ನಾಗಪ್ಪ ಗೆಲುವು ಸಾಧಸಿದ್ದಾರೆ ಎಂದು ಫಲಿತಾಂಶ ಪ್ರಕಟಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.