ಯಾದಗಿರಿ: ನಗರದಲ್ಲಿನ ಜಿಲ್ಲಾ ಕ್ರೀಡಾಂಗಣಕ್ಕೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದಿ.ವಿಶ್ವನಾಥರೆಡ್ಡಿ ಮುದ್ನಾಳ ಹೆಸರು ನಾಮಕರಣ ಮಾಡಬೇಕು ಎಂದು ಆಗ್ರಹಿಸಿ ವಿಶ್ವನಾಥರೆಡ್ಡಿ ಮುದ್ನಾಳ ಅಭಿಮಾನಿ ಬಳಗದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸಾಹಿತಿ ಅಯ್ಯಣ್ಣ ಹುಂಡೇಕಾರ ಮಾತನಾಡಿ, ‘ವಿಶ್ವನಾಥರೆಡ್ಡಿ ಮುದ್ನಾಳ ಅವರು ತತ್ವನಿಷ್ಠ ಧುರೀಣರಾಗಿದ್ದರು. ಕಲ್ಯಾಣ ಕರ್ನಾಟಕ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಹೀಗಾಗಿ ಕ್ರೀಡಾಂಗಣಕ್ಕೆ ಅವರ ಹೆಸರು ನಾಮಕರಣ ಮಾಡಬೇಕು’ ಎಂದು ಒತ್ತಾಯಿಸಿದರು.
‘ಹಿಂದೆ ಬೀದರ್ನಲ್ಲಿ ಸಿಖ್ ಸಮುದಾಯದ ಮೇಲೆದಂಗೆಯಾಗಿ ಇಡೀ ಬೀದರ್ ಉದ್ವಿಗ್ನಗೊಂಡಿದ್ದ ವೇಳೆ ಸರ್ಕಾರ ರಚಿಸಿದ ಶಾಂತಿ ಸಮಿತಿ ಸಂಚಾಲಕರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದರು. ಕೂಡಲ ಸಂಗಮ ಅಭಿವೃದ್ಧಿ ಪರಿಕಲ್ಪನೆಯನ್ನು ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಲ್ಲದೆ, ಅಸ್ಪೃಶ್ಯತಾ ನಿವಾರಣೆ ಮತ್ತು ವರದಕ್ಷಿಣೆ ವಿರೋಧಿ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಅವರ ಹೆಸರು ಮುಂದಿನ ಪೀಳಿಗೆಗೆ ಉಳಿಯಬೇಕು’ ಆದ್ದರಿಂದ ಕ್ರೀಡಾಂಗಣಕ್ಕೆ ಅವರ ಹೆಸರಿಡುವುದು ಸೂಕ್ತವಾಗಿದೆ’ ಎಂದರು.
ಮುಖಂಡರಾದ ಮೋಹನ್ಬಾಬು, ಆರ್.ವಿಶ್ವನಾಥರೆಡ್ಡಿಅಬ್ಬೆತುಮಕೂರ, ಮಹೇಶ, ರುದ್ರಗೌಡ, ಗೋಪಾಲ ದಾಸನಕೇರಿ, ಶರಣಗೌಡ ಕಾಳೆಬೆಳಗುಂದಿ, ರಾಜು ಹೆಂದೆ, ಸುಗೂರೇಶ ಪಾಟೀಲ, ವೆಂಕಟರೆಡ್ಡಿ ಅಬ್ಬೆತುಮಕೂರು, ನಗರಸಭೆ ಸದಸ್ಯ ಹಣಮಂತ ಇಟಗಿ, ಅಂಬಯ್ಯ ಶಾಬಾದಿ, ವಿಲಾಸ ಪಾಟೀಲ, ಸ್ವಾಮಿದೇವ ದಾಸನಕೇರಿ, ಶಿವರಾಜ ದಾಸನಕೇರಿ, ಮಾರುತಿ ಕಲಾಲ, ಕಿಟ್ಟು ನಾಯಕ, ಸಾಬು ಚಂಡರಕಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.