ADVERTISEMENT

ಕೋವಿಡ್‌ ‘ಹತ್ತಿರ’; ಜನಪ್ರತಿನಿಧಿಗಳು ‘ದೂರ‘!

ಬಿ.ಜಿ.ಪ್ರವೀಣಕುಮಾರ
Published 28 ಮೇ 2020, 19:45 IST
Last Updated 28 ಮೇ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಯಾದಗಿರಿ: ಜಿಲ್ಲೆಯಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವುದುಒಂದೆಡೆಯಾದರೆ, ಜನಪ್ರತಿನಿಧಿಗಳು ತಮ್ಮ ಅಳಲು ಕೇಳುತ್ತಿಲ್ಲ ಎಂಬ ಆಕ್ರೋಶದ ಮಾತು ವಲಸಿಗರಿಂದ ಕೇಳಿಬರುತ್ತಿವೆ.

15 ದಿನಗಳಿಂದ ಅತಿಹೆಚ್ಚು ಕೋವಿಡ್‌–19 ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗುತ್ತಿವೆ. ವೈರಾಣು ಪರೀಕ್ಷೆಗಾಗಿ ನೆರೆ ಜಿಲ್ಲೆ, ದೂರದ ಬೆಂಗಳೂರು ಆಶ್ರಯಿಸಬೇಕಾಗಿದೆ. ಹೀಗಾಗಿ ಜಿಲ್ಲೆಯಲ್ಲಿಯೇ ಪ್ರಯೋಗಾಲಯ ಸ್ಥಾಪನೆಯಾದರೆ, ಸಮಯ ಸದ್ಬಳಕೆ ಮತ್ತು ಮತ್ತಷ್ಟು ಪ್ರಕರಣಗಳನ್ನು ಶೀಘ್ರ ಪತ್ತೆ ಹಚ್ಚಲು ಸಾಧ್ಯ. ಲ್ಯಾಬ್ ಸ್ಥಾಪನೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದರೂ ಇನ್ನೂ ಉಪಕರಣಗಳು ಬಂದಿಲ್ಲ. ಇದರಿಂದ ಲ್ಯಾಬ್ ಸ್ಥಾಪನೆ ವಿಳಂಬವಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಅವರು ಕಳೆದ ತಿಂಗಳು ಜಿಲ್ಲೆಗೆ ಬಂದಿದ್ದರು. ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ ಅವರು ಒಮ್ಮೆಯೂ ಬಂದಿಲ್ಲ. ಜಿಲ್ಲೆಯ ಇಬ್ಬರು ಸಂಸದರಾದ ಡಾ.ಉಮೇಶ ಜಾಧವ, ರಾಜಾ ಅಮರೇಶ್ವರ ನಾಯಕ ಅವರು, ಆಗೊಮ್ಮೆ ಈಗೊಮ್ಮೆ ಬಂದು ಹೋಗಿದ್ದಾರೆ.

ADVERTISEMENT

‘ಜಿಲ್ಲೆಯ ವಿವಿಧ ತಾಂಡಾಗಳ ನಿವಾಸಿಗಳು ವಿವಿಧ ರಾಜ್ಯಗಳಿಗೆ ದುಡಿಯಲು ವಲಸೆ ಹೋಗಿದ್ದರು. ಲಾಕ್ ಡೌನ್ ಸಡಿಲಿಕೆಯಾಗಿದ್ದರಿಂದ ವಾಪಸ್ ಬಂದಿದ್ದಾರೆ. ಅವರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಆದರೆ, ಅಲ್ಲಿ ಸೌಲಭ್ಯಗಳಿಲ್ಲ. ಅಧಿಕಾರಿಗಳು ಸೀಮಿತ ಅಧಿಕಾರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಬಂಧಿಸಿದ ಖಾತೆಗಳ ಸಚಿವರು ಬಂದು, ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಪ್ರಯೋಗಾಲಯ ತುರ್ತಾಗಿ ಆರಂಭಗೊಳ್ಳುವಂತಾಗಬೇಕು’ಎನ್ನುವುದು ರೈತ ಮುಖಂಡ ಚನ್ನಾರೆಡ್ಡಿಗೌಡ ಗುರುಸುಣಗಿ ಅವರ ಆಗ್ರಹ.

‘ಕ್ವಾರಂಟೈನ್‌ ಕೇಂದ್ರಗಳಲ್ಲಿ ವಲಸೆ ಕಾರ್ಮಿಕರ ಕ್ವಾರಂಟೈನ್‌ನ14 ದಿನಗಳಅವಧಿ ಮುಗಿದರೂ ಅವರ ಕೋವಿಡ್‌ ಪರೀಕ್ಷೆಯ ವರದಿ ಬರುವ ತನಕ ಕಾಯಬೇಕು. ಇಲ್ಲದಿದ್ದರೆ ನಾವು ಇಷ್ಟು ಕಷ್ಟಪಡುತ್ತಿರುವುದೆಲ್ಲವೂವರ್ಥ್ಯವಾಗುತ್ತದೆ. ಸಾಂಸ್ಥಿಕ ಕ್ವಾರಂಟೈನ್‌ಗೆ ಮೊದಲು ಬಂದವರ ಪರೀಕ್ಷೆಯನ್ನು ಆದ್ಯತೆ ಮೇರೆಗೆ ಮಾಡಲಾಗುತ್ತಿದೆ. ಎಲ್ಲ ಸೌಲಭ್ಯಗಳನ್ನು ಒದಗಿಸಲು ನಮ್ಮ ಸಿಬ್ಬಂದಿ ಶ್ರಮಿಸುತ್ತಿದ್ದಾರೆ’ ಎನ್ನುತ್ತಾರೆ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಅವರು.

ಜಿಲ್ಲೆಗೆ ಸಚಿವರು ಭೇಟಿ ನೀಡಬೇಕು. ಕ್ವಾರಂಟೈನ್‌ ಸಮಸ್ಯೆ ಪರಿಹರಿಸಬೇಕು. ವಲಸಿಗರು ಹೆಚ್ಚಿರುವ ಜಿಲ್ಲೆಗೆ ಶೀಘ್ರವಾಗಿ ಲ್ಯಾಬ್‌ ಕಾರ್ಯಾರಂಭ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ನಾಗೇಶ ಗದ್ದಿಗೆ ಹೇಳುತ್ತಾರೆ.

ಆರೋಗ್ಯ ಇಲಾಖೆ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು ದೂರವಾಣಿ ಮತ್ತು ವಿಡಿಯೊ ಕಾನ್ಫೆರೆನ್ಸ್‌ ಮೂಲಕ ಜಿಲ್ಲೆಯ ವರದಿ ಪಡೆಯುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಜಿಲ್ಲೆಗೆ 4 ಸಲ ಬಂದಿದ್ದಾರೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.