ಯಾದಗಿರಿ: ‘ಕೇಬಲ್ ಹಾಗೂ ಸ್ಯಾಟ್ಲೈಟ್ ಮೂಲಕ ಪ್ರಸಾರ ಹೊಂದಿರುವ ಟೆಲಿವಿಷನ್ ನ್ಯೂಸ್ ಮತ್ತು ಮನರಂಜನೆ ಟಿ.ವಿ ಚಾನೆಲ್ಗಳಲ್ಲಿ ಜಾತಿ-ಧರ್ಮ ಹಾಗೂ ಸಾಮಾಜಿಕ ಸಾಮರಸ್ಯೆಗೆ ಧಕ್ಕೆಯಾಗುವ ಮತ್ತು ಆಕ್ಷೇಪಾರ್ಹ ದೃಶ್ಯಗಳು ಪ್ರಸಾರವಾದಲ್ಲಿ ಸಾರ್ವಜನಿಕರು ದೂರು ಸಲ್ಲಿಸಬಹುದು’ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಟೆಲಿವಿಷನ್ ನೆಟ್ವರ್ಕ್ (ರೆಗ್ಯುಲೇಷನ್) ನಿಯಮಗಳ ಜಾರಿಯ ಮೇಲ್ವಿಚಾರಣೆಗೆ ರಚಿಸಲಾಗಿರುವ ಜಿಲ್ಲಾಮಟ್ಟದ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿಗಳು ಇನ್ನು ಮುಂದೆ ಜಿಲ್ಲಾಮಟ್ಟದಲ್ಲಿ ದೂರು ದಾಖಲಿಸಲು ಅನುವಾಗುವಂತೆ ದೂರು ಕೋಶಗಳಾಗಿಯೂ ಕಾರ್ಯನಿರ್ವಹಿಸಬೇಕು ಎಂದು ಸರ್ಕಾರದಿಂದ ಆದೇಶ ಬಂದಿದೆ. ಆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಗ್ರಾಹಕರಿಂದ ದೂರು ಪಡೆಯಲು ಜಿಲ್ಲಾಧಿಕಾರಿ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಸಹಾಯಕ ಆಯುಕ್ತರ ಕಚೇರಿ, ತಹಶೀಲ್ದಾರ್ ಕಚೇರಿಗಳಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತಕ್ಷಣವೇ ದೂರು ಪೆಟ್ಟಿಗೆ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.
‘ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿಯ ಇ-ಮೇಲ್ ವಿಳಾಸ:dcydg123@gmail.com ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ varthabhavanyadgiri@gmail.com ಇ-ಮೇಲ್ಗೆ ದೂರು ಸಲ್ಲಿಸಬಹುದು’ ಎಂದರು.
‘ಕೇಬಲ್ ಟೆಲಿವಿಷನ್ ನೆಟ್ವರ್ಕ್ (ರೆಗ್ಯುಲೇಷನ್) ಅಧಿನಿಯಮಕ್ಕೆ ಒಳಪಡುವ ಕಾರ್ಯಕ್ರಮ ಸಂಕೇತ ಹಾಗೂ ಜಾಹೀರಾತು ಸಂಕೇತದ ಉಲ್ಲಂಘನಾ ಪ್ರಕರಣಗಳು, ಆಕ್ಷೇಪಾರ್ಹ ಅಂಶಗಳು, ಕೇಬಲ್ ಟಿ.ವಿ.ನಲ್ಲಿ ಪ್ರಸಾರವಾಗುವ ಕಾರ್ಯಕ್ರಮ ವೀಕ್ಷಿಸಲು ಮತ್ತು ಕೇಳಲು ಸಂಕೇತಾಕ್ಷರಗಳು ಗುಣಮಟ್ಟದಿಂದ ಕೂಡಿರದಿದ್ದಲ್ಲಿ ದೂರು ನೀಡಬಹುದು. ಅಲ್ಲದೆ, ಜಿಲ್ಲೆಯ ಕೇಬಲ್ ಆಪರೇಟರ್ಗಳು ಟ್ರಾಯ್ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಶುಲ್ಕ ವಿಧಿಸಿದಲ್ಲಿ ದೂರು ದಾಖಲಿಸಬಹುದು’ ಎಂದು ತಿಳಿಸಿದರು.
‘ಪ್ರತಿ 2 ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆ ನಡೆಸಿ ಆ ಅವಧಿಯಲ್ಲಿ ಸ್ವೀಕರಿಸಿದ ದೂರುಗಳನ್ನು ಸಮಿತಿ ಪರಾಮರ್ಶಿಸಿ ಸೂಕ್ತ ಕ್ರಮ ಕೈಗೊಳ್ಳುವುದು ಹಾಗೂ ಹಿಂದಿನ ಸಭೆಗಳಲ್ಲಿ ತೆಗೆದುಕೊಂಡ ನಿರ್ಧಾರದಂತೆ ಕ್ರಮವಹಿಸಿ ಅನುಪಾಲನಾ ವರದಿಯನ್ನು ಸಂಬಂಧಪಟ್ಟ ಇಲಾಖೆಗಳು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಿಗೆ ಸಲ್ಲಿಸಬೇಕು’ ಎಂದು ಸೂಚಿಸಿದರು.
ಎಸ್ಪಿ ಋಷಿಕೇಶ್ ಭಗವಾನ್ ಸೋನವಣೆ ಮಾತನಾಡಿ, ‘ಕೆಲ ಕೇಬಲ್ ಆಪರೇಟರ್ಗಳು ಮಧ್ಯರಾತ್ರಿ ಅಶ್ಲೀಲ ವೀಡಿಯೊಗಳನ್ನು ಪ್ರಸಾರ ಮಾಡುತ್ತಿರುತ್ತಾರೆ. ಇದರ ಬಗ್ಗೆ ಕೂಡ ಕ್ರಮ ಕೈಗೊಳ್ಳಬೇಕಿದೆ’ ಎಂದು ಸಭೆಯ ಗಮನಕ್ಕೆ ತಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ, ಸಮಿತಿ ಸದಸ್ಯ ಕಾರ್ಯದರ್ಶಿ ಸಿದ್ದೇಶ್ವರಪ್ಪ ಜಿ.ಬಿ. ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳನ್ನು ಮಂಡಿಸಿದರು.
ಸಮಿತಿ ಸದಸ್ಯರಾದ ಚನ್ನಬಸಪ್ಪ ಕುಳಗೇರಿ, ಡಾನ್ ಬಾಸ್ಕೊ ಫಾದರ್ ಜಿ., ಚಂದ್ರಕಾಂತ ಜೆ.ಹಿಳ್ಳಿ, ಶರಣಗೌಡ, ಸುನಿತಾ ಚವ್ಹಾಣ್ ಇದ್ದರು.
***
ಕೇಬಲ್ ಆಪರೇಟರ್ಗಳು ಸುದ್ದಿ ವಾಹಿನಿ ರೀತಿಯಲ್ಲಿಕೇಬಲ್ ಹೆಸರಿನ ಲೋಗೋ ಸೃಜಿಸಿ ಸಾರ್ವಜನಿಕ ವರದಿ ಮಾಡುವುದು, ಡಿಬೇಟ್ ಆಯೋಜಿಸಲು ಕಾಯ್ದೆಯಲ್ಲಿ ಅವಕಾಶವಿಲ್ಲ.
-ಎಂ.ಕೂರ್ಮಾರಾವ್, ಜಿಲ್ಲಾಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.