ಯಾದಗಿರಿ: ಕನ್ನಡ ಪದ ಸಂಪತ್ತು ಜ್ಞಾನದ ಠೇವಣಿಯಾಗಬೇಕು. ಇದರಿಂದ ಬೌದ್ಧಿಕ ವಿಸ್ತಾರವಾಗಲಿದೆ ಎಂದು ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮಹಿಪಾಲರೆಡ್ಡಿ ಸೇಡಂ ಹೇಳಿದರು.
ತಾಲ್ಲೂಕಿನ ಬಳಿಚಕ್ರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವರಕವಿ ಬೇಂದ್ರೆ ಸಾಹಿತ್ಯ ಸಂಘದಿಂದ ಈಚೆಗೆ ಆಯೋಜಿಸಿದ್ದ ‘ಓದುವ ಮೂಲೆ ಸಾಹಿತ್ಯ ಪ್ರಭಾ’ ಉದ್ಘಾಟನೆ ಮತ್ತು ನುಡಿ ನಿತ್ಯೋತ್ಸವ-1 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕನ್ನಡ ಭಾಷೆ ಎರಡು ಸಾವಿರ ವರ್ಷಗಳ ಹಳೆಯದು. ಸಂಸ್ಕೃತ, ತಮಿಳು ನಂತರ ಮೂರನೇ ಸ್ಥಾನದಲ್ಲಿರುವ ಭಾರತೀಯ ಭಾಷೆ ಎಂಬುದು ನಮ್ಮ ಹೆಮ್ಮೆ ಎಂದು ತಿಳಿಸಿದರು.
ಥಟ್ ಅಂತ ಹೇಳಿ ಕಾರ್ಯಕ್ರಮದ ರೀತಿ ಪ್ರಶ್ನೆಗಳನ್ನು ಕೇಳಿ, ಅಲ್ಲಿಯೇ ಬಹುಮಾನ ನೀಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ, ರೀಡಿಂಗ್ ಕಾರ್ನರ್ ಪರಿಕಲ್ಪನೆಯನ್ನು ಬಳಿಚಕ್ರ ಸರ್ಕಾರಿ ಪ್ರೌಢಶಾಲೆಯ ಈ ಮಾದರಿ ಎಲ್ಲ ಶಾಲೆಗಳಿಗೂ ಉದಾಹರಣೆಯಾಗಲಿ ಎಂದರು.
‘ರೀಡಿಂಗ್ ಕಾರ್ನರ್’: ಕೋಣೆಯೊಂದರಲ್ಲಿ ಪುಸ್ತಕಗಳು, ಸ್ಪರ್ಧಾತ್ಮಕ ಪತ್ರಿಕೆಗಳನ್ನು ಜೋಡಿಸಿಟ್ಟು, ಮೂಲೆಯೊಂದರಲ್ಲಿ ಅದರ ಮಾಹಿತಿಯೊಂದಿಗೆ ಪುಸ್ತಕವನ್ನು ಓದುವ ಹವ್ಯಾಸ ಬೆಳೆಸುವುದಕ್ಕಾಗಿ `ಓದುವ ಮೂಲೆ’(ರೀಡಿಂಗ್ ಕಾರ್ನರ್) ರೂಪಿಸಲಾಗಿದೆ. ಹೊಸ ಪರಿಕಲ್ಪನೆಯನ್ನು ಅಲ್ಲಿಯ ಮುಖ್ಯಶಿಕ್ಷಕ ಅನ್ನಪೂರ್ಣ ಭಂಡಾರಕರ್ ಮಾಡಿದ್ದಾರೆ.
ಶಾಲೆಯ ಮುಖ್ಯಶಿಕ್ಷಕ ಅನ್ನಪೂರ್ಣ ಭಂಡಾರಕರ್ ಅಧ್ಯಕ್ಷತೆ ವಹಿಸಿದ್ದರು. ಸಮೂಹ ಸಂಪನ್ಮೂಲ ವ್ಯಕ್ತಿ ಶಿವರಾಜ ಪಾಟೀಲ, ರಾಮಸಮುದ್ರ ಕನ್ನಡ ಭಾಷಾ ಶಿಕ್ಷಕ ನಿಂಗಣ್ಣ ವಡಿಗೇರಿ, ಲೇಖಕ ರುದ್ರಸ್ವಾಮಿ ಚಿಕ್ಕಮಠ ಇದ್ದರು.
ಇದಕ್ಕೂ ಮುನ್ನ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕಿ ಲತಾ ಮತ್ತು ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಡಿದರು. ಶಿಕ್ಷಕ ವಿನೋದಕುಮಾರ ಪಾಂಚಾಳ ಸ್ವಾಗತಿಸಿದರು. ಶಿಕ್ಷಕಿ ರಂಗಮ್ಮ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಶಿಕ್ಷಕ ಬನ್ನಪ್ಪ ಮ್ಯಾಗಿನ್ ನಿರೂಪಿಸಿದರೆ, ಶಂಕರ ಪವಾರ ವಂದಿಸಿದರು.
ಬೇಂದ್ರೆ ಸಾಹಿತ್ಯ ಸಂಘದ ರವಿಚಂದ್ರ ಮತ್ತು ಮಹೇಶಮ್ಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.