ಸೈದಾಪುರ: ‘ದೂರದ ಊರುಗಳಿಗೆ ಗುಳೆ ಹೋಗುವುದನ್ನು ಬಿಟ್ಟು ನರೇಗಾ ಯೋಜನೆ ಅಡಿ ನಿಮ್ಮ ಊರಿನಲ್ಲಿಯೇ ಕೆಲಸ ಮಾಡಬೇಕು’ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಚಂದ್ರಶೇಖರ ಪವಾರ್ ಅಭಿಪ್ರಾಯಪಟ್ಟರು.
ಸಮೀಪದ ಕಾಳೆಬೆಳಗುಂದಿ ಗ್ರಾಮ ಪಂಚಾಯಿತಿಯ ಚಿಂತಗುಂಟ ಕೆರೆ ಹೂಳೆತ್ತುವ ಸ್ಥಳಕ್ಕೆ ತೆರಳಿ ಕಾರ್ಮಿಕರನ್ನು ಭೇಟಿ ಮಾಡಿ ಮಾತನಾಡಿದರು.
‘ಕೆಲಸ ಅರಿಸಿ ನಗರ ಪ್ರದೇಶಗಳಿಗೆ ಹೋಗಿ ಅನಾಥರಂತೆ ಬದುಕುವುದನ್ನು ನಿಲ್ಲಿಸಬೇಕು. ಸರ್ಕಾರ ನಿಮ್ಮ ಗ್ರಾಮದಲ್ಲಿಯೇ ನಿಮಗಾಗಿ ಉದ್ಯೋಗ ಸೃಷ್ಟಿ ಮಾಡಲಿದೆ. ಉತ್ತಮ ಕೂಲಿಯನ್ನೂ ನೀಡುತ್ತಿದೆ. 35 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದರೆ ಇನ್ನಷ್ಟು ಜನರು ಕೆಲಸಕ್ಕಾಗಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಕೂಲಿ ಕೆಲಸ ಪಡೆಯಬಹುದಾಗಿದೆ’ ಎಂದರು.
‘ಗಂಡು-ಹೆಣ್ಣಿಗೆ ಸಮಾನ ಕೂಲಿ ನೀಡಲಾಗುತ್ತಿದೆ. ಸಾಮಗ್ರಿ ವೆಚ್ಚ ನೀಡಲಾಗುತ್ತಿದೆ. ಗ್ರಾಮದ ಜನರು ಅದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಹೇಳಿದರು.
15ನೇ ನರೇಗಾ ದಿನದ ಪ್ರಯುಕ್ತ ಕೂಲಿ ಕಾರ್ಮಿಕರು ಕೇಕ್ ಕಟ್ ಮಾಡಿ ಸಂಭ್ರಮಿಸಿದರು.
ಡಿಇಒ ಅಶೋಕ, ಐಇಸಿ ಮಲ್ಲಿಕಾರ್ಜುನ, ಕಾಳೆಬೆಳಗುಂದಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೇತನ ಹೊಸಮನಿ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.