
ವಡಗೇರಾ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಈರುಳ್ಳಿ ಬೆಳೆದ ರೈತರು ಬೆಲೆ ಪಾತಾಳಕ್ಕೆ ಇಳಿದ ಕಾರಣ ಕಣ್ಣಿರಿನಲ್ಲಿ ಕೈ ತೊಳೆಯುತ್ತಿದ್ದಾರೆ.
ಕಳೆದ 2-3 ತಿಂಗಳ ಹಿಂದೆ ಈರುಳ್ಳಿ ಬೆಲೆ ಕೆ.ಜಿಗೆ ₹80 ರಿಂದ ₹100 ಇತ್ತು ಆಗ ಗ್ರಾಹಕರ ಕಣ್ಣಿನಲ್ಲಿ ನೀರು ಬರುತಿತ್ತು. ಒಂದು ಕೆ.ಜಿ ಬದಲು ಕಾಲು ಕೆ.ಜಿ ಖರೀದಿಸುತಿದ್ದರು. ಈಗ ಬೆಲೆ ಕಡಿಮೆ ಇರುವದರಿಂದ ಕೆ.ಜಿಗಟ್ಟಲೆ ಖರೀದಿಸುತಿದ್ದಾರೆ.
ಈರುಳ್ಳಿ ಬೆಲೆ ಕಡಿಮೆಯಾಗಿದ್ದರಿಂದ ವ್ಯಾಪಾರಸ್ಥರು ₹100ಗೆ 5 ಕೆ.ಜಿಯಂತೆ ಟಂಟಂನಲ್ಲಿ ಚೀಲಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ.
ತಾಲ್ಲೂಕಿನ ವ್ಯಾಪ್ತಿಯಲ್ಲಿ ಸುಮಾರು 50 ಹೆಕ್ಟೇರ್ ಪ್ರದೇಶದಲ್ಲಿ ಉಳ್ಳಾಗಡ್ಡಿ ಬೆಳೆಯಲಾಗಿದೆ. ಇಳುವರಿ ಹೆಚ್ಚಾದ ಕಾರಣ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ ಎನ್ನಲಾಗಿದೆ.
‘ಪಕ್ಕದ ರಾಜ್ಯ ಮಹಾರಾಷ್ಟ್ರದ ಸೊಲ್ಲಾಪುರ ಭಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಅಲ್ಲಿ ಬೆಲೆ ಕಡಿಮೆ ಬೆಲೆಗೆ ಸಿಗುವ ಈರುಳ್ಳಿಯನ್ನು ಲಾಟ್ನಂತೆ ಖರೀದಿಸಿ ಇಲ್ಲಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತಿದ್ದೇವೆ’ ಎನ್ನುತ್ತಾರೆ ವ್ಯಾಪಾರಸ್ಥರು.
ವಡಗೇರಾ ವ್ಯಾಪ್ತಿಯಲ್ಲಿ ಸುಮಾರು 50 ಹೇಕ್ಟರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ . ಇಳುವರಿ ಹೆಚ್ಚಿಗೆ ಆಗಿರುವದರಿಂದ ಬೆಲೆ ಕಡಿಮೆಯಾಗಿದೆ
- ಶ್ರೀಮಂತ ಸಹಾಯಕ ತೋಟಗಾರಿಕೆ ಅಧಿಕಾರಿ
ಈರುಳ್ಳಿ ಬೆಲೆ ಕಡಿಮೆಯಾದ ಕಾರಣ ರೈತರು ಆರ್ಥಿಕ ನಷ್ಟ ಅನುಭವಿಸುತಿದ್ದಾರೆ. ಸರ್ಕಾರ ಕೂಡಲೇ ಬೆಂಬಲ ಬೆಲೆ ನಿಗಿದ ಮಾಡಿ ಖರೀದಿಸಬೇಕು
-ಶಿವಕುಮಾರ ಕೊಂಕಲ್ ಪ್ರಗತಿಪರ ರೈತ
ಈರುಳ್ಳಿ ಬೆಲೆ ಕಡಿಮೆ ಇರುವ ಕಾರಣ ಖರೀದಿಸಲು ಅನುಕೂಲವಾಗಿದೆ. ಈ ಹಿಂದೆ ಬೆಲೆ ಹೆಚ್ಚಿಗೆ ಯೋಚನೆ ಮಾಡಿ ಖರೀದಿಸಬೇಕಾಗಿತ್ತು
- ಅನುಸೂಯಾ ಗೃಹಿಣಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.