ADVERTISEMENT

ಶಹಾಪುರ; ₹2.60 ಕೋಟಿ ವೆಚ್ಚದ ಸುಸಜ್ಜಿತ ಕ್ರೀಡಾಂಗಣ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 4:19 IST
Last Updated 25 ಜನವರಿ 2022, 4:19 IST
ಶಹಾಪುರ ನಗರದ ಪ್ರಥಮ ದರ್ಜೆ ಕಾಲೇಜು ಅವರಣದಲ್ಲಿ ₹2.60 ಕೋಟಿ ವೆಚ್ಚದ ಒಳಾಂಗಣ ಕ್ರೀಡಾಂಗಣವನ್ನು ಸೋಮವಾರ ಶಾಸಕ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಿದರು
ಶಹಾಪುರ ನಗರದ ಪ್ರಥಮ ದರ್ಜೆ ಕಾಲೇಜು ಅವರಣದಲ್ಲಿ ₹2.60 ಕೋಟಿ ವೆಚ್ಚದ ಒಳಾಂಗಣ ಕ್ರೀಡಾಂಗಣವನ್ನು ಸೋಮವಾರ ಶಾಸಕ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಿದರು   

ಶಹಾಪುರ: ವಿದ್ಯಾರ್ಥಿಗಳು ಹಾಗೂ ಯುವಕರ ಅನುಕೂಲಕ್ಕಾಗಿ ₹2.60 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಹೇಳಿದರು.

ನಗರದ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ 2019-20ನೇ ಸಾಲಿನ ಕೆಕೆಆರ್‌ಡಿಬಿ ಯೋಜನೆಯಡಿ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಿಸಿದ ನೂತನ ಒಳಾಂಗಣ ಕ್ರೀಡಾಂಗಣ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಅಧ್ಯಯನಕ್ಕೆ ಅಗತ್ಯವಾದ ಸೌಲಭ್ಯ ಒದಗಿಸಲಾಗುತ್ತಿದೆ. ಕ್ರೀಡಾ ಕ್ಷೇತ್ರದಲ್ಲಿ ಅವರು ಹೆಚ್ಚಿನ ಪ್ರಗತಿ ಸಾಧಿಸಲಿ ಎಂಬ ಉದ್ದೇಶದಿಂದ ಕ್ರೀಡಾಂಗಣದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ADVERTISEMENT

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಶೈಕ್ಷಣಿಕ ಅಭಿವೃದ್ಧಿಗೆ ಮೀಸಲಿರುವ 88 ಎಕರೆ ಜಮೀನು ಅನ್ನು ಸದ್ಬಳಕ್ಕೆ ಮಾಡಿಕೊಳ್ಳಲಾಗುತ್ತಿದೆ. ಅದರ ಉದ್ದೇಶ ಈಡೇರಿಕೆಗಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಡಿ ₹ 14 ಕೋಟಿ ವೆಚ್ಚದಲ್ಲಿ ವಸತಿ ಸಹಿತ ಪ್ರಥಮ ದರ್ಜೆ ಕಾಲೇಜು ನಿರ್ಮಾಣದ ಕಾರ್ಯ ಸಾಗಿದೆ. ₹ 2 ಕೋಟಿ ವೆಚ್ಚದಲ್ಲಿ ಹೊರಾಂಗಣ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ಅದಕ್ಕೆ ಹೆಚ್ಚುವರಿಯಾಗಿ ₹ 2ಕೋಟಿ ಅನುದಾನ ನೀಡಲಾಗುವುದು. ₹75 ಲಕ್ಷದಲ್ಲಿ ವಾಯು ವಿಹಾರಕ್ಕೆ ಪಾದಚಾರಿ ಮಾರ್ಗ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.

ಹೆಚ್ಚುವರಿ ಕೋಣೆಗಳ ನಿರ್ಮಾಣ, ಕಾಲೇಜು ಮುಂಭಾಗ ಬಸ್ ನಿಲ್ದಾಣ, ಕ್ಯಾಂಟಿನ್ ಹಾಗೂ ₹ 80 ಲಕ್ಷ ವೆಚ್ಚದಲ್ಲಿ ಹೈಟೆಕ್ ಕಂಪ್ಯೂಟರ್ ಲ್ಯಾಬ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಶಾಲಾ ಕಾಲೇಜುಗಳಿಗೆ ಯಾವುದೇ ಕೊರತೆ ಇರಬಾರದು. ಇದಕ್ಕೆ ವಿದ್ಯಾರ್ಥಿಗಳ ಹಾಗೂ ಪಾಲಕರ ಸಹಕಾರ ಅಗತ್ಯವಾಗಿದೆ ಎಂದರು.

ಕ್ರೀಡಾಂಗಣ ಸ್ವಚ್ಛವಾಗಿ ಇರಿಸಲು ನಿವೃತ್ತ ದೈಹಿಕ ಶಿಕ್ಷಕರ ಹಾಗೂ ತಾಲ್ಲೂಕು ಅಧಿಕಾರಿಗಳ ಸಮಿತಿ ನೇಮಕ ಮಾಡಿ, ಆ ಮೂಲಕ ಕ್ರೀಡಾಂಗಣಕ್ಕೆ ಭದ್ರತೆ ಒದಗಿಸಲಾಗುವುದು ಎಂದರು.

ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲಕಲ್, ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ ಸಾಹು ಆರಬೋಳ, ಮುಖಂಡರಾದ ಶರಣಪ್ಪ ಸಲದಾಪುರ, ಚಂದ್ರಶೇಖರ ಲಿಂಗದಳ್ಳಿ, ಹಣಮಂತ್ರಾಯ ದಳಪತಿ, ಪ್ರಾಚಾರ್ಯ ಚೆನ್ನಾರೆಡ್ಡಿ ತಂಗಡಗಿ, ಲೋಕೋಪಯೋಗಿ ಇಲಾಖೆ ಎಇಇ ಸಿದ್ದಲಿಂಗಪ್ಪ ಐರಡ್ಡಿ, ಎಂಜಿನಿಯರ್ ಮೈದುದ್ದೀನ್ ಸಾಬ್, ಜಿಲ್ಲಾ ಯುವಜನ ಸಬಲೀಕರಣ, ಕ್ರೀಡಾ ಇಲಾಖೆ ಅಧಿಕಾರಿ ರಾಜು, ಮುಖಂಡರಾದ ಸಣ್ಣ ನಿಂಗಪ್ಪ ನಾಯ್ಕೊಡಿ, ವಸಂತ ಸುರಪುಕರ್, ಶಂಕರಗೌಡ ಮುಡಬೂಳ, ಗೋಪಣ್ಣ ಹವಾಲ್ದಾರ, ಗೌಡಪ್ಪಗೌಡ ಅಲ್ದಾಳ, ಮಲ್ಲಪ್ಪ ಅರಳಹಳ್ಳಿ, ಖಾಲಿದ ಹುಸೇನ, ಹೊನ್ನಪ್ಪಗೌಡ, ನೀಲಕಂಠ ಬಡಿಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.