ADVERTISEMENT

ಪರಿಶಿಷ್ಟ ಜನರ ತೆರವಿಗೆ ವಿರೋಧ

ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2020, 7:38 IST
Last Updated 11 ನವೆಂಬರ್ 2020, 7:38 IST
ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರಗತಿ ಪರ ಸಂಘಟನೆಗಳ ಒಕ್ಕೂಟ ಜಿಲ್ಲಾ ಶಾಖೆಯಿಂದ ಪ್ರತಿಭಟನೆ ನಡೆಯಿತು
ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರಗತಿ ಪರ ಸಂಘಟನೆಗಳ ಒಕ್ಕೂಟ ಜಿಲ್ಲಾ ಶಾಖೆಯಿಂದ ಪ್ರತಿಭಟನೆ ನಡೆಯಿತು   

ಯಾದಗಿರಿ: ನಗರದ ಕೋಟಗಾರವಾಡ ದಲ್ಲಿ ಜಾಗ ಖರೀದಿಸಿ ಮನೆ ಕಟ್ಟಿಸಿಕೊಂಡು ಸುಮಾರು 30 ವರ್ಷಗಳಿಂದ ವಾಸ ಮಾಡುತ್ತಿರುವ ಪರಿಶಿಷ್ಟ ಸಮುದಾಯದವರನ್ನು ಒಕ್ಕೆಲೆಬ್ಬಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸಮುದಾಯದ ಜನರಿಗೆ ರಕ್ಷಣೆ ನೀಡಬೇಕು ಎಂದು ಪ್ರಗತಿ ಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಸುಭಾಷ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದ ಪದಾಧಿಕಾರಿಗಳು, ನಗರದ ಸರ್ವೆ ಸಂಖ್ಯೆ 85, 86/ಅ, ಜಮೀನಿನ ಮಾಲಿಕ ತಿಪ್ಪಣ್ಣ ರಾಮಣ್ಣ ಗೋಸಿ ಹಾಗೂ ಅವರ ಸಹೋದರ ನಾಗಪ್ಪ ರಾಮಣ್ಣ ಗೋಸಿ ಅವರಿಂದ 25ರಿಂದ 30 ವರ್ಷಗಳ ಹಿಂದೆ ಹಣಕೊಟ್ಟ ಸುಮಾರು 50 ಪರಿಶಿಷ್ಟ ಜಾತಿಯ ಕುಟುಂಬಗಳು ಜಾಗ ಖರೀದಿ ಮಾಡಿದ್ದಾರೆ. ಮನೆಕಟ್ಟಿಸಿ ವಾಸ ಮಾಡುತ್ತಾ ಬಂದಿದ್ದಾರೆ. ಆದರೆ, ಈಗ ಏಕಾಏಕಿ ಮನೆ ಖಾಲಿ ಮಾಡಲು ನಗರಸಭೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಗೋಸಿ ವಕೀಲರ ಮೂಲಕ ನೋಟಿಸ್‌ ನೀಡಿದ್ದಾರೆ ಎಂದು ಆರೋಪಿಸಿದರು.

ಅಕ್ಟೋಬರ್ 19ರಂದು ನೋಟಿಸ್‌ ನೀಡುವ ಮೂಲಕ ಸಮುದಾಯವರನ್ನು ಭಯಭೀತರನ್ನಾಗಿ ಮಾಡಿದ್ದಾರೆ. ಕೊರೊನಾ, ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿದ್ದವರನ್ನು ಮತ್ತಷ್ಟು ಕಷ್ಟಕ್ಕೆ ದೂಡುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ADVERTISEMENT

ವಾರದೊಳಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಒಕ್ಕೂಟದ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಗುರುಮಠಕಲ್ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಜಿಲ್ಲಾ ಸಂಚಾಲಕರಾದ ಮರೆಪ್ಪ ಚಟ್ಟರಕರ್‌, ಮಲ್ಲಿಕಾರ್ಜುನ ಕ್ರಾಂತಿ, ಪ್ರಭು ಬುಕ್ಕಲ್‌, ಜಿಲ್ಲಾ ಘಟಕದ ಅಧ್ಯಕ್ಷ ಕಾಶಿನಾಥ ನಾಟೇಕರ್, ತಾಲ್ಲೂಕು ಸಂಚಾಲಕ ಶಿವು ದೊಡ್ಮನಿ, ದಲಿತ ಮುಖಂಡರಾದ ಗೋಪಾಲ ಗಿರೆಪ್ನೋರ, ಚಂದಪ್ಪ ಮುನಿಯಪ್ಪನೋರ, ತಾಯಪ್ಪ ಭಂಡಾರಿ, ಮಲ್ಲಿನಾಥ ಸುಂಗಲಕರ, ಶಿವಕುಮಾರ ಗಿರೆಪ್ನೋರ, ರಾಹುಲ ಕೊಲ್ಲೂರ, ಡಿಎಸ್‌ಎಸ್‌ ಸಂಚಾಲಕ ಸೈದಪ್ಪ ಕೂಲೂರ ಸೇರಿದಂತೆ ಫಲಾನುಭವಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.