ಪೇಠ ಅಮ್ಮಾಪುರ (ಸುರಪುರ): ‘ಜಾತ್ರೆಗಳು ಸಂಬಂಧಗಳನ್ನು ಬೆಸೆಯುತ್ತವೆ. ಮನಸ್ಸಿಗೆ ಆಹ್ಲಾದತೆಯನ್ನು ನೀಡಿ ಉತ್ತಮ ಆರೋಗ್ಯಕ್ಕೆ ಕಾರಣವಾಗುತ್ತವೆ. ಅದರಲ್ಲೂ ಮಹಾಮಹಿಮರು ಭಾಗವಹಿಸುವ ಜಾತ್ರೆಗಳು ಧನಾತ್ಮಕತೆ ಯಿಂದ ಕೂಡಿರುತ್ತವೆ’ ಎಂದು ಲಕ್ಷ್ಮಿಪುರ ಶ್ರೀಗಿರಿಮಠದ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
ತಾಲ್ಲೂಕಿನ ಪೇಠ ಅಮ್ಮಾಪುರ ಗ್ರಾಮದಲ್ಲಿ ಭಾನುವಾರ ರಾಮಲಿಂಗೇಶ್ವರ ಮಠದ 21ನೇ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಲು ಉದ್ದೇಶಿಸಿರುವ ಕಾಳಿಕಾದೇವಿ ಮತ್ತು ರಾಮಲಿಂಗೇಶ್ವರ ಮೂರ್ತಿಗಳ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮೋನಯ್ಯ ತಾತಾ ಮಾತನಾಡಿ, ‘21ನೇ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಕಾಳಿಕಾದೇವಿ ಮತ್ತು ರಾಮಲಿಂಗೇಶ್ವರರ ಸಾನಿಧ್ಯದಿಂದ ಈ ಭಾಗ ಪಾವನವಾಗುತ್ತದೆ’ ಎಂದರು.
ಮಠದ ರಾಮ ಶರಣರು ಮಾತನಾಡಿ, ‘ಜಾತ್ರೆ ಮತ್ತು ಮೂರ್ತಿ ಪ್ರತಿಷ್ಠಾಪನೆ ಅದ್ಧೂರಿಯಾಗಿ ನಡೆಯಲು ಭಕ್ತರ ಸಹಕಾರವೇ ಮುಖ್ಯವಾಗಿದೆ. ಭಕ್ತರ ಅಭಿವೃದ್ಧಿಗೆ ಪ್ರಾರ್ಥಿಸಲಾಗುವುದು’ ಎಂದರು.
ವೀರಯ್ಯ ಸ್ವಾಮೀಜಿ ವಡಗೇರಾ ಮಾತನಾಡಿದರು. ಬೆಳಿಗ್ಗೆ ಮಂಗಳವಾದ್ಯಗಳೊಂದಿಗೆ ಸುಮಂಗಲಿಯರಿಂದ ಗಂಗಾಪೂಜೆ, ಗೋಪುರ ಪೂಜೆ, ನೂತನ ವಿಗ್ರಹಗಳ ಗಂಗಾಸ್ನಾನ, ಗ್ರಾಮದಲ್ಲಿ ವಿಗ್ರಹಗಳ ಮೆರವಣಿಗೆ ನಡೆಯಿತು.ಮಹಿಳೆಯರು ಕುಂಭ ಕಳಸ ಹೊತ್ತು ಗಮನ ಸೆಳೆದರು.
ಗೋಪೂಜೆ, ಸ್ವಸ್ತಿ ಪುಣ್ಯಾಹವಾಚನ, ದೇವನಾಂದಿ. ಋತ್ವಿಕರಣಿ, ವಾಸ್ತು ರಾಕ್ಷೋಪ್ಯ ಹೋಮ, ಶಿವಯೋಗ ಮಂಟಪ ಪ್ರತಿಷ್ಠಾಪನೆ, ಮಹಾ ಗಣಪತಿ ಹೋಮ, ಪ್ರಧಾನ ಕಳಸ ದೇವತೆಗಳ ಹೋಮ, ಬಲಿ ಸಂಸ್ಕಾರ, ನೂತನ ವಿಗ್ರಹಗಳಿಗೆ ಸಂಸ್ಕಾರ, ಧಾನ್ಯಾದಿವಾಸ, ಫಲಾದಿವಾಸ, ಶಯ್ಯಾದಿವಾಸ, ಮಹಾ ಮಂಗಳಾರುತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು.
ಅಮರಯ್ಯಸ್ವಾಮಿ ಜಾಲಿಬೆಂಚಿ, ಮಲ್ಲಿಕಾರ್ಜುನರೆಡ್ಡಿ ಕೋಳಿಹಾಳ, ಮಲ್ಲು ಬಡಿಗೇರ, ಮಹೇಶ ರಾವೂರ, ಯಮನಪ್ಪ ಕಟ್ಟಿಮನಿ, ಮಲ್ಲು ಛಲವಾದಿ, ಬಸವಲಿಂಗ ಬೂನಗಿರಿ, ಖಾನುಲಪ್ಪ ಮುಖನೂರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.