ADVERTISEMENT

ನೆಡು ತೋಪು ಕಾವಲುಗಾರ ಬೆಂಕಿಗಾಹುತಿ: ಪರಿಹಾರಕ್ಕಾಗಿ ಗ್ರಾಮಸ್ಥರ ಆಗ್ರಹ

ವಿಷಯ ತಿಳಿದರೂ ಸ್ಥಳಕ್ಕೆ ಬಾರದ ಅರಣ್ಯ ಇಲಾಖೆ ಅಧಿಕಾರಿಗಳು: ಶವವಿಟ್ಟು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2023, 5:29 IST
Last Updated 10 ಜನವರಿ 2023, 5:29 IST
ವಡಗೇರಾ–ಯಾದಗಿರಿ ಮುಖ್ಯ ರಸ್ತೆತಡೆದು ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಹಾರ ಘೋಷಿಸಬೇಕು ಎಂದು ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆ ಮುಖಂಡರು ಶವ ಇಟ್ಟು ಪ್ರತಿಭಟನೆ ನಡೆಸಿದರು
ವಡಗೇರಾ–ಯಾದಗಿರಿ ಮುಖ್ಯ ರಸ್ತೆತಡೆದು ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಹಾರ ಘೋಷಿಸಬೇಕು ಎಂದು ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆ ಮುಖಂಡರು ಶವ ಇಟ್ಟು ಪ್ರತಿಭಟನೆ ನಡೆಸಿದರು   

ಯಾದಗಿರಿ: ವಡಗೇರಾ ತಾಲ್ಲೂಕಿನ ಕೋನಹಳ್ಳಿ-ಬಿಳ್ಹಾರ ಮಧ್ಯದಲ್ಲಿರುವ ಅರಣ್ಯದ ನೆಡು ತೋಪಿನಲ್ಲಿ ಬೆಂಕಿ ನಂದಿಸಲು ಹೋಗಿ ಅದೇ ಬೆಂಕಿಯಲ್ಲಿ ಬಿದ್ದು, ನೆಡು ತೋಪು ಕಾವಲುಗಾರ ಮೃತಪಟ್ಟ ಘಟನೆ ಭಾನುವಾರ ಜರುಗಿದೆ.

ಮೃತ ಕಾವಲುಗಾರ ಕೋನಹಳ್ಳಿ ಗ್ರಾಮದ ಯಾಕುಬ್‌ಸಾಬ ನಬಿಸಾಬ ಮುಲ್ಲಾ (56) ಮೃತಪಟ್ಟವರು.

ಭಾನುವಾರ ತಾನು ಕೆಲಸ ಮಾಡುವ ಅರಣ್ಯ ಪ್ರದೇಶದಲ್ಲಿ ಬೆಂಕಿ ಬಿದ್ದಿದೆ ಎಂಬ ಮಾಹಿತಿ ಬಂದ ತಕ್ಷಣ ಬೆಳಿಗ್ಗೆ 11 ಗಂಟೆಗೆ ಸುಮಾರಿಗೆ ಸ್ಥಳಕ್ಕೆ ಹೋಗಿ ಬೆಂಕಿ ನಂದಿಸಲು ಮುಂದಾಗಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಆತನ ದೇಹಕ್ಕೆ ಬೆಂಕಿ ಹತ್ತಿ ಸ್ಥಳದಲ್ಲಿಯೇ ಸುಟ್ಟು ಕರಕಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಮನೆಗೆ ಬಾರದ ಕಾರಣ ಕುಟುಂಬದವರು ಅರಣ್ಯದ ನೆಡು ತೋಪಿನಲ್ಲಿ ಹುಡುಕಲು ಆರಂಭಿಸಿದಾಗ ಬೆಂಕಿಯಲ್ಲಿ ಸುಟ್ಟು ಕರಗಲಾದ ಮೃತದೇಹ ಪತ್ತೆಯಾಗಿದೆ. ಯಾಕೂಬ ಮುಲ್ಲಾ ದೇಹ ಎಂದು ಗೊತ್ತಾದ ತಕ್ಷಣ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು.

ವಿಷಯ ತಿಳಿದ ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕುಟುಂಬದವರು ಮಾಹಿತಿ ನೀಡಿದರೂ ಇಲಾಖೆಯ ಅಧಿಕಾರಿಗಳು ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಬಾರದೇ ರಾತ್ರಿ 11 ಗಂಟೆಗೆ ಸ್ಥಳಕ್ಕೆ ಬಂದಿದ್ದನ್ನು ಕಂಡು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ದಿನಗೂಲಿ ನೌಕರನಾಗಿರುವ ಮೃತರ ಕುಟುಂಬಕ್ಕೆ ಇಲಾಖೆಯಿಂದ ಪರಿಹಾರ ಒದಗಿಸಿ ಅವರ ಕುಟುಂಬದಲ್ಲಿ ಯಾರಿಗಾದರೂ ಒಬ್ಬರಿಗೆ ಕೆಲಸ ಒದಗಿಸಿಕೊಡಿ ಎಂದು ಆಗ್ರಹಿಸಿದರು. ಆದರೆ, ಅಧಿಕಾರಿಗಳು ಸರಿಯಾಗಿ ಸ್ಪಂದಿಸದ ಕಾರಣ ಸೋಮವಾರ ಮೃತ ದೇಹವನ್ನು ಟ್ರ್ಯಾಕ್ಟರ್‌ನಲ್ಲಿ ಹಾಕಿಕೊಂಡು ಬಂದು ವಡಗೇರಾ- ಯಾದಗಿರಿ ಮುಖ್ಯ ರಸ್ತೆಯ ಮೇಲೆ ಪ್ರತಿಭಟನೆ ನಡೆಸಿದಾಗ ಆಗ ಅರಣ್ಯ ಇಲಾಖೆಯ ಅಧಿಕಾರಿಗಳು ಮೃತ ಕುಟುಂಬಸ್ಥರಿಗೆ ಪರಿಹಾರ ಕೊಡುವ ಭರವಸೆ ನೀಡಿದಾಗ ಪ್ರತಿಭಟನೆ ಹಿಂದೆ ಪಡೆಯಲಾಯಿತು.

ಈ ಕುರಿತು ವಡಗೇರಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.