ADVERTISEMENT

‘ದೊಡ್ಡಿಗಳಿಗೆ ಸೌಕರ್ಯ ಒದಗಿಸಿ’

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2022, 2:09 IST
Last Updated 2 ಏಪ್ರಿಲ್ 2022, 2:09 IST

ಕಕ್ಕೇರಾ: ‘ಪುರಸಭೆ ವ್ಯಾಪ್ತಿಯ ನಿಂಗಾಪೂರ ಗ್ರಾಮದ ಸುತ್ತಮುತ್ತಲಿನ ದೊಡ್ಡಿಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಕುಡಿಯುವ ನೀರು, ಪಡಿತರ ಒದಗಿಸಬೇಕು. ರಸ್ತೆ ನಿರ್ಮಿಸಬೇಕು’ ಎಂದು ಜೆಡಿಎಸ್‌ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಉಸ್ತಾದ ವಜಾಹತ್ ಹುಸೇನ್ ಜಿಲ್ಲಾಧಿಕಾರಿಯನ್ನು ಆಗ್ರಹಿಸಿದ್ದಾರೆ.

ಪುರಸಭೆಯ 22ನೇ ವಾರ್ಡ್‌ನ ನಿಂಗಾಪೂರ ವ್ಯಾಪ್ತಿಗೆ ಒಳಪಡುವ ಮಲಕೋಜೇರದೊಡ್ಡಿ, ಪುಟ್ಟೇರದೊಡ್ಡಿ ಹಾಗೂ ದಳಾರದೊಡ್ಡಿ ಸೇರಿದಂತೆ ಅನೇಕ ದೊಡ್ಡಿಗಳಲ್ಲಿ ಸುಮಾರು 2 ಸಾವಿರ ಜನಸಂಖ್ಯೆ ಇದೆ. ಇಲ್ಲಿಯ ಜನರು ಬಿಸಿಲು, ಮಳೆ ಎನ್ನದೇ ಸುಮಾರು ಹತ್ತಾರು ಕಿ.ಮೀ ನಡೆದುಕೊಂಡು ಕಕ್ಕೇರಾ ಪಟ್ಟಣಕ್ಕೆ ಹೋಗಿ ಪಡಿತರ ಪಡೆಯಬೇಕಾಗಿದೆ. ನಿಂಗಾಪುರ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಪ್ರಾರಂಭಿಸಬೇಕು. ಶಾಲೆ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ. ಹದಗೆಟ್ಟ ಕಕ್ಕೇರಾ-ಹುಣಸಗಿ ರಸ್ತೆ ದುರಸ್ತಿ ಮಾಡಬೇಕು. ನಿಧಾನಗತಿಯಲ್ಲಿ ಸಾಗಿರುವ ಕಕ್ಕೇರಾ-ತಿಂಥಣಿ ರಸ್ತೆಯನ್ನು ಬೇಗ ಮುಗಿಸಬೇಕು. ಮಲಕೋಜೇರದೊಡ್ಡಿ ಹಾಗೂ ಸುತ್ತಮುತ್ತಲಿನ ಜನರು ಕುಡಿಯಲು 1 ಕಿ.ಮೀ ದೂರದ ಕೊಳವೆಬಾವಿ ನೀರನ್ನು ಆಶ್ರಯಿಸುವಂತಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಇಲ್ಲಿಯ ಜನರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು. ನಿವಾಸಿಗಳಾದ ಜೆಟ್ಟೆಪ್ಪ ದಳಾ, ನಂದಣ್ಣ, ಪರಮಣ್ಣ ದಳಾ, ಸೋಮಣ್ಣ, ಹಣಮಂತ ಹಾಗೂ ಹುಲಗಪ್ಪ ಮಲಕೋಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT