ADVERTISEMENT

ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯ: ‘ರಜತ’ ಸಂಭ್ರಮಕ್ಕೆ ಮತ್ತಷ್ಟು ಮೆರುಗು

ಭೀಮರಾಯನಗುಡಿ: ಕೃಷಿ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಆರಂಭ

ಟಿ.ನಾಗೇಂದ್ರ
Published 29 ಜನವರಿ 2026, 8:10 IST
Last Updated 29 ಜನವರಿ 2026, 8:10 IST
ಶಹಾಪುರ ತಾಲ್ಲೂಕಿನ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಕಟ್ಟಡ
ಶಹಾಪುರ ತಾಲ್ಲೂಕಿನ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಕಟ್ಟಡ   

ಶಹಾಪುರ: 2025-26ನೇ ಸಾಲಿನಿಂದ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಆರಂಭಿಸಲು ರಾಯಚೂರು ಕೃಷಿ ವಿಶ್ವವಿದ್ಯಾಲಯ ಹಸಿರು ನಿಶಾನೆ ತೋರಿಸಿದೆ. ರಜತ ಮಹೋತ್ಸವ ಸಂಭ್ರಮದ ಹೊಸ್ತಿಲಿನಲ್ಲಿ ಕಾಲೇಜಿಗೆ ಇನ್ನಷ್ಟು ಮೆರುಗು ಬಂದಿದೆ.

‘ಪ್ರಸಕ್ತ ಸಾಲಿನಿಂದ ಸ್ನಾತಕೋತ್ತರ ವಿಭಾಗದ ಬೇಸಾಯ ಶಾಸ್ತ್ರ ವಿಭಾಗ ಹಾಗೂ ಅನುವಂಶಿಕತೆ ಹಾಗೂ ತಳಿ ಅಭಿವೃದ್ಧಿ ವಿಭಾಗ ಆರಂಭಗೊಂಡಿದೆ. ರಾಯಚೂರು ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಏಳು ಮಹಾವಿದ್ಯಾಲಯಗಳು ಬರುತ್ತವೆ. ಅದರಲ್ಲಿ ನಮ್ಮ ಭೀಮರಾಯನಗುಡಿ ಮಹಾವಿದ್ಯಾಲಯದ ಆಯ್ಕೆ ಮಾಡಿರುವುದಕ್ಕೆ ಸಂತಸ ತಂದಿದೆ’ ಎಂದು ಡೀನ್ ಶಾಮರಾವ ಜಹಗೀರದಾರ ತಿಳಿಸಿದರು.

‘ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಮಲ್ಲಿಕಾರ್ಜುನ ವನದುರ್ಗ ಇದೇ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾರೆ. ಅವರ ಪರಿಶ್ರಮ, ಹೆಚ್ಚಿನ ಮುತುವರ್ಜಿಯಿಂದ ಸ್ನಾತಕೋತ್ತರ ಪದವಿ ಕೋರ್ಸ್ ಆರಂಭಿಸಲು ಸಹಕಾರಿಯಾಗಿದೆ’ ಎಂದರು.

ADVERTISEMENT

‘ಸ್ನಾತಕೋತ್ತರ ಪದವಿ ಕೋರ್ಸ್‌ಗೆ ಬೇಕಾಗುವ ಅಗತ್ಯ ಸೌಲಭ್ಯಗಳು ಹಾಗೂ ಬೋಧಕರು ಇದ್ದಾರೆ. ಅತ್ಯುತ್ತಮ ಗ್ರಂಥಾಲಯವು ಇದೆ. ಕಾಲೇಜಿನ ಅಧೀನದಲ್ಲಿ 380 ಎಕರೆ ಜಮೀನು ಇದೆ. ನೀರಾವರಿ ಸೌಲಭ್ಯವಿದ್ದು ಹೆಚ್ಚಿನ ಅನುಕೂಲವಾಗಿದೆ’ ಎಂದರು.

‘ನಾನು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯನಾಗಿ ನೇಮಕಗೊಂಡ ಬಳಿಕ ನನ್ನ ಕಾಲೇಜಿಗೆ ಹೊಸ ಕೊಡುಗೆಯಾಗಿ ನೀಡಬೇಕು ಎಂಬ ಛಲತೊಟ್ಟು ಕುಲಪತಿ  ಎಂ. ಹನುಮಂತಪ್ಪ ಅವರ ಸೂಕ್ತ ಸಹಕಾರದಿಂದ ಕೊನೆಗೆ ಸ್ನಾತಕೋತ್ತರ ಪದವಿ ಕೋರ್ಸ್ ಆರಂಭಿಸಲು ನೆರವಿಗೆ ಬಂದಿತು. ಇದರಿಂದ ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ’ ಎಂದು ಮಲ್ಲಿಕಾರ್ಜುನ ವನದುರ್ಗ ತಿಳಿಸಿದರು.

‘2001ರಲ್ಲಿ ಧಾರವಾಡ ಅಡಿಯಲ್ಲಿ ಮಹಾವಿದ್ಯಾಲಯ ಆರಂಭಗೊಂಡಿತು. ಇಲ್ಲಿಯತನಕ ವಿವಿಧ ಕೋರ್ಸ್ ಒಳಗೊಂಡು 1,452 ವಿದ್ಯಾರ್ಥಿಗಳು ಅಧ್ಯಯನ ಮಾಡಿ ಹೊರ ಬಂದಿದ್ದಾರೆ. ಇಲ್ಲಿನ ಪ್ರದೇಶ ನೀರಾವರಿಯಾಗಿದ್ದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ತರುವ ಬೆಳೆ, ಕೃಷಿಯನ್ನು ವೈಜ್ಞಾನಿಕವಾಗಿ ಬೆಳೆಸುವಂತೆ ಪ್ರೇರಣೆ ನೀಡುವುದರ ಜತೆಯಲ್ಲಿ ರೈತರ ಸಮಸ್ಯೆ ಹಾಗೂ ಸವಾಲುಗಳಿಗೆ ಕೃಷಿ ವಿಜ್ಞಾನಿಗಳು ಸೂಕ್ತ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ’ ಎಂದು ಸ್ಮರಿಸುತ್ತಾರೆ ರೈತ ಶರಣಪ್ಪ.

ಶ್ಯಾಮರಾವ್ ಜಹಗಿರದಾರ
ಮಲ್ಲಿಕಾರ್ಜುನ ವನದುರ್ಗ
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಸ್ನಾತಕೋತ್ತರ ಪದವಿ ಕೋರ್ಸ್ ಆರಂಭಿಸಿದೆ. ಮೊದಲು ಸೆಮಿಸ್ಟರ್‌ನ ವಿದ್ಯಾರ್ಥಿಗಳು ರಾಯಚೂರಿನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಮೇ ತಿಂಗಳಿಂದ ವಿದ್ಯಾರ್ಥಿಗಳು ನಮ್ಮ ಬಳಿ ಬರುತ್ತಾರೆ. ತಲಾ ನಾಲ್ಕು ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅವಕಾಶ ಕಲ್ಪಿಸಿದೆಶ್ಯಾಮರಾವ್ ಜಹಗಿರದಾರ ಕಾಲೇಜಿನ ಡೀನ್ ಕೃಷಿಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉನ್ನತಿ ಸಾಧಿಸಲಿ ಎಂಬ ಸದುದ್ದೇಶದಿಂದ ಅಲ್ಲದೆ ರೈತರಿಗೆ ಹೆಚ್ಚಿನ ಕೃಷಿ ತಾಂತ್ರಿಕತೆಯ ಲಾಭ ದೊರಕಲಿ ಎಂಬ ಕಾಳಜಿಯಿಂದ ಸ್ನಾತಕೋತ್ತರ ಪದವಿ ಕೋರ್ಸ್ ಆರಂಭಿಸಿದೆ
ಮಲ್ಲಿಕಾರ್ಜುನ ವನದುರ್ಗ ಆಡಳಿತ ಮಂಡಳಿ ಸದಸ್ಯ ಕೃಷಿ ವಿಶ್ವವಿದ್ಯಾಲಯ ರಾಯಚೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.