ಯಾದಗಿರಿ: ನೈಸರ್ಗಿಕ ಸಂಪತ್ತು ಸಂರಕ್ಷಣಾ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು ಎಂದು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಮುಖ್ಯ ಎಂಜಿನಿಯರ್ ಸಿ.ಕೆ.ಮಲ್ಲಪ್ಪ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ನರೇಗಾ ಯೋಜನೆಯಡಿ ಅನುಷ್ಠಾನ ಮಾಡಿದ ಮಿಷನ್ ಅಮೃತ್ ಸರೋವರ ಕಾರ್ಯಕ್ರಮದ ಕಾಮಗಾರಿಗಳು ಹಾಗೂ ನರೇಗಾ ಯೋಜನೆಯಲ್ಲಿ ನಿರ್ವಹಣೆ ಮಾಡಿದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಜನರು ಕುಡಿಯುವ ನೀರಿನ ಜಲಮೂಲಗಳ ಸಂರಕ್ಷಣೆ ಹಾಗೂ ಪುನಶ್ಚೇತನ ಮಾಡುವ ಹಿನ್ನಲೆಯಲ್ಲಿ ನರೇಗಾ ಯೋಜನೆಯ ಮಿಷನ್ ಅಮೃತ್ ಸರೋವರ ಕಾರ್ಯಕ್ರಮದಡಿ ಅನುಷ್ಠಾನ ಮಾಡುವ ಕಾಮಗಾರಿಗಳಲ್ಲಿ ಹೆಚ್ಚು ಆದ್ಯತೆ ನೀಡಬೇಕು ಎಂದರು.
ನರೇಗಾ ಕಾಮಗಾರಿಗಳನ್ನು ಅನುಷ್ಠಾನ ಮಾಡುವಾಗ ಸಂಬಂಧಿಸಿದ ಅಧಿಕಾರಿಗಳು, ತಾಂತ್ರಿಕ ಸಹಾಯಕರು ನರೇಗಾ ಯೋಜನೆಯ ನಿಯಮನುಸಾರ ಸೂಕ್ತ ಕ್ರಿಯಾ ಯೋಜನೆ ತಯಾರಿಸಿ, ತಮ್ಮ ತಾಂತ್ರಿಕ ಪ್ರತಿಭೆಯಿಂದ ಬಹುಕಾಲ ಬಾಳಿಕೆ ಬರುವ ಕಾಮಗಾರಿಗಳಲ್ಲಿ ಹೆಚ್ಚಿನ ಗುಣಮಟ್ಟ ಕಾಯ್ದುಕೊಂಡು, ಸಾರ್ವಜನಿಕ ಆಸ್ತಿ ಸೃಜನೆ ಮಾಡಬೇಕು ಎಂದು ಹೇಳಿದರು.
ಯಾದಗಿರಿ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಅರಕೇರಾ ಕೆ. ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನರೇಗಾ ಯೋಜನೆಯ ಸಮಗ್ರ ಶಾಲಾ ಅಭಿವೃದ್ಧಿಯಡಿ ಕೈಗೊಂಡ ಆಟದ ಮೈದಾನ, ಶಾಲಾ ಮಕ್ಕಳ ಭೋಜನಾಲಯ, ರನ್ನಿಂಗ್ ಟ್ರ್ಯಾಕ್, ಮಕ್ಕಳ ಸಾಂಸ್ಕೃತಿಕ ಚಟುವಟಿಕೆಯ ಬಯಲು ರಂಗಮಂದಿರ ಹಾಗೂ ವರ್ಕನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮಿಷನ್ ಅಮೃತ್ ಸರೋವರದಡಿ ನಿರ್ಮಿಸಿದ ಅಮೃತ ಕೆರೆ ವೀಕ್ಷಣೆ ಮಾಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಅಮರೇಶ ಆರ್. ನಾಯ್ಕ್ ಸೇರಿದಂತೆ ವಿವಿಧ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.