ಯಾದಗಿರಿ: ಕೊರೊನಾ ನಿಯಂತ್ರಣಕ್ಕೆ ಖಾಸಗಿ ಆಸ್ಪತ್ರೆ, ಮೆಡಿಕಲ್ ಹಾಗೂ ಪ್ರಯೋಗಾಲಯಗಳ ಪಾತ್ರ ಮುಖ್ಯ. ಹೀಗಾಗಿ ಖಾಸಗಿ ವೈದ್ಯರು ತಮ್ಮ ಆಸ್ಪತ್ರೆಗಳಿಗೆ ಭೇಟಿ ನೀಡುವ ರೋಗಿಗಳಲ್ಲಿ ಐಎಲ್ಐ/ ಸ್ಯಾರಿ ಮತ್ತು ಕೋವಿಡ್ ರೋಗ ಲಕ್ಷಣ ಕಂಡುಬರುವ ರೋಗಿಗಳ ದತ್ತಾಂಶವನ್ನು ಕೆಪಿಎಂಇ ವೆಬ್ ಪೋರ್ಟಲ್ನಲ್ಲಿ ನಮೂದಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್., ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಐಎಲ್ಐ/ ಸ್ಯಾರಿ ರೋಗ/ ಕೋವಿಡ್ ಲಕ್ಷಣ ಕಂಡುಬರುವ ರೋಗಿಗಳ ದತ್ತಾಂಶ ಹಾಗೂ ಗಂಟಲು ಮಾದರಿ ದ್ರವ ಪರೀಕ್ಷೆ ಮಾಡಿಸಿಕೊಳ್ಳುವಂತೆ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಶಿಫಾರಸು ಮಾಡುವ ಸಂಬಂಧ ನಡೆದ ಜಿಲ್ಲಾಮಟ್ಟದ ಖಾಸಗಿ ವೈದ್ಯರ ಸಭೆಯಲ್ಲಿ ಅವರು ಮಾತನಾಡಿದರು.
ಕೊರೊನಾ ಸೋಂಕಿತ ವ್ಯಕ್ತಿಯ ಮೊಬೈಲ್ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಬೇಕು. ಸಂಪರ್ಕ ಪತ್ತೆಗೆ ಸಂಬಂಧಿಸಿದ ಮಾಹಿತಿಯನ್ನು ಸಂಬಂಧಪಟ್ಟ ಆ್ಯಪ್ ಅಥವಾ ಪೋರ್ಟಲ್ಗಳಲ್ಲಿ ಸಕಾಲದಲ್ಲಿ ಅಪ್ಡೇಟ್ ಮಾಡಬೇಕು. ಪ್ರಕರಣಗಳನ್ನು ತ್ವರಿತಗತಿಯಲ್ಲಿ ಪತ್ತೆ ಹಚ್ಚಲು ಹಾಗೂ ಕೊರೊನಾ ಸೋಂಕಿತ ಸಂಶಯಾಸ್ಪದ ರೋಗಿಗಳನ್ನು ಗಂಟಲು ಮಾದರಿ ದ್ರವ ಪರೀಕ್ಷೆ ಮಾಡಿಸಿಕೊಳ್ಳುವಂತೆ ಶಿಫಾರಸು ಮಾಡುವಂತೆ ಖಾಸಗಿ ವೈದ್ಯರಲ್ಲಿ ಮನವಿ ಮಾಡಿದರು.
ಸಂಚಾರಿ ಮೊಬೈಲ್ ಸ್ವಾಬ್ಟೆಸ್ಟಿಂಗ್ ತಂಡದ ಕೆಲಸದ ಅವಧಿಯನ್ನು ಹೆಚ್ಚಿಸುವಂತೆ ತಿಳಿಸಿದ ಅವರು, ಪರೀಕ್ಷಾ ತಂಡವು ಆರೋಗ್ಯ ಇಲಾಖೆ ಮಾರ್ಗಸೂಚಿಗಳ ಪ್ರಕಾರ ತೀವ್ರವಾದ ಕೋವಿಡ್-19 ಪರೀಕ್ಷೆ ನಡೆಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಭಗವಂತ ಅನವಾರ, ಡಾ. ಸೂರ್ಯಪ್ರಕಾಶ ಎಂ.ಕಂದಕೂರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಾರಾಯಣಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಸಾಜೀದ್, ಡಾ. ವೀರಬಸವಂತರಡ್ಡಿ, ಡಾ. ನೀಲಮ್ಮ, ಡಾ. ವಿರೇಶ ಜಾಕಾ ಸೇರಿದಂತೆ ಖಾಸಗಿ ವೈದ್ಯರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.