ಯಾದಗಿರಿ: ದಲಿತ ವಿರೋಧಿ, ಜಾತಿವಾದಿ ಯಾದಗಿರಿ ಉಪವಿಭಾಗ ಡಿವೈಎಸ್ಪಿ ಮತ್ತು ಹುಣಸಗಿ ಪಿಎಸ್ಐ ಅವರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಈ ವೇಳೆ ದಸಂಸ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ಸೈದಾಪುರ ಠಾಣಾ ವ್ಯಾಪ್ತಿಯಲ್ಲಿ ಬರುವ ಗೌಡಗೇರಾ ಗ್ರಾಮದ ದಲಿತರ ಒಂದೇ ಕುಟುಂಬದ ಇತರೆ ಗ್ರಾಮದ ಸಂಬಂಧಿಗಳ ಮೇಲೆ ತಮ್ಮ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದನ್ನು ವಾಪಾಸ್ ಪಡೆಯಬೇಕು. ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕಾಮನಟಗಿ ಗ್ರಾಮದ ಹಲ್ಲೆಗೊಳಗಾದ ಮಹಿಳೆಯ ಮೇಲೆ ಇತರರ ಮೇಲೆ ಸುಳ್ಳು ಕೇಸನ್ನು ವಾಪಾಸ್ ಪಡೆದು ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆಗಳು ಈಡೇರಿಸಬೇಕೆಂದು ಆಗ್ರಹಿಸಿದರು.
ಹೊನಗೇರಾ ಗ್ರಾಮದಲ್ಲಿ ಮೊಹರಂ ಹಬ್ಬದ ಸಮಯದಲ್ಲಿ ದಲಿತರಿಗೆ, ಮೇಲ್ವರ್ಗದವರಿಗೆ ಗಲಾಟೆಯಾದ ಮೇಲೆ ದಲಿತರಿಗೆ ನೀರು ಕೊಟ್ಟರೆ ₹10 ಸಾವಿರ ದಂಡ ಹಾಕಲಾಗುವುದೆಂದು ಅಲ್ಲಿಯ ಜನರು ಪೊಲೀಸರ ಎದುರಲ್ಲಿಯೇ ಅಂದಿರುವುದು ಟಿವಿ ಮತ್ತು ಪತ್ರಿಕೆಗಳಲ್ಲಿ ಬಂದಿತ್ತು. ಅಲ್ಲಿ ಕೇವಲ ಶಾಂತಿ ಸಭೆ ಮಾಡಿ ಕೇಸನ್ನು ಸುಳ್ಳು ಮಾಡುವಂತಹ ಸಂಭವ ನಡೆದಿರುತ್ತದೆ. ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕೊಂಕಲ್ ಗ್ರಾಮದಲ್ಲಿಯೂ ಕೂಡ ಮೊಹರಂ ಹಬ್ಬದ ಸಮಯದಲ್ಲಿ ದಲಿತರ ಮೇಲ್ವರ್ಗದವರ ನಡುವೆ ಗಲಾಟೆ ನಡೆದು ಕೇಸ್ ಕೌಂಟರ್ ಕೇಸ್ ಆಗಿರುತ್ತವೆ. ಈ ಕೇಸಿನಲ್ಲಿಯೂ ಸಹ ದಲಿತರು ಮಾಡಿದ ಕೇಸನ್ನು ಸುಳ್ಳು ಮಾಡುವ ಸಂಚು ರೂಪಿಸಿರುತ್ತಾರೆ ಆರೋಪಿಸಿದರು.
ತಕ್ಷಣ ಬೇಡಿಕೆ ಈಡೇರಿಸಬೇಕು, ಬೇಡಿಕೆಗಳು ಈಡೇರಿಕೆಗೆ ವಿಳಂಬ ಮಾಡಿದಲ್ಲಿ ಜನವರಿ 24ರಿಂದ ನ್ಯಾಯ ಸಿಗುವವರೆಗೆ ಜಿಲ್ಲಾಧಿಕಾರಿ ಕಚೇರಿ ಎದುರಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಿಪ್ಪಣ್ಣ ಶೆಳ್ಳಗಿ, ಮಲ್ಲಿಕಾರ್ಜುನ ಮಳ್ಳಳ್ಳಿ, ಮಲ್ಲಿಕಾರ್ಜುನ ಉಕ್ಕಿನಾಳ, ಭೀಮಣ್ಣ ಹುಣಸಗಿ, ಶರಣಪ್ಪ ಉಳ್ಳೆಸುಗೂರು, ಮರಲಿಂಗಪ್ಪ ನಟೇಕಾರ್, ಮುತ್ತರಾಜ ಹುಲಿಕೆರಿ, ಶೇಖಪ್ಪ ಭಂಡಾರಿ, ಬಸಪ್ಪ, ಮಹೇಶ, ಬಸವರಾಜ ಶೇಳ್ಳಗಿ, ಜಟ್ಟೆಪ್ಪ ನಾಗರಾಳ, ಭಿಮಣ್ಣ ಕ್ಯಾತನಾಳ, ಗೌತಮ ಕ್ರಾಂತಿ, ಬಸವರಾಜ ಕಲ್ಲದೇವನಳ್ಳಿ, ಯಲ್ಲಾಲಿಂಗ, ಮಾನಪ್ಪ ಶೇಳ್ಳಗಿ, ಮೆಹೆಬೂಬಸಾಬ ವಡಗೇರಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.